ಚಿಕ್ಕಮಗಳೂರು ದತ್ತಜಯಂತಿಯಲ್ಲಿ ಗೋರಿ ಹಾನಿ ಯತ್ನ ತಡೆದ ಇಬ್ಬರು ಪೋಲಿಸರಿಗೆ ಪ್ರಶಂಸೆ  

Spread the love

ಚಿಕ್ಕಮಗಳೂರು ದತ್ತಜಯಂತಿಯಲ್ಲಿ ಗೋರಿ ಹಾನಿ ಯತ್ನ ತಡೆದ ಇಬ್ಬರು ಪೋಲಿಸರಿಗೆ ಪ್ರಶಂಸೆ  

ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮದಲ್ಲಿ ದತ್ತಮಾಲಾಧಾರಿಗಳ ಗುಂಪು ಹರಿದು ಗೋರಿಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ ವೇಳೆ ಇಬ್ಬರು ಪೋಲಿಸರು ಹಾನಿಯನ್ನು ತಡೆದಿದ್ದು, ಜಿಲ್ಲಾ ಪೋಲಿಸ್ ಇಲಾಖೆಯಿಂದ ಪ್ರಶಂಸೆ ಹಾಗೂ ನಗದು ಬಹುಮಾನವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಘೋಷಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಪೋಲಿಸ್ ಇಲಾಖೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿಸೆಂಬರ್ 1-3  ರವರೆಗೆ ನಡೆದ ದತ್ತಜಯಂತಿ ಕಾರ್ಯಕ್ರಮದ ಬಂದೋಬಸ್ತ್ ಕರ್ತವ್ಯಕ್ಕಾಗಿ     ರಾಜ್ಯದ ವಿವಿಧ ಜಿಲ್ಲೆ ಮತ್ತು ನಗರಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ದತ್ತಜಯಂತಿ ಕಾರ್ಯಕ್ರಮದ ಅಂತಿಮ ದಿನವಾದ ಡಿಸೆಂಬರ್ 3 ರಂದು ದತ್ತಪೀಠದಲ್ಲಿರುವ ಪ್ರಮುಖ ಗುಹೆಯಿಂದ ದೂರದಲ್ಲಿರುವ ಸ್ಥಳದಲ್ಲಿ ಜಿಲ್ಲಾಡಳಿತ ಗೋರಿಗಳ ರಕ್ಷಣೆಗಾಗಿ ನಿರ್ಮಿಸಿದ್ದ ತಂತಿ ಬೇಲಿಯನ್ನು ದತ್ತಮಾಲಾಧಾರಿಗಳ ಗುಂಪು ಹರಿದು ಗೋರಿಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ್ದು. ಸದರಿ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎರಡು ಜನ ಪೊಲೀಸ್ ಸಿಬ್ಬಂದಿಗಳಾದ  ಬೆಳಗಾವಿ ಸದಲಗ ಪೋಲಿಸ್ ಠಾಣೆಯ ಸಿಪಿಸಿ ಎಸ್. ಪಿ. ಗಲಗಲಿ ಮತ್ತು ಮಡಿಕೇರಿಯ ಶ್ರೀಮಂಗಲ ಪೋಲಿಸ್ ಠಾಣೆಯ ಗುರುದೇವ್ ಪಾವಡೆ ದಯಾಗೊಂಡಕೂಡಲೇ ಕಾರ್ಯಪ್ರವೃತ್ತರಾಗಿ ಗುಂಪನ್ನು ತಡೆದು ಇನ್ನಷ್ಟು ಹಾನಿಯಾಗದಂತೆ ತಡೆದಿರುತ್ತಾರೆ.

ಸದರಿ ಪೊಲೀಸ್ ಸಿಬ್ಬಂದಿಗಳು ಇಂತಹ ಕ್ಷಿಷ್ಟ ಪರಿಸ್ಥಿತಿಯಲ್ಲಿಯೂ ಸಹ ಕೂಡಲೇ ಕಾರ್ಯಪ್ರವೃತ್ತರಾಗಿ ಗುಂಪಿಗೆ ಹೆದರದೆ ಅವರನ್ನು ಚದುರಿಸಿರುತ್ತಾರೆ. ಸದರಿಯವರು ತಮ್ಮ ಕರ್ತವ್ಯದಲ್ಲಿ ತೋರಿರುವ ಧೈರ್ಯ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆಯನ್ನು ಪ್ರಶಂಸಿಸಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕದಿಂದ ತಲಾ ರೂ. 10,000/- ನಗದು ಪುರಸ್ಕಾರವನ್ನು ಮಂಜೂರು ಮಾಡಲಾಗಿದೆ.

ಇದಲ್ಲದೇ ಅವರಿಗೆ ಉತ್ತಮ ಸೇವಾ ನಮೂದಾತಿಯನ್ನು ನೀಡಲು ಅವರ ಜಿಲ್ಲೆಯ ಪೊಲೀಸ್ ಅಧೀಕ್ಷಕರವರಿಗೆ ಪತ್ರವನ್ನು ಬರೆಯಲಾಗಿರುತ್ತದೆ. ಹಾಗೂ ಮಾನ್ಯ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರಿಂದ ‘ಡಿಜಿ ಕಮಂಡೇಷನ್ ಪತ್ರ’ಕ್ಕೂ ಸಹ ಶಿಫಾರಸ್ಸು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

1 Comment

Comments are closed.