ಇ-ಲಾಬಿ : ಗ್ರಾಮೀಣ ಗ್ರಾಹಕರಿಗೆ ವರದಾನವಾಗಿದೆ.

Spread the love

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶನಿವಾರ ಕಾರ್ಪೋರೇಶನ್ ಬ್ಯಾಂಕ್ ವತಿಯಿಂದ ಪ್ರಾರಂಭಿಸಲಾದ ಇ-ಲಾಬಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿ ಮಾತನಾಡಿದರು. ಕಾರ್ಪೋರೇಶನ್ ಬ್ಯಾಂಕ್‍ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಬನ್ಸಾಲ್, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಇಂದು ವ್ಯವಹಾರದ ವೇಗ ಮತ್ತು ತೀವ್ರತೆ ಹೆಚ್ಚಾಗಿದ್ದು ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಳವಡಿಸಲಾದ ಇ-ಲಾಬಿ ಸೌಲಭ್ಯ ಗ್ರಾಮೀಣ ಗ್ರಾಹಕರಿಗೆ ವರದಾನವಾಗಿದೆ. ಯಾವುದೇ ಅಪಾಯ ಹಾಗೂ ಅಡಚಣೆ ಇಲ್ಲದೆ ಸುರಕ್ಷಿತವಾಗಿ ಕ್ಷಣ ಮಾತ್ರದಲ್ಲಿ ಗ್ರಾಹಕರು ಇಲ್ಲಿ ಬ್ಯಾಂಕಿಂಗ್ ಸೇವೆ ಪಡೆಯಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದಲ್ಲಿ ಶನಿವಾರ ಕಾರ್ಪೋರೇಶನ್ ಬ್ಯಾಂಕ್ ವತಿಯಿಂದ ಪ್ರಾರಂಭಿಸಲಾದ ಇ-ಲಾಬಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನಕ್ಷರಸ್ಥರು ಕೂಡಾ ಇದನ್ನು ಸುಲಭದಲ್ಲಿ ಬಳಸಬಹುದು. ಅಗತ್ಯಕ್ಕೆ ಬೇಕಾದಷ್ಟು ಮಾತ್ರ ಹಣ ತೆಗೆದು ಹೆಚ್ಚಿನ ಉಳಿತಾಯವನ್ನು ಖಾತೆಗೆ ಜಮಾ ಮಾಡಬಹುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇ-ಲಾಬಿ ಸೌಲಬ್ಯದ ಬಗ್ಗೆ ಹೆಚ್ಚಿನ ಮಾಹಿತ ನೀಡಿ ಪ್ರಚಾರ ಮಾಡಲಾಗುವುದು ಎಂದು ಅವರು ಹೇಳಿದರು.

ರೈತರ ಆತ್ಮಹತ್ಯೆಗೆ ಮೀಟರ್ ಬಡ್ಡಿಯೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೆಗ್ಗಡೆಯವರು ಇ-ಲಾಬಿ ಬಳಸಿ ಸುಗಮ ವ್ಯವಹಾರ ನಡೆಸಬೇಕೆಂದು ಸಲಹೆ ನೀಡಿದರು.

ಕಾರ್ಪೋರೇಶನ್ ಬ್ಯಾಂಕ್‍ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಬನ್ಸಾಲ್ ಮಾತನಾಡಿ, ಕರ್ನಾಟಕದಲ್ಲಿ ಗ್ರಾಹಕರು ವ್ಯಾಂಕಿಂಗ್‍ನಲ್ಲಿ ಪರಿಣತರಾಗಿದ್ದು ಉಳಿತಾಯ ಪ್ರವೃತ್ತಿ ಹೊಂದಿದ್ದಾರೆ. ಕರ್ನಾಟಕದಲ್ಲಿ ಕಾರ್ಪೋರೇಶನ್ ಬ್ಯಾಂಕ್‍ನ ಹೆಚ್ಚು ಶಾಖೆಗಳನ್ನು ತೆರೆಯಲಾಗುವುದು. ಬ್ಯಾಂಜ್ ವರ್ಷಕ್ಕೆ 5 ಕೋಟಿ 40 ಲಕ್ಷ ರೂ ನಿವ್ವಳ ಲಾಭ ಗಳಿಸುತ್ತದೆ. ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಜನರಿಗೆ ಅನೇಕ ಹೊಸ ಯೋಜನೆಗಳನ್ನು ಕಡಿಮೆ ಬಡ್ಡಿದರದಲ್ಲಿ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಕಾರ್ಪೋರೇಶನ್ ಬ್ಯಾಂಕ್‍ನ ಡಿ.ಜಿ.ಎಮ್. ಗಣೇಶ್ ಎಮ್.ಬಿ. ಸ್ವಾಗತಿಸದರು. ಬ್ಯಾಂಕ್‍ನ ಉಜಿರೆ ಶಾಖೆಯ ಮುಖ್ಯಸ್ಥ ಗುರುರಾಜ ಆರ್. ಕೋಲಾಪುರ್ ಧನ್ಯವಾದವಿತ್ತರು.

ಇ-ಲಾಬಿ:  ಬ್ಯಾಂಕ್ ಶಾಖೆಯ ಪ್ರತಿರೂಪವೇ ಇ-ಲಾಬಿ ಆಗಿದ್ದು ಇಲ್ಲಿ ನಾಲ್ಕು ಯಂತ್ರಗಳ ಮೂಲಕ ದಿನದ 24ಗಂಟೆಯೂ ಗ್ರಾಹಕರಿಗೆ ಬ್ಯಾಂಕ್ ಸೇವೆ ನೀಡಲಾಗುತ್ತದೆ. ರೂ. 50 ಸಾವಿರದ ತನಕ ಹಣವನ್ನು ಖಾತೆಗೆ ಜಮಾ ಮಾಡಬಹುದು. ಬೇಕಾದಾಗ ಖಾತೆಯಿಂದ ಹಣ ಪಡೆಯಬಹುದು. ಬೇರೆ ಬ್ಯಾಂಕಿನ ಚೆಕ್‍ನ್ನು ಖಾತೆಗೆ ಜಮಾ ಮಾಡಬಹುದು. ಸ್ವ-ಸಹಾಯ ಪದ್ಧತಿಯಲ್ಲಿ ಪಾಸ್ ಬುಕ್ ಪಡೆಯಬಹುದು.

ಮಂಗಳೂರು ವಲಯದಲ್ಲಿ ಕಾರ್ಪೋರೇಶನ್ ಬ್ಯಾಂಕ್ ಪ್ರಾಯೋಜಿತ 9 ಇ-ಲಾಬಿ ಘಟಕಗಳಿವೆ.


Spread the love