ನವದೆಹಲಿ: ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ

Spread the love

ನವದೆಹಲಿ: ಕರ್ನಾಟಕದಲ್ಲೇ ಸಂಕಷ್ಟ ಪರಿಸ್ಥಿತಿ ಇರುವುದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದು ಸಾಧ್ಯವೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ತಮಿಳುನಾಡು ನೀರು ಲಭ್ಯತೆ ಬಗ್ಗೆ ಮೇಲುಸ್ತುವಾರಿ ಸಮಿತಿ ಮತ್ತು ಕೇಂದ್ರ ಸರ್ಕಾರವನ್ನು ಹಾದಿ ತಪ್ಪಿಸಿದೆ. ವಾಸ್ತವವಾಗಿ ತಮಿಳುನಾಡಿಗೆ ಅಗತ್ಯಕ್ಕಿಂತಲೂ ಹೆಚ್ಚು ನೀರು ಲಭ್ಯವಾಗಲಿದೆ ಎಂದು ಕರ್ನಾಟಕ ತಿಳಿಸಿದೆ. ಈ ಸಂಬಂಧ 12 ಪುಟಗಳ  ಅಂಕಿ-ಅಂಶಗಳನ್ನೊಳಗೊಂಡ ದಾಖಲೆಯನ್ನು ಕರ್ನಾಟಕ ಮಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮೇಲುಸ್ತುವಾರಿ ಸಮಿತಿಗೆ ಸಲ್ಲಿಸಿದ್ದಾರೆ. ತಮಿಳುನಾಡು ಜೂನ್ – ಸೆಪ್ಟೆಂಬರ್ ಅವಧಿಯಲ್ಲಿ ಬರಬೇಕಾದ ಬಾಕಿ 48 ಟಿಎಂಸಿ ನೀರು ಮತ್ತು ಜನವರಿವರೆಗೆ ಬರಬೇಕಾದ 47.5 ಟಿಎಂಸಿ ನೀರು ಹರಿಸುವಂತೆ ಸಲ್ಲಿಸಿರುವ ಬೇಡಿಕೆಯನ್ನು ಕರ್ನಾಟಕ ಸಾರಾ ಸಗಟು ತಿರಸ್ಕರಿಸಿದೆ.

ಕಾವೇರಿ ಜಲಾನಯನದಲ್ಲಿ ಬಿದ್ದ ಮಳೆಯನ್ನಷ್ಟೇ ಆಧರಿಸಿ ಸಂಕಷ್ಟ ಸೂತ್ರ ರಚಿಸುವುದು ಸೂಕ್ತವಲ್ಲ. ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆ ಪ್ರಮಾಣ ವನ್ನು ಪರಿಗಣಿಸಿ ಸಂಕಷ್ಟ ಸೂತ್ರ ರಚಿಸಬೇಕು. ಆದರೆ ಸಂಕಷ್ಟ ಸೂತ್ರ ಶಾಶ್ವತವಾಗಿರುವುದಿಲ್ಲ. ಆಯಾ ಕಾಲಕ್ಕೆ ಪರಿಸ್ಥಿತಿಗನುಗುಣವಾಗಿ ತಾತ್ಕಾಲಿಕವಾಗಿ ರೂಪಿಸಬೇಕು.

ಅಲ್ಲದೇ ರಾಜ್ಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕನುಸಾರ ತಮಿಳುನಾಡಿಗೆ ಸಾಕಷ್ಟು ನೀರು ಹರಿಸಿದೆ. ಈಗಿರುವ ಪರಿಸ್ಥಿತಿಯಲ್ಲಿ ನೀರು ಹರಿಸುವುದು ಸಾಧ್ಯವೇ ಇಲ್ಲ ಎಂದು ತಿಳಿಸಿದೆ. ತಮಿಳುನಾಡು ಸಿಎಸ್ ಜ್ಞಾನದೇಶಿ- ಗನ್ ಅವರು ಮೇಲುಸ್ತುವಾರಿ ಸಮಿತಿ ಮುಂದೆ ನ್ಯಾಯಾಧಿಕರಣದ ಅಂತಿಮ ತೀರ್ಪಿಗೆ ಅನುಗುಣವಾಗಿ ನೀರು ಬಿಡುಗಡೆಗೆ ನಿರ್ದೇ ಶನ ನೀಡುವಂತೆ ಮನವಿ ಮಾಡಿದರು. ಬಾಕಿ 48 ಟಿಎಂಸಿ ಮತ್ತು ಜನವರಿ ಅಂತ್ಯ ದವರೆಗೆ 47.5 ಟಿಎಂಸಿ ಹರಿಸಲೇ ಬೇಕು ಒತ್ತಾಯಿಸಿದರು. ಮುಂದಿನ 4 ತಿಂಗಳು ನೀರು ಹರಿಸುವ ಪ್ರಮಾಣ ನಿಗದಿ ಮಾಡು ವಂತೆಯೂ ಸಮಿತಿಗೆ ಮನವಿ ಮಾಡಿದರು.

ಕರ್ನಾಟಕ ಹೇಳಿದ್ದೇನು?

ಕರ್ನಾಟಕ ಪ್ರಕೃತಿ ಪ್ರಕೋಪ ನಿರ್ವಹಣಾ ಸಮಿತಿಯು ಜುಲೈ ತಿಂಗಳಲ್ಲಿ ಶೇ.61ರಷ್ಟು ಮಳೆ ಕೊರತೆ ದಾಖಲಿಸಿದೆ.

ಕಬಿನಿ ಮತ್ತು ಕೆಆರ್‍ಎಸ್ ಜಲಾನಯದಲ್ಲಿ ಕ್ರಮವಾಗಿ ಶೇ.63 ಮತ್ತು ಶೇ.- 58ರಷ್ಟು ಮಳೆ ಕೊರತೆಯಾಗಿದೆ.

ಆಗಸ್ಟ್ ತಿಂಗಳಲ್ಲಿ ಕಾವೇರಿ ಜಲಾನಯದಲ್ಲಿ ಶೇ. 11, ಕೆಆರ್‍ಎಸ್ ಮತ್ತು ಕಬಿನಿ- ಯಲ್ಲಿ ಶೇ.27ರಷ್ಟು ಕೊರತೆಯಾಗಿದೆ.

ಹವಾಮಾನ ಇಲಾಖೆ ದಾಖಲೆ ಪ್ರಕಾರ, ವಯನಾಡು ಜಲಾನಯನದಲ್ಲಿ ಜೂ.ರಿಂದ ಸೆ.9ರವರೆಗೆ ಶೇ. 40ರಷ್ಟು ಮಳೆ ಕೊರತೆಯಾಗಿದೆ.


Spread the love