ನಗರೋತ್ಥಾನ ಕಾಮಗಾರಿ ತ್ವರಿತಗೊಳಿಸಿ ಪೌರಾಡಳಿತ ಇಲಾಖೆ ನಿರ್ದೇಶಕ ಡಾ.ವಿಶಾಲ್ ಸೂಚನೆ

Spread the love

ನಗರೋತ್ಥಾನ ಕಾಮಗಾರಿ ತ್ವರಿತಗೊಳಿಸಿ ಪೌರಾಡಳಿತ ಇಲಾಖೆ ನಿರ್ದೇಶಕ ಡಾ.ವಿಶಾಲ್ ಸೂಚನೆ
ಮ0ಗಳೂರು: ನಗರೋತ್ಥಾನ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂದು ಪೌರಾಡಳಿತ ಇಲಾಖೆ ನಿರ್ದೇಶಕ ಡಾ.ವಿಶಾಲ್ ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಛೇರಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ನಗರೋತ್ಥಾನ ಯೋಜನೆಯಲ್ಲಿ ಸಾಕಷ್ಷು ಅನುದಾನ ನೀಡಲಾಗಿದ್ದರೂ, ಅನುದಾನ ಬಳಕೆಯಲ್ಲಿ ನಗರ ಸಂಸ್ಥೆಗಳು ಹಿಂದೆ ಬಿದ್ದಿವೆ. ಈ ಬಗ್ಗೆ ಮುಖ್ಯ ಮಂತ್ರಿಗಳೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲಾ ನಗರಪಾಲಿಕೆಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು 1300 ಸಿಬ್ಬಂದಿಗಳನ್ನು ನೇಮಕಾತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಮಂಗಳೂರು ಮಹಾನಗರಪಾಲಿಕೆಗೆ ಸುಮಾರು 100 ರಷ್ಷು ಸಿಬ್ಬಂದಿಗಳ ನೇಮಕಾತಿಯಾಗಲಿದೆ ಎಂದರು. ಅಲ್ಲದೆ, ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತರಾದ ಇಂಜಿನಿಯರ್‍ಗಳನ್ನು ಗುತ್ತಿಗೆ ಮೇಲೆ ನೇಮಿಸಲು ಅನುಮತಿ ನೀಡಲಾಗಿದೆ. ಪಟ್ಟಣ ಪಂಚಾಯತ್‍ಗಳಾಗಿ ಮೇಲ್ದರ್ಜೆಗೇರಿದ ಗ್ರಾಮ ಪಂಚಾಯತ್‍ಗಳಿಗೂ ಸಿಬ್ಬಂದಿ ನೀಡಲಾಗುವುದು ಎಂದು ಅವರು ಹೇಳಿದರು.
ನಗರೋತ್ಥಾನ ಯೋಜನೆಯಲ್ಲಿ ಪಟ್ಟಣ ಪಂಚಾಯತ್‍ಗಳಿಗೆ ರೂ. 2 ಕೋಟಿ ಹೊಸ ಪಟ್ಟಣ ಪಂಚಾಯತ್‍ಗಳಿಗೆ ರೂ. 5 ಕೋಟಿ ಪುರಸಭೆಗಳಿಗೆ ರೂ. 5 ಕೋಟಿ ಹೊಸ ಪುರಸಭೆಗಳಿಗೆ ರೂ.15 ಕೋಟಿ, ನಗರ ಸಭೆಗಳಿಗೆ 15 ಕೋಟಿ, ಹೊಸ ನಗರಸಭೆಗಳಿಗೆ ರೂ. 30 ಕೋಟಿ ನೀಡಲಾಗುವುದು ಎಂದು ಡಾ.ವಿಶಾಲ್ ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಲು ಸಾಕಷ್ಷು ಅನುದಾನ ಲಭ್ಯವಿದೆ. ಮನೆ ಹಾಗೂ ನಿವೇಶನ ಒದಗಿಸಲು ಸಾಕಷ್ಷು ಫಲಾನುಭವಿಗಳು ಲಭ್ಯವಿಲ್ಲದಿದ್ದರೆ, ಆ ಬಗ್ಗೆ ಸಮೀಕ್ಷೆ ನಡೆಸಲು ಅವರು ಸೂಚಿಸಿದರು. ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಲ್ಲಿ ಖಾಯಂ ಪೌರಕಾರ್ಮಿಕರು ಮಾತ್ರ ವಸತಿ ಪಡೆಯಲು ಅರ್ಹರು ಎಂದು ಡಾ. ವಿಶಾಲ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ, ಮಹಾನಗರ ಪಾಲಿಕೆ ಆಯುಕ್ತ ಮಹಮದ್ ನಝೀರ್, ಉಭಯ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.


Spread the love