ಕುಡಿಯುವ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಿ – ಎ.ಬಿ. ಇಬ್ರಾಹಿಂ

Spread the love

ಮಂಗಳೂರು:  ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ವಿಪರೀತವಾದ ಬಿಸಿಲಿನ ತಾಪದಿಂದ ಭೂಮಿಯಲ್ಲಿಯ ಅಂತರ್ ಜಲಮಟ್ಟ ಕುಸಿಯುತ್ತಿದ್ದು ದ.ಕ ಜಿಲ್ಲೆಯಲ್ಲಿ ಅಲ್ಲಲ್ಲಿ ತೆರೆದ ಬಾವಿ, ಕೊಳವೆ ಬಾವಿ, ಕೆರೆಗಳಂತ ಸಾರ್ವಜನಿಕ ಜಲಾಶಯಗಳು ಬತ್ತಿ ಹೊಗಿ, ಪ್ರಾಣಿ ಪಕ್ಷಿಗಳಿಗೆ ಹಾಗೂ ಜನಸಾಮಾನ್ಯರಿಗೂ ಕುಡಿಯುವ ನೀರಿನ ಜಲಾಕ್ಷಮ ಉಂಟಾಗಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಬಗ್ಗೆ ಇದೆ. ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ಬಿದ್ದಿರುವ ಮಳೆ 94.2 ಮಿ.ಮಿ. ಆಗಿದ್ದರೆ, ಈ ಬಾರಿ ಕೇವಲ 9.4 ಮಿ.ಮೀ. ಮಳೆ ಆಗಿರುವುದು ಮತ್ತು ಸರಾಸರಿ ಗರಿಷ್ಟ 38 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಏರಿರುವುದು ಜಲಕ್ಷಾಮಕ್ಕೆ ಪ್ರಮುಖ ಕಾರಣ.

DC-Ibrahim-17032016

ಏಪ್ರಿಲ್ ತಿಂಗಳ ಕೊನೆಯಲ್ಲಿ ಅಥವಾ ಮೇ ತಿಂಗಳಲ್ಲಿ ಮಳೆ ಬಾರದೆ ಇದ್ದಲ್ಲಿ  ತುಂಬೆಯ ವೆಂಟೆಡ್ ಡ್ಯಾಮ್ ನಲ್ಲಿ ಹರಿದು ಬರುವ ನೀರಿನ ಶೇಖರಣೆ ಕುಸಿಯುತ್ತಿರುವುದರಿಂದ ಮುಂದಿನ ಮೇ ತಿಂಗಳಲ್ಲಿ ಹೆಚ್ಚಿನ ಜಲಕ್ಷಾಮವನ್ನು ಎದುರಿಸುವ ಪರಿಸ್ಥಿತಿ ಉದ್ಭವಿಸಬಹುದಾಗಿದೆ.

ನೀರು ಜೀವಜಲ, ಜೀವ ಸಂಕುಲದ ಉಗಮ, ಅಸ್ತಿತ್ವ ಮತ್ತು ಬೆಳವಣೆಗೆಗೆ ಕಾರಣವಾಗಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸಂರಕ್ಷಿಸುವುದೇ ನೀರಿನ ಸಮರ್ಪಕ ನಿರ್ವಹಣೆ. ಹೀಗಾಗಿ ನೀರಿನ ಅಭಾವವನ್ನು ತಡೆಗಟ್ಟುವ ಕಡೆ ಎಲ್ಲರೂ ಗಮನ ಹರಿಸಬೇಕು. ಇಲ್ಲದಿದ್ದರೆ ಬೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಅಸಾಧ್ಯ.

ನೀರನ್ನು ಪೋಲು ಮಾಡದೇ, ಪ್ರಸ್ತುತ ಲಭ್ಯ ಇರುವ ನೀರನ್ನು ಕೃಷಿ ಉದ್ದೇಶ ಅಥವಾ ಇತರೆ ಉದ್ದೇಶಗಳ ಉಪಯೋಗಕ್ಕೆ ನಿಯಂತ್ರಣಗೊಳಿಸಿ ನೀರು ಅಪವ್ಯಯವಾಗದಂತೆ ಮುಂಜಾಗ್ರತೆವಹಿಸಿ ಮಳೆ ಪ್ರಾರಂಭವಾಗುವ ವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಉಪಯೋಗಿಸಲು ಒತ್ತು ಕೊಟ್ಟು ಹಿತಮಿತವಾಗಿ ಬಳಸಲು ಜನಸಾಮಾನ್ಯರು ಕ್ರಮ ವಹಿಸಬೇಕಾಗಿದೆ.  ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಮಳೆ ಪ್ರಾರಂಭವಗುವ ಅವಧಿವರೆಗೆ ದಿನನಿತ್ಯ ಸೀಮಿತ ಅವಧಿಯಲ್ಲಿ ಜನಸಾಮಾನ್ಯರಿಗೆ ಸರಬರಾಜು ಮಾಡಲು ಸೂಕ್ತ ಯೋಜನೆ ರೂಪಿಸಲು ಕೂಡ ತಿಳಿಸಲಾಗಿರುತ್ತದೆ.

ಆದ್ದರಿಂದ ನಗರ ಪ್ರದೇಶದ ಎಲ್ಲಾ ನಾಗರೀಕರು, ನೀರನ್ನು ಹಿತಮಿತವಾಗಿ ಬಳಸುವಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿಯ ಜನರು ತುಂಬೆ ವೆಂಟೆಡ್ ಡ್ಯಾಮ್ ಗೆ ಹರಿದು ಬರುವ ನೀರಿಗೆ ತಡೆ ಒಡ್ಡಿ ಕೃಷಿಗೆ ನೀರನ್ನು ಬಳಸಿ ಕುಡಿಯುವ ನೀರಿನ ಅಭಾವಕ್ಕೆ ಕಾರಣವಾಗದಂತೆ ಜಿಲ್ಲಾಡಳಿತದಿಂದ ವಿನಂತಿಸಲಾಗಿದೆ. ನೀರಿನ ಅಮೌಲ್ಯತೆಯನ್ನು ಅರಿತುಕೊಂಡು ನೀರನ್ನು ಸರಿಯಾಗಿ ಬಳಕೆಮಾಡುವ ದೃಷ್ಟಿಯೊಂದಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕಾಗಿ ವಿನಂತಿಸಲಾಗಿದೆ.

ಜಿಲ್ಲೆಯ ಪಕ್ಷಿ ಸಂಕುಲನ ಕೂಡ ಕುಡಿಯುವ ನೀರಿನ ಅಭಾವ ಎದುರಿಸುವುದರಿಂದ ಚಿಕ್ಕ ಪಾತ್ರೆಯಲ್ಲಿ ನೀರನ್ನು ತುಂಬಿ ಮನೆಯ ತಾರಸಿನ ಮೇಲೆ ಇಟ್ಟು ಪಕ್ಷಿಗಳಿಗೂ ನೀರು ಒದಗಿಸಿ ಮನವೀಯತೆಯನ್ನು ಮೆರೆಯಲು ಕೋರುತ್ತಾ ಕುಡಿಯುವ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲೆಯ ನಾಗರೀಕರಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮನವಿ ಮಾಡಿರುತ್ತಾರೆ.


Spread the love