ಉಡುಪಿ: ಅಕ್ರಮ ಕಟ್ಟಡ ನಿರ್ಮಾಣ ಸರಕಾರದಿಂದ ಮಣಿಪಾಲ ವಿವಿಗೆ 1123 ಕೋಟಿ ರೂ. ದಂಡದ ಶಾಕ್

Spread the love

ಉಡುಪಿ: ಶ್ಯೆಕ್ಷಣಿಕ ಉದ್ದೇಶಕ್ಕಾಗಿ ನೀಡಿದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದಕ್ಕೆ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ಮೂಲಕ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ 1123 ಕೋಟಿ ರೂ ಗಳ ದಂಡ ವಿಧಿಸಿ ನೋಟಿಸ್ ಜಾರಿ ಮಾಡಿದೆ.

manipal information - photographs section

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ ಆರ್ ವಿಶಾಲ್ ಮಣಿಪಾಲ ವಿಶ್ವವಿದ್ಯಾನಿಲಯವು 109 ಎಕರೆ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆದು ಅನ್ಯ ಉದ್ದೇಶಕ್ಕೆ ಬಳಸಿದ್ದು, ಜಿಲ್ಲಾಡಳಿತದಿಂದ 1969 ರ ಕರ್ನಾಟಕ ಗ್ರ್ಯಾಂಟ್ ಕಾಯಿದೆ ಹಾಗೂ 1969 ರ ಹಿಂದಿನ ಮೈಸೂರು ಲ್ಯಾಂಡ್ ಗ್ರ್ಯಾಂಟ್ ಕಾಯಿದೆ ಪ್ರಕಾರ ವಿಶ್ವವಿದ್ಯಾನಿಲಯಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. 30 ದಿನಗಳ ಒಳಗೆ ದಂಡವನ್ನು ಕಟ್ಟಲು ಅಥವಾ ನೋಟಿಸಿಗೆ  ಉತ್ತರ ಕೋಡಲ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸದರು.

ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಶಿಕ್ಷಣದ ಉದ್ದೇಶದಿಂದ 269 ಎಕರೆ ಭೂಮಿ ದರ್ಕಾಸು ಆಗಿದ್ದು ಅದರಲ್ಲಿ 50-52 ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ವಿಶ್ವವಿದ್ಯಾನಿಲಯ ಬಳಸಿಕೊಂಡಿದೆ.  ಕೆಲ ವರ್ಷಗಳ ಹಿಂದೆ ಸುಮಾರು 102 ಎಕರೆಯಷ್ಟು ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದಕ್ಕೆ ನ್ಯಾಯಾಲಯಕ್ಕೆ ಹೋಗಿದ್ದರೂ ಸುಪ್ರಿಂ ಕೋರ್ಟ್ ವಿವಿ ಪರವಾದ ತೀರ್ಪು ನೀಡಿತ್ತು.

ಪ್ರಸ್ತುತ ಸುಮಾರು 109 ಎಕರೆ ಭೂಮಿಯಲ್ಲಿ ಭಾಗಶಃ ಅಥವ ಪೂರ್ಣವಾಗಿ ಭೂ ಬದಲಾವಣೆ ಮಾಡಲಾಗಿದ್ದು, ಭೂಮಿ ಖರೀದಿಯ ಉದ್ದೇಶವನ್ನು ಬದಲಾಯಿಸಲಾಗಿದೆ.

