ಮಂಗಳೂರು: ಮತದಾರ ಪಟ್ಟಿ ಲೋಪದೋಷ ಸರಿಪಡಿಸಿ-ಯು.ಟಿ ಖಾದರ್   

Spread the love

ಮಂಗಳೂರು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ಕೆಲವೊಂದು ಲೋಪದೋಷಗಳಿರುವುದಾಗಿ ಕ್ಷೇತ್ರದ ಮತದಾರರು ತಮಗೆ ಆಗಿಂದಾಗೆ ದೂರು ಸಲ್ಲಿಸುತ್ತಿದ್ದು ಈ ಬಗ್ಗೆ ಗ್ರಾಮ ಕರಣಿಕರು ಸೂಕ್ತ ಕ್ರಮ ಕೈಗೊಂಡು ಮತದಾರರ ಪಟ್ಟಿಯ ಲೋಪಗಳನ್ನು 10 ದಿನಗಳೊಳಗಾಗಿ ಸರಿಪಡಿಸುವಂತೆ ಆರೋಗ್ಯ ಸಚಿವರಾದ ಯು.ಟಿ ಖಾದರ್ ರವರು ಇಂದು ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಕೆಲವು ತಾಂತ್ರಿಕ ಕಾರಣಗಳಿಂದ ತಮ್ಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಜನಹಿತ ಯೋಜನೆಗಳ ಸೌಲಭ್ಯಗಳು ಯೋಗ್ಯ ಫಲಾನುಭವಿಗಳಿಗೆ ದೊರಕುತ್ತಿಲ್ಲ ಎಂದು ತಿಳಿಸಿದ ಸಚಿವರು ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಯೋಗ್ಯ ಫಲಾನುಭವಿಗಳಿಗೆ ಹಂಚುವಲ್ಲಿ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಸೂಚಿಸಿದರು.

ಮತದಾರರ ಪಟ್ಟಿಯಲ್ಲಿ ಇರುವ ಹೆಸರುಗಳನ್ನು ಯಾವುದೇ ಕಾರಣಕ್ಕೂ ಸಂಬಂದವಿಲ್ಲದ 3ನೇ ವ್ಯಕ್ತಿಯ ಸೂಚನೆ ಸಲಹೆ ಮೇರೆಗೆ ಪಟ್ಟಿಯಿಂದ ತೆಗೆದು ಹಾಕದೆ ಮತದಾರರ ಮನೆಗೆ ಗ್ರಾಮ ಕರಣಿಕರು ಕುದ್ದು ಬೇಟಿ ನೀಡಿ ಅಗತ್ಯ ದಾಖಲಾತಿಗಳನ್ನು ಪಡೆದು ಹೆಸರುಗಳನ್ನು ಪಟ್ಟಿಗೆ ಸೇರಿಸುವ ಅಥವಾ ತೆಗೆದು ಹಾಕುವ ಬಗ್ಗೆ ಕ್ರಮ ವಹಿಸುವಂತೆ ಸಭೆಯಲ್ಲಿ ಹಾಜರಿದ್ದ ಗ್ರಾಮ ಕರಣಿಕ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.  ಸಭೆಯಲ್ಲಿ ಮಂಗಳೂರು ತಾಲೂಕು ತಹಶೀಲ್ದಾರ್ ಆರ್.ಬಿ. ಶಿವಶಂಕರಪ್ಪ ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಾಣಾಧಿಕಾರಿ ಗೋಪಾಲಕೃಷ್ಣ ಭಟ್ ಅವರು ಉಪಸ್ಥಿತರಿದ್ದರು.


Spread the love