ಪುರಸಭೆ ಮಾಡುವುದರಿಂದ ಕಾಪುವಿನ ಜನತೆಗೇನು ಲಾಭ : ಜಯಪ್ರಕಾಶ ಹೆಗ್ಡೆ ಪ್ರಶ್ನೆ

Spread the love

ಉಡುಪಿ: ಕಾಪುವನ್ನು ಪುರಸಭೆಯನ್ನಾಗಿ ಪರಿವರ್ತಿಸುವ ಬದಲು ತಾಲೂಕು ಕೇಂದ್ರವನ್ನಾಗಿ ಮಾಡಿದಿದ್ದರೆ ಕಾಪುವಿನ ಜನತೆ ತಾಲೂಕು ಕಛೇರಿಗಾಗಿ ಉಡುಪಿಗೆ ಅಲೆದಾಡುವುದನ್ನಾದರೂ ತಪ್ಪಿಸಬಹುದಾಗಿತ್ತು. ಅದರೆ ಕಾಪುವನ್ನು ಪುರಸಭೆಯನ್ನಾಗಿ ಮಾಡುತ್ತಿರುವುದರಿಂದ ಕಾಪುವಿನ ಜನತೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

jayaprakash-hegde

ಪುರಸಭೆಯಾಗುತ್ತಿರುವ ಈ ಹಿಂದಿನ ಕಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳು ಮುಖ್ಯವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಗ್ರಾಮೀಣ ಕೃಪಾಂಕದಿಂದ ವಂಚಿತರಾಗಲಿದ್ದಾರೆ. ಸರಕಾರದ ಭೂ ಮಾರ್ಗಸೂಚಿ ದರವು ಗ್ರಾಮ ಪಂಚಾಯತ್‍ಗಿಂತ ಪುರಸಭೆಯ ವ್ಯಾಪ್ತಿಯಲ್ಲಿ ಹೆಚ್ಚಿರುವುದರಿಂದ ಭೂಮಿಯನ್ನು ನೋಂದಾವಣೆ ಮಾಡುವಾಗ ಮುದ್ರಾಂಕ ಶುಲ್ಕ ಹಲವು ಪಟ್ಟು ಹೆಚ್ಚು ತೆರಬೇಕಾದ ಸಂದರ್ಭ ಸೃಷ್ಠಿಯಾಗಿದೆ. ಮನೆ ಮತ್ತಿತರ ಕಟ್ಟಡಗಳ ಮಾಲಕರು ತೆರಿಗೆಯನ್ನು ಎರಡು ಮೂರು ಪಟ್ಟು ಹೆಚ್ಚು ಪಾವತಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಜೂರಾಗುವ ಅಕ್ರಮ ಸಕ್ರಮ ಭೂ ಮಂಜೂರಾತಿಗೆ ಪುರಸಭೆ ವ್ಯಾಪ್ತಿಯಲ್ಲಿ ಅವಕಾಶವಿಲ್ಲವಾಗಿರುವ ಕಾರಣ ಆ ಸೌಲಭ್ಯದಿಂದ ಈ ಭಾಗದ ಜನತೆ ವಂಚಿತರಾಗಲಿದ್ದಾರೆ. 94ಸಿ ಯಲ್ಲಿ ಮನೆ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2.75 ಸೆಂಟ್ಸ್ ಜಾಗ ಮಂಜೂರಾತಿಯಾದರೆ ಪುರಸಭಾ ವ್ಯಾಪ್ತಿಯಲ್ಲಿ ಕೇವಲ 1.75 ಸೆಂಟ್ಸ್ ಮಾತ್ರ ಮಂಜೂರಾತಿಯಾಗಲಿದೆ. ಗ್ರಾಮ ಪಂಚಾಯತ್‍ಗಿಂತ ಪುರಸಭಾ ವ್ಯಾಪ್ತಿಯಲ್ಲಿ ಭೂಪರಿವರ್ತನೆ ದರ ಸುಮಾರು ಎರಡು ಮೂರು ಪಟ್ಟು ಹೆಚ್ಚಿರುತ್ತದೆ. ಪುರಸಭೆ ಏರಿಯಾ ಮತ್ತು ಅದರ ಸುತ್ತಮುತ್ತಲ ಸುಮಾರು 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರದ ಕಾನೂನು ಅನ್ವಯವಾಗಲಿರುವುದರಿಂದ ಇಲ್ಲಿಯ ತನಕ ಸರಳವಾಗಿದ್ದ ಮನೆ ಅಥವಾ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಇನ್ನು