ಎತ್ತಿನಾ ಹೊಳೆ ಯೋಜನೆ ವಿರೋಧಿಸಿ ಕೇಂದ್ರ ಪರಿಸರ ಸಚಿವರಿಗೆ ಮನವಿ

Spread the love

ಪರಿಸರ ಸಚಿವಾಲಯಕ್ಕೆ ಅಸಮರ್ಪಕ ಮಾಹಿತಿ ನೀಡಿ ಎತ್ತಿನಹೊಳೆ ಯೋಜನೆಗೆ ಅನುಮತಿ ಪಡೆದುಕೊಳ್ಳಲಾಗಿದ್ದು ಇದನ್ನು ಮರು ಪರಿಶೀಲನೆ ನಡೆಸಿ ಅನುಮೋದನೆ ತಡೆ ಹಿಡಿಯುವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವರಾಗಿರುವ ಪ್ರಕಾಶ್ ಜಾವಡೇಕರ್ ಅವರಿಗೆ ಸಹ್ಯಾದ್ರಿ ಸಂರಕ್ಷಣಾ ಸಂಚಯ ಮನವಿ ಸಲ್ಲಿಸಿದೆ.

ಕರ್ನಾಟಕ ರಾಜ್ಯ ಸರಕಾರವು ಕರ್ನಾಟಕ ನೀರಾವರಿ ನಿಗಮದ ಮೂಲಕ ಈ ಯೋಜನೆಯನ್ನು ಕುಡಿಯುವ ನೀರಿನ ಯೋಜನೆ ಎಂಬ ಲೇಪನದೊಂದಿಗೆ 24 ಟಿ.ಎಂ.ಸಿ. ನೀರು ಲಭ್ಯವಿದೆ ಎಂಬ ತಪ್ಪು ಮಾಹಿತಿ ನೀಡುವುದರೊಂದಿಗೆ ಯಾವುದೇ ಪರಿಸರ ಅಧ್ಯಯನ ನಡೆಸದೇ ಜಾರಿಗೊಳಿಸುತ್ತಿದೆ.  ಈ ಯೋಜನೆಯ ನೀರನ್ನು ಕುಡಿಯುವ ನೀರಿಗಷ್ಟೇ ಬಳಸಿಕೊಳ್ಳದೇ ಕೆರೆಗಳನ್ನು ತುಂಬಿಸುವುದಕ್ಕೆ,  ಬತ್ತಿ ಹೋದ ನದಿಗಳ ಪುನರುಜ್ಜೀವನಕ್ಕೆ ಬಳಸಿಕೊಳ್ಳುವ ಬಗ್ಗೆ ವರದಿಯಲ್ಲಿ ಹೇಳಿದೆ.

ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ಪ್ರದೇಶವಾಗಿರುವ ನೇತ್ರಾವತಿ ನದಿಯ ಮೂಲದಲ್ಲಿರುವ ಬಹಳಷ್ಟು ಶೋಲಾರಣ್ಯ, ಹುಲ್ಲುಗಾವಲು ನಾಶವಾಗಿ ನದಿಯ ಮೂಲಸ್ಥಾನಕ್ಕೇ ಮಾರಣಾಂತಿಕ ಗಾಯವಾಗಿ ಶಾಶ್ವತವಾಗಿ ನೀರಿನ ಹರಿವು ತಡೆಯಾಗಿ ಬರಿದಾಗಲಿದೆ ಎಂಬ ಮೂಲ ವಿಷಯಗಳನ್ನು ಮನವಿಯಲ್ಲಿ ವಿವರಿಸಲಾಗಿದೆ.

ಸಂಚಯದ ದಿನೇಶ್ ಹೊಳ್ಳ, ಸಪ್ನಾ ನೊರೋನ್ಹ ಉಪಸ್ಥಿತರಿದ್ದರು.


Spread the love