ವಿಶ್ವವಿದ್ಯಾನಿಲಯ ಭೂ ಬದಲಾವಣೆ ಮಾಡಿರುವ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಆ ಹಿನ್ನಲೆಯಲ್ಲಿ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ವಿವರಣೆ ನೀಡುವಂಥೆ ಪತ್ರ ಬಂದಿತ್ತು. ಈ ಪತ್ರವನ್ನು ಆದರಿಸಿ ಜಿಲ್ಲಾಡಳಿತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದು, ವರದಿಯಲ್ಲಿ ಭೂ ಬದಲಾವಣೆಯಾಗಿರುವ ಕುರಿತು ತಿಳಿಸಲಾಗಿತ್ತು ಆದ್ದರಿಂದ ಸರಕಾರ ವಿಶ್ವವಿದ್ಯಾನಿಲಯಕ್ಕೆ ನೋಟಿಸ್ ಜಾರಿ ಮಾಡಿದೆ. ವಿಶ್ವವಿದ್ಯಾನಿಲಯ ಸೂಕ್ತ ದಾಖಲೆ ಒದಗಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸರಕಾರ ನೀಡಿರುವ ನೋಟಿಸಿನ ವಿರುದ್ದು ವಿವಿಗೆ ಕೋರ್ಟಿಗೆ ಹೋಗಲು ಅವಕಾಶವಿದ್ದು, ಕಾನೂನಿನ ಪ್ರಕಾರ ಯಾವ ಉದ್ದೇಶಕ್ಕೆ ಜಮೀನು ಕೊಡಲಾಗಿದೆಯೋ ಆ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಣಿಪಾಲ ವಿವಿಯ ಅಕ್ರಮ ಕಟ್ಟಡಗಳ ಬಗ್ಗೆ ಉಡುಪಿ ನಗರಸಭೆಯ ಹಲವು ಸಮಾನ್ಯ ಸಭೆಗಳಲ್ಲಿ ವಿಸ್ತೃತ ಚರ್ಚೆ ನಡೆದಿತ್ತು. 1968ರಲ್ಲಿ ಆಟದ ಮೈದಾನ ಮತ್ತು ಸ್ವಿಮ್ಮಿಂಗ್ ಪೂಲ್ ಮಾಡುವ ಉದ್ದೇಶದಿಂದ ಸುಮಾರು 12 ಎಕರೆಯಷ್ಟು ಭೂಮಿಯನ್ನು ಮಣಿಪಾಲ ವಿಶ್ವವಿದ್ಯಾಲಯದವರು ಪಡೆದುಕೊಂಡಿತ್ತು. ಸುಮಾರು ನಾಲ್ಕು ವರ್ಷಗಳ ಹಿಂದೆ ಆ ಭೂಮಿಯಲ್ಲಿ ಎನ್‍ಆರ್‍ಐ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರದ ತಾಂತ್ರಿಕ ಒಪ್ಪಿಗೆ ಪಡೆಯಲಾಗಿತ್ತು. ಆದರೆ ನಗರಸಭೆ ಕಟ್ಟಡ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಪಡೆಯದೆ ಹಾಗೂ ಡೋರ್ ನಂಬರ್ ಪಡೆಯದೆ ಮೆಸ್ಕಾಂನಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕವನ್ನೂ ಸಂಸ್ಥೆ ಪಡೆದಿದೆ ಎಂದು ನಗರಸಭೆ ಅಧ್ಯಕ್ಷ ಪಿ. ಯುವರಾಜ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವ ಕುರಿತಂತೆ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ, ನಗರಸಭೆಯಿಂದ ಎನ್‍ಓಸಿ ಪಡೆಯದೆ ವಿದ್ಯುತ್ ಸಂಪರ್ಕ ನೀಡಿರುವುದರ ಬಗ್ಗೆ ಪ್ರಶ್ನಿಸಲಾಗಿದೆ. ಮಂಗಳೂರಿನ ಮೆಸ್ಕಾಂನ ಮೇಲಧಿಕಾರಿಗಳಿಗೆ ಹಾಗೂ ವಿಜಿಲೆನ್ಸ್ ವಿಭಾಗಕ್ಕೆ ಈ ಬಗ್ಗೆ ದೂರು ನೀಡಲಾಗಿದ್ದು, ಅವರು ತನಿಖೆ ನಡೆಸಿ ವರದಿ ನೀಡಲಿದ್ದಾರೆ. ತಕ್ಷಣದಿಂದ ವಿದ್ಯುತ ಸಂಪರ್ಕ ಕಡಿತಗೊಳಿಸವಂತೆಯೂ ಮೆಸ್ಕಾಂಗೆ ಸೂಚಿಸಲಾಗಿದೆ. ಮಣಿಪಾಲದ ಅಕ್ರಮದ ಬಗ್ಗೆ ವಿವರವಾದ ಪತ್ರ ಸರ್ಕಾರಕ್ಕೆ ಬರೆಯಲಾಗಿದೆ. ನಿಯಮ ಮೀರಿ ಎನ್‍ಆರ್‍ಐ ಹಾಸ್ಟೆಲ್ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ನಗರಸಭೆಯಿಂದ ಕಟ್ಟಡ ಕಂಪ್ಲೀಷನ್ ಹಾಗೂ ಎನ್‍ಓಸಿ ಪತ್ರ ನೀಡುವುದನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.

ಈ ಕುರಿತು ಸ್ಪಷ್ಟನೆ ನೀಡಿರುವ ಮಣಿಪಾಲ ವಿವಿ ರಿಜಿಸ್ಟ್ರಾರ್ ಜಿ ಕೆ ಪ್ರಭು ಅವರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಉದ್ದೇಶ ಬಿಟ್ಟು ಬೇರೆ ಯಾವುದೇ ಅನ್ಯ ಉದ್ದೇಶಗಳಿಗೆ ಭೂಮಿಯನ್ನು ಉಪಯೋಗಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ಹೊಂದಿರುವ ಕಟ್ಟಡಗಳು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ರಚಿಸಲಾಗಿದ್ದು, ಪ್ರತಿಯೊಂದಕ್ಕೂ ಸಂಬಂಧಪಟ್ಟ ನಗರಸಭೆ ಹಾಗೂ ಕಂದಾಯ ಇಲಾಖೆಗಳಿಂದ ಸೂಕ್ತ ಪರವಾನಿಗೆಗಳನ್ನು ಕೂಡ ಪಡೆಯಲಾಗಿದೆ ಎಂದಿದ್ದಾರೆ.


Spread the love