ಮುಂದೆ ಕಾನೂನಿನ ತೊಡಕು ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅವೈಜ್ಞಾನಿಕವಾದ ಮರಳು ನೀತಿಯಿಂದ ಸಮಸ್ಯೆ ಉಲ್ಬಣ: ಸರಕಾರ ಸಿಹಿನೀರಿಗೊಂದು ಮರಳು ನೀತಿ ಉಪ್ಪು ನೀರಿಗೊಂದು ಮರಳು ನೀತಿ ಜಾರಿಗೊಳಿಸುವುದರ ಪರಿಣಾಮವಾಗಿಯೇ ಜಿಲ್ಲೆಯಾದ್ಯಂತ ಇಂದು ಮರಳು ಸಮಸ್ಯೆ ಉದ್ಭವವಾಗಿದೆ. ಏಕರೂಪ ಮರಳು ನೀತಿ ಜಾರಿಗೊಳಿಸುವುದೇ ಈ ಸಮಸ್ಯೆಗೊಂದು ಶಾಶ್ವತ ಪರಿಹಾರವಾಗಲಿದೆ.
ಜಿಲ್ಲೆಯಾದ್ಯಂತ ಈ ಮರಳು ಸಮಸ್ಯೆಯಿಂದಾಗಿ ಖಾಸಗಿ ಮನೆ ಮತ್ತಿತರ ವಾಣಿಜ್ಯ ಕಟ್ಟಡಗಳ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ, ಸಾಲ ಮಾಡಿ ಕಟ್ಟಡ ನಿರ್ಮಾಣದಲ್ಲಿ ಹಣ ತೊಡಗಿಸಿದವರ ಸ್ಥಿತಿಯಂತೂ ಹೇಳತೀರದು. ಅತ್ತ ಮರಳು ಸಿಗದ ಕಾರಣಕ್ಕಾಗಿ ಕಟ್ಟಡ ಕಾಮಗಾರಿಯೂ ಪೂರ್ಣಗೊಳ್ಳದೇ ಇತ್ತ ಪಡೆದ ಸಾಲದ ಕಂತನ್ನು ಮರುಪಾವತಿಸಲಾಗದೇ ಪರದಾಡುತ್ತಿದ್ದಾರೆ. ಕಾಮಗಾರಿ ಸ್ಥಗಿತಗೊಂಡ ಕಾರಣಕ್ಕೆ ಹಣ ತೊಡಗಿಸಿದ ಗುತ್ತಿಗೆದಾರರ ಬಿಲ್ ಪಾವತಿಯಾಗುತ್ತಿಲ್ಲ. ದಿನಗೂಲಿ ನಂಬಿರುವ ಕಟ್ಟಡದ ಕಾರ್ಮಿಕರು ಕೆಲಸವಿಲ್ಲದೇ ಊಟಕ್ಕಿಲ್ಲದೇ ಪರಿತಪಿಸುತ್ತಿದ್ದಾರೆ. ಆದರೆ ಈ ಸಮಸ್ಯೆಗಳನ್ನು ಅರ್ಥೈಸಿಕೊಂಡು ಏಕರೂಪ ಮರಳು ನೀತಿ ಜಾರಿಗೊಳಿಸುವ ಕುರಿತು ಸರಕಾರಕ್ಕೆ ಒತ್ತಡ ಹೇರುವ ಬದಲಾಗಿ ನಮ್ಮ ಜನಪ್ರತಿನಿಧಿಗಳು ಕೇವಲ ಜಿಲ್ಲಾಧಿಕಾರಿಗಳಿಗೆ ಮತ್ತಿತರ ಅಧಿಕಾರಿಗಳಿಗೆ ಫೋನ್ ಕರೆ ಮಾಡುವುದರಿಂದ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆ ಪರಿಹಾರವಾಗದು.
ಕಳೆದ ಆರು ತಿಂಗಳ ಹಿಂದೆ ರಾಜ್ಯ ಕಾನೂನು ಸಚಿವರ ಕಛೇರಿಯಲ್ಲಿ ಈ ಕುರಿತು ಸಭೆ ಕರೆಯಲಾಗಿತ್ತು. ಕಾನೂನು ಸಚಿವ ಟಿ.ಬಿ. ಜಯಚಂದ್ರ, ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಮತ್ತು ಇಲಾಖಾ ಕಾರ್ಯದರ್ಶಿಗಳ ಸಮಕ್ಷಮ ‘ಮಹಾರಾಷ್ಟ್ರ ಮಾದರಿ ಮರಳು ನೀತಿ’ ತಿದ್ದುಪಡಿ ತರುವ ಕುರಿತು ತೀರ್ಮಾನಿಸಲಾಗಿತ್ತು. ಆದರೆ ಅದು ಕೇವಲ ಸಭೆಯಾಗಿ ಉಳಿಯಿತೇ ಹೊರತು ಆ ಕುರಿತು ಈ ತನಕ ಯಾವುದೇ ಕ್ರಮ ಕೈಗೊಳ್ಳದಿದ್ದುದು ದುರ್ದೈವದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love