ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ

Spread the love

ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ

ಮಂಗಳೂರು : ಡಾ| ಬಿ.ಆರ್. ಅಂಬೇಡ್ಕರ್ ರವರ 125ನೇ ಜನ್ಮ ಶತಾಬ್ದಿಯನ್ನು ಈ ವರ್ಷ ದೇಶದಲ್ಲಿ ವಿಶೇಷವಾಗಿ ಆಚರಿಸುತ್ತಾ ಸಂವಿಧಾನ ಶಿಲ್ಪಿ, ದಲಿತರ ಉದ್ದಾರಕ , ಮುತ್ಸದ್ಧಿ ರಾಜಕಾರಣಿ ಮತ್ತು ಸಮಾಜವಾದಿಯಾಗಿರುವ ಡಾ| ಬಿ.ಆರ್.ಅಂಬೇಡ್ಕರ್ ರವರು ಈ ದೇಶಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಮತ್ತು ಹಿಂದು ಸಮಾಜದ ಮೇಲೆ ಇದ್ದ ಅಪಾರ ವಿಶ್ವಾಸ ಮತ್ತು ಶ್ರದ್ಧೆಯನ್ನು ನೆನಪಿಸುವ ಮತ್ತು 2016ರ ಕಾಲಘಟ್ಟದಲ್ಲೂ ಈ ದೇಶದಲ್ಲಿ ಬೇರೂರಲ್ಪಟ್ಟ ಸಾಮಾಜಿಕ ಪಿಡುಗಾದ ಅಶ್ಪರ್ಸತೆಯನ್ನು ಹೋಗಲಾಡಿಸಲು, ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಕ್ಕಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಅನೇಕ ಕಾರ್ಯಕ್ರಮಗಳನ್ನು ಭಾ.ಜ.ಪಾ ಹಮ್ಮಿಕೊಂಡಿದೆ.

bjp-meeting-mangalore-00

ದೇಶದ ಎಲ್ಲಾ ಗ್ರಾಮ ಜಿಲ್ಲೆ , ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ 2016ರ ಸಪ್ಟೆಂಬರ್ 25ರಿಂದ 2017ರ ಎಪ್ರಿಲ್ 14ರವರೆಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಡುವ ವಿಭಾಗ ಮಟ್ಟದ ಕಾರ್ಯಗಾರ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಈ ಕಾರ್ಯಗಾರವನ್ನು ಉದ್ಘಾಟನೆಗೊಳಿಸುತ್ತಾ ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ರವರು , ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್‍ರವರನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ಕಾಂಗ್ರೆಸ್ ಪಕ್ಷ ಅವಮಾನಿಸಿದ ರೀತಿ, ಸ್ವಾರ್ಥಕ್ಕೆ ಬಳಸಿಕೊಂಡ ರೀತಿ ಮತ್ತು ಅವರು ಈ ದೇಶಕ್ಕೆ ನೀಡಿದ ಅಪಾರ ಕೊಡುಗೆಯನ್ನು ಮತ್ತು ಯಾವುದೇ ಮೀಸಲಾತಿ, ಸಮಾಜದ ಸಹಾಯಕತೆಗಳು ಇಲ್ಲದ ಮತ್ತು ಇಡೀ ಸಮಾಜವೇ ಬಹಿಷ್ಕರಿಸಿದ ಸಂದರ್ಭದಲ್ಲೂ ಉನ್ನತ ಶಿಕ್ಷಣವನ್ನು ಪಡೆದು ಈ ದೇಶದ ಸಂವಿಧಾನವನ್ನು ರಚನೆ ಮಾಡುವ ಎತ್ತರಕ್ಕೆ ಬೆಳೆದ ಒಬ್ಬ ಮಹಾನ್ ವ್ಯಕ್ತಿಯಾಗಿ ರೂಪುಗೊಂಡ ಕ್ಷಣವನ್ನು ವಿವರಿಸುತ್ತ , ರಾಷ್ಟ್ರ ಕಟ್ಟುವ ಅವರ ಸಂಕಲ್ಪವನ್ನು ನಾವೆಲ್ಲರು ಈ ಕಾರ್ಯಕ್ರಮದ ಮುಖಾಂತರ ಸಹಕಾರಗೊಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

bjp-meeting-mangalore-01

ಈ ಕಾರ್ಯಗಾರದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಮತ್ತು ಉತ್ತರ ಕನ್ನಡ ಸಂಸದರಾದ ಅನಂತಕುಮಾರ್ ಹೆಗಡೆ ಮಾತನಾಡಿ ಈ ಸಾಮಾಜಿಕ ಪಿಡುಗಾದ ಅಶ್ಪರ್ಸತೆ 1857ರಿಂದಲೇ ರಾಜಕೀಯ ಷಡ್ಯಂತ್ರದ ಭಾಗವಾಗಿ ಮೂಡಿ ಬಂದು ಸಮಾಜವನ್ನು ಹೊಡೆಯುವ ಕೆಟ್ಟ ಸಂಸ್ಕ್ರತಿ ಪ್ರಾರಂಭವಾಗಿದೆ. ಇಡೀ ದೇಶದಲ್ಲಿ ಸಾಮರಸ್ಯದ ಮುನ್ನುಡಿಯನ್ನು ಬರೆದ, ಸಂಘ ಪರಿವಾರದ ಈ ಕಾರ್ಯಕ್ರಮ ಕೇವಲ ಪಕ್ಷದ ಕಾರ್ಯಕ್ರಮವಾಗಿರದೆ , ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ರಾಷ್ಟ ಕಾರ್ಯವಾಗಬೇಕು ಮತ್ತು ಹಣಕೋಸ್ಕರ ಕೆಲಸ ಮಾಡುವ ಬಾಡಿಗೆ ದೇಶದ್ರೋಹಿಗಳು ಮತ್ತು ಎನ್.ಜಿ.ಓ ಗಳು ಈ ರಾಷ್ಟ್ರದ ಸಾರ್ವಬೌಮತೆಗೆ ದಕ್ಕೆ ತರಲು ಮಾಡುವ ಈ ಪಿಡುಗನ್ನು ಸಮಾಜದಿಂದ ಮುಕ್ತವಾಗಿಸಲು ನಾವೆಲ್ಲರೂ ಪಣ ತೊಟ್ಟು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಎಂಬ ಕಿವಿ ಮಾತನ್ನು ಕಾರ್ಯಕರ್ತರಿಗೆ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕ್ಯಾ|ಗಣೇಶ್ ಕಾರ್ಣಿಕ್, ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗಡೆ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ , ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮತ್ತು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಕರ ಹೆಗ್ಡೆ ಉಪಸ್ಥಿತರಿದ್ದರು.

ದ.ಕ , ಉಡುಪಿ ಮತ್ತು ಕೊಡಗು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಮಂಡಲದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಗಳು, ಎಲ್ಲಾ ಮೋರ್ಚಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಗಳು , ಮಾಜಿ ಶಾಸಕರುಗಳು ಮತ್ತು ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಪಾಲ್ಗೊಂಡಿದ್ದರು.


Spread the love