ಮಂಗಳೂರು: ನೊಂದವರ ಪಾಲಿನ ಭರವಸೆಯ ನಾಟಿ ವೈದ್ಯೆ – ಚಂದ್ರಾವತಿ ಪೊಡಿಕಲ

Spread the love

ಮಂಗಳೂರು: ಇಂದಿನ ದಿನಗಳಲ್ಲಿ ಮುಂದುವರೆದಿರುವ ಆಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ತುಳುನಾಡಿನ ಈ ನಂಬಿಕೆಯ ನೆಲದಲ್ಲಿ ‘ನಾಟಿ ವೈದ್ಯ’ ಪರಂಪರೆಯವರಿಗೆ ಇಂದಿಗೂ ಮನ್ನಣೆಯಿದೆ. ಹೀಗೆ ಬಹುಜನರ ಬೇಡಿಕೆಯ  ಹಿರಿಯ ನಾಟಿವೈದ್ಯೆಯಾಗಿ ಗುರುತಿಸಿಕೊಂಡ ಹಿರಿಮೆ ಬಂಟ್ವಾಳ ತಾಲೂಕು ಬೆಂಜನಪದವಿನ  ಪೊಡಿಕಲ ನಿವಾಸಿ ಚಂದ್ರಾವತಿ (79)ಯವರದ್ದು.

Chandravathi podikala

ಬಿಸಿ ತಾಗಿದ, ಬೆಂಕಿ ಬಿದ್ದ ಉರಿಯ ಅಸಹನೀಯ ನೋವು ತಣಿಸುವ, ದೃಷ್ಟಿ ಬಿದ್ದ ಸಮಸ್ಯೆ ನಿವಾರಿಸುವ, ತಿನ್ನುವ ಚಪಲದವರ ದೃಷ್ಟಿಗೆ ತುತ್ತಾದವರ ಹೊಟ್ಟೆ ಉಬ್ಬನ್ನು ಪರಿಹರಿಸುವಲ್ಲಿ  ಆಸುಪಾಸಿನ ಗ್ರಾಮಗಳ ಜನತೆಗೆ ಚಂದ್ರಾವತಿಯವರು ಸರಿಸುಮಾರು ಕಳೆದ ಮೂರು ದಶಕಗಳಿಂದ ಆಸರೆಯಾಗಿದ್ದಾರೆ.

ಆಯುರ್ವೇದ, ನಾಟಿ ವೈದ್ಯ ಪರಂಪರೆಗೆ  ಕೊಡುಗೆ ನೀಡುತ್ತಾ ಬಂದ ಪಾಣೇರು ನಾಯಿಲ ಮನೆತನದವರಾದ ಚಂದ್ರಾವತಿ ತಮ್ಮ ತಾಯಿ ಗೌರಿಯವರಿಂದ ಬಳುವಳಿಯಾಗಿ ಪಡೆದಿರುವ ಈ ವಿದ್ಯೆಯನ್ನು ನೊಂದವರ ಸೇವೆಗೆ ಮೀಸಲಿಟ್ಟಿದ್ದಾರೆ. ಕೃಷಿ ಕುಟುಂಬದ ರಾಮ ಪೂಜಾರಿಯವರನ್ನು ಮದುವೆಯಾಗಿ ಕೊಡ್ಮಾಣ್ ಗ್ರಾಮದಲ್ಲಿ ಬಂದು ನೆಲೆಸಿದ ಚಂದ್ರಾವತಿಯವರು ಕೃಷಿ ಕೂಲಿ ಮಾಡಿಕೊಂಡೇ ಕಡು ಬಡತನದ ‘ಪರೀಕ್ಷೆ’ಯಲ್ಲೂ ಯಶಸ್ಸು ಕಂಡವರು.

ಎಂಟು ವರ್ಷಗಳ ಹಿಂದೆ ಪತಿಯ ಅಗಲುವಿಕೆಯ ನಡುವೆಯೂ ಇಬ್ಬರು ಹೆಣ್ಣು ಮಕ್ಕಳ ಮದುವೆ, ಮೂವರು ಪುತ್ರರ ಪೈಕಿ ಇಬ್ಬರಿಗೆ ಸಾಂಸಾರಿಕ ನೆಲೆಗಟ್ಟು ಒದಗಿಸಿ ಬೆಳವಣಿಗೆಯಲ್ಲಿ ಹಿಂದುಳಿದ ಒಬ್ಬ ಮಗನ ಆರೈಕೆಯ ಜತೆಗೆ ತಾವು ಜೀವನ ಸಾಗಿಸುತ್ತಿದ್ದಾರೆ.

ಸಮಸ್ಯೆಗೆ ತುತ್ತಾಗಿ ಹುಡುಕಿ ಬರುವವರ ಕರೆಗೆ ಸದಾ ತಕ್ಷಣ ಸ್ಪಂದಿಸುವ ಚಂದ್ರಾವತಿಯವರು ಮದ್ದು ನೀಡುವ ನೀತಿ ನಿಯಮಗಳ ಪಾಲನೆಯಲ್ಲಿ ಅತೀವ ಕಾಳಜಿ ವಹಿಸುತ್ತಾರೆ. ಬಿಡುವು ಮಾಡಿಕೊಂಡು ಆಗಾಗ ಬೆಟ್ಟದ ತಪ್ಪಲಿಗೆ ತೆರಳಿ ಗಿಡ ಮೂಲಿಕೆ ಆರಿಸಿ ತಂದು ಮದ್ದು ತಯಾರಿಸುತ್ತಾರೆ. ಪೊಳಲಿಯ ಮಾತೆ ಶ್ರೀ ರಾಜ ರಾಜೇಶ್ವರಿಯ ಭಕ್ತೆಯಾಗಿ ತನ್ನ ಬಾಳಿನಲ್ಲಿ ತಾಯಿಯ ಆಶೀರ್ವಾದವನ್ನು ಸದಾ ಸ್ಮರಿಸುತ್ತಾರೆ. ನೀಡಿದ ಸೇವೆಗೆ ಯಾವುದೇ ಬೇಡಿಕೆ ಮಂಡಿಸದೇ ಕೊಟ್ಟದ್ದನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತಾರೆ. ಈವರೆಗೂ ಯಾವುದೇ ಪ್ರಶಸ್ತಿ ಗೌರವಗಳಿಗೆ ಹಾತೊರೆಯದೇ , ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ತನ್ನ ಪಾಡಿಗೆ ಸೇವೆಯ ಮೌನ ವೃತದಲ್ಲಿರುವ ಅವರು ಯಾರಿಂದಲೂ ಗುರುತಿಸಿಕೊಂಡಿರದ ಎಲೆಮರೆಯ ಕಾಯಿಯಂತೆ ಎಂದರೂ ತಪ್ಪಾಗಲಾರದು.

ಈ ಇಳಿ ವಯಸ್ಸಿನಲ್ಲಿಯೂ ಸಾಧ್ಯವಿದ್ದಷ್ಟು ದುಡಿದೇ ತಿನ್ನಬೇಕೆಂಬ ತನ್ನ ತತ್ವಪಾಲನೆಗಾಗಿ  ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುತ್ತಿಗೆ ಸಿಬಂದಿಯಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಚಂದ್ರಾವತಿ ( 9901384915) ಕಿರಿಯರ ಸ್ಫೂರ್ತಿ ಮಾತ್ರವಲ್ಲ ಹಿರಿಯರ ನಡುವಿನ ನಾಟಿ ವೈದ್ಯರಂಗದ ಅಮೂಲ್ಯ ಆಸ್ತಿಯೂ ಹೌದು.


Spread the love