ಪ್ರಾಪರ್ಟಿ ಕಾರ್ಡ್ ಕಡ್ಡಾಯ ಅಂತಿಮ ದಿನಾಂಕ ಮುಂದೂಡುವಂತೆ ರಾಜ್ಯ ಸರಕಾರಕ್ಕೆ ಶಾಸಕ ಕಾಮತ್ ಮನವಿ

Spread the love

ಪ್ರಾಪರ್ಟಿ ಕಾರ್ಡ್ ಕಡ್ಡಾಯ ಅಂತಿಮ ದಿನಾಂಕ ಮುಂದೂಡುವಂತೆ ರಾಜ್ಯ ಸರಕಾರಕ್ಕೆ ಶಾಸಕ ಕಾಮತ್ ಮನವಿ

ಮಂಗಳೂರು ಸಬ್ ರಿಜಿಸ್ಟ್ರಾರ್ ತಾಲೂಕು ಮತ್ತು ನಗರದಲ್ಲಿ ಒಟ್ಟು 1,70,000 ಕ್ಕೂ ಅಧಿಕ ಆಸ್ತಿಗಳಿದ್ದು, ಸದ್ಯ ಕೇವಲ 30 ರಿಂದ 35 ಸಾವಿರ ಆಸ್ತಿಗಳಿಗೆ ಮಾತ್ರ ಪ್ರಾಪರ್ಟಿ ಕಾರ್ಡ್ ನೀಡಲಾಗಿದೆ. ಆದ್ದರಿಂದ ಮಂಗಳೂರು ಶಹರದಲ್ಲಿರುವ ಎಲ್ಲಾ 32 ಗ್ರಾಮಗಳಲ್ಲ್ಲಿರುವ ಆಸ್ತಿಗಳ ಪೈಕಿ 75 ಶೇಕಡಾಕ್ಕಿಂತಲೂ ಅಧಿಕ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ನೀಡಿದ ನಂತರವೇ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸುವುದು ಕಾನೂನು ಪ್ರಕಾರ ಸಮಂಜಸವಾಗಿದೆ. ಇದೇ ಮೇ 16 ರಂದು ಸ್ತಿರಾಸ್ತಿ ನೊಂದಾವಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡುವುದನ್ನು ಮುಂದೂಡುವಂತೆ ರಾಜ್ಯ ಸರಕಾರದ ಕಂದಾಯ ಮಂತ್ರಿಗಳಾಗಿರುವ ಆರ್ ವಿ ದೇಶಪಾಂಡೆಯವರಿಗೆ ಮತ್ತು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದು ಅದನ್ನು ರಾಜ್ಯ ಸರಕಾರ ಪರಿಗಣಿಸಬೇಕಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.

ಸುಮಾರು 2 ತಿಂಗಳ ಹಿಂದೆ ಕಡ್ಡಾಯವಾಗಿ ಪ್ರಾಪರ್ಟಿ ಕಾರ್ಡ್ ನೀಡಬೇಕು ಎನ್ನುವ ನಿಯಮವನ್ನು ಮುಂದೂಡುವ ಸಮಯದಲ್ಲಿ ಯುಪಿಒಆರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಬೇಕಾದ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪೂರೈಕೆ ಮಾಡಿದ ನಂತರವೇ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸುವುದಾಗಿ ಭೂ ದಾಖಲೆಗಳ ಆಯುಕ್ತರು ಹೇಳಿದ್ದರು. ಆದರೆ ಯುಪಿಒಆರ್ ಕಚೇರಿಯ ಎಲ್ಲಾ ವ್ಯವಸ್ಥೆಗಳು ಸದ್ಯಕ್ಕೆ ಸಂಪೂರ್ಣ ಅವ್ಯವಸ್ಥೆಯಲ್ಲಿದೆ. ಅಲ್ಲಿ ಯಾರಿಗೂ ಸರಿಯಾದ ಮಾಹಿತಿ ಸಿಗುವುದಿಲ್ಲ. ಅಲ್ಲದೆ ಬೇಕಾದ ಕಂಪ್ಯೂಟರ್ಸ್, ಸ್ಕ್ಯಾನರ್ಸ್, ಕ್ಯಾಡ್ ವ್ಯವಸ್ಥೆ ಇನ್ನು ಕೂಡಾ ಸರಿಯಾಗಿರುವುದಿಲ್ಲ. ಬಂದ ನಾಗರಿಕರಿಗೆ ಕುಳಿತುಕೊಳ್ಳಲು ಬೇಕಾದ ಸ್ಥಳಾವಕಾಶ ಹಾಗೂ ಆಸನಗಳಿಲ್ಲ ಮತ್ತು ಶೌಚಾಲಯಗಳು ಇಲ್ಲ. ಹೀಗಿರುವಾಗ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಿದರೆ ಅದರಿಂದ ನಾಗರಿಕರು ತುಂಬಾ ಸಂಕಟ ಪಡಬೇಕಾಗುತ್ತದೆ. ಆದ್ದರಿಂದ ಈಗಿನ ಗಡುವನ್ನು ಮುಂದೂಡಿ ಎಲ್ಲ ವ್ಯವಸ್ಥೆ ಸರಿಯಾದ ನಂತರವೇ ಜಾರಿಗೊಳಿಸಬೇಕಾಗಿ ಶಾಸಕ ಕಾಮತ್ ಕಂದಾಯ ಮಂತ್ರಿಗಳಿಗೆ ವಿನಂತಿಸಿದ್ದಾರೆ. ತಮ್ಮ ಮನವಿಯನ್ನು ರಾಜ್ಯ ಸರಕಾರ ಪರಿಗಣಿಸಬಹುದು ಎನ್ನುವ ವಿಶ್ವಾಸ ಶಾಸಕ ಕಾಮತ್ ವ್ಯಕ್ತಪಡಿಸಿದ್ದಾರೆ


Spread the love