ಮಂಗಳೂರು : ರಾಜಕೀಯ ಹಸ್ತಕ್ಷೇಪದಿಂದ ಹದಗೆಟ್ಟ ಕಾನೂನು ಸುವ್ಯವಸ್ಥೆ – ಮಾಜಿ ಸಚಿವ  ಕೃಷ್ಣ ಪಾಲೆಮಾರ್ ಖಂಡನೆ

Spread the love

ಮಂಗಳೂರು :  ಪೋಲೀಸ್ ಇಲಾಖೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಿರುವುದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ  ಅಹಿತಕರ ಘಟನೆಗಳಿಗೆ ಮುಖ್ಯ ಕಾರಣವಾಗಿದೆ. ಕೋಮು ಗಲಭೆ ಆರೋಪಿಯನ್ನು ಬಂಧಿಸಿದ ಪೆÇಲೀಸ್ ಅಧಿಕಾರಿಯ ವಿರುದ್ಧವೇ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿರುವುದು ನಾಚಿಕೆಗೇಡಿನ ವಿಚಾರ ಎಂದು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಜನಪ್ರತಿನಿಧಿಗಳು ಪೋಲೀಸರ ಮೇಲೆ ಒತ್ತಡ ತಂದು  ಆರೋಪಿಗಳನ್ನು ರಕ್ಷಿಸುತ್ತಿರುವ ಬಗ್ಗೆ ಬಿಜೆಪಿ ಹೋರಾಟ ನಡೆಸುತ್ತಲೇ ಬಂದಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪೋಲೀಸರು ಪ್ರತಿಭಟನೆ ನಡೆಸಿದ್ದಾರೆ. ಪೋಲೀಸ್ ಇಲಾಖೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಹಸ್ತಕ್ಷೇಪ ನಡೆಸುತ್ತಿರುವುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನವಾಗಿದೆ. ಪೋಲೀಸ್ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಹಸ್ತಕ್ಷೇಪದಿಂದಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಿಂದು ಸಂಘಟನೆಯ ಕಾರ್ಯಕರ್ತರ ಮೇಲೆ ವಿನಾ ಕಾರಣ ಕೇಸು ದಾಖಲಿಸಲು ಒತ್ತಡ ತರುವ ಕಾಂಗ್ರೆಸ್ ನಾಯಕರು, ಇನ್ನೊಂದೆಡೆ ಸಮಾಜ ಘಾತಕ ಕೃತ್ಯದಲ್ಲಿ ತೊಡಗಿದವರ ರಕ್ಷಣೆಗೆ ನಿಂತಿದ್ದಾರೆ. ಗಂಭೀರ ಪ್ರಕರಣಗಳಲ್ಲಿ ಭಾಗಿಯಾದವರನ್ನು ಸಾಕ್ಷಾಧಾರ ಸಹಿತ ಪೋಲೀಸರು ಬಂಧಿಸಿದರೂ, ಠಾಣೆಗೆ ತರುವ ಮೊದಲೇ ಸಚಿವರು, ಶಾಸಕರು ಬಿಡುಗಡೆ ಮಾಡಲು ಒತ್ತಡ ತರುತ್ತಾರೆ. ಇದರಿಂದ ಅಪರಾಧ ಮಾಡುವವರಿಗೆ ಜಿಲ್ಲೆಯಲ್ಲಿ ಯಾವುದೇ ಭಯ ಇಲ್ಲವಾಗಿದೆ ಎಂದು ಪಾಲೆಮಾರ್ ಆತಂಕ ವ್ಯಕ್ತ ಪಡಿಸಿದ್ದಾರೆ.

ಕಾರಾಗೃಹದಲ್ಲಿ  ಸೇರಿದಂತೆ ಸರಣಿ ಕೊಲೆಗಳು, ಹಿಂದೂ ಯುವಕರ ಮೇಲೆ ಹಲ್ಲೆ, ದನಗಳ್ಳತನ, ಸರಗಳ್ಳತನ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಲೇ ಇದೆ. ರಾಜಕೀಯ ಹಸ್ತಕ್ಷೇಪದಿಂದಾಗಿ ಪೋಲೀಸರು ಅಸಹಾಯಕರಾಗಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆ ವಿರುದ್ಧ ಮಂಗಳೂರು ಗ್ರಾಮಾಂತರ ಪೋಲೀಸರು ಅನಿವಾರ್ಯವಾಗಿ ಪ್ರತಿಭಟಿಸಿದ್ದಾರೆ. ಸಾರ್ವಜನಿಕರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜಿಲ್ಲೆಯ ಎಲ್ಲೆಡೆ ಇಂತಹ ಪ್ರತಿಭಟನೆ ಮರುಕಳಿಸಬಹುದು. ಸಚಿವರ ತಾಳಕ್ಕೆ ಸರಿಯಾಗಿ ಕುಣಿಯುವ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಪಾಲೆಮಾರ್ ಆಗ್ರಹಿಸಿದ್ದಾರೆ.


Spread the love