ಮಂಗಳೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಸಾಂತ್ವನ ಯಾತ್ರೆ ‘ಬದುಕು ಬೇಸಾಯ’

Spread the love

ಮಂಗಳೂರು : ರಾಜ್ಯದ ವಿವಿದೆಡೆ ರೈತರ ಅತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ರೈತರಲ್ಲಿ ಬದುಕುವ ಧೈರ್ಯ ತುಂಬಲು ಆಗಸ್ಟ್ 3ರಿಂದ ರಾಜ್ಯದಲ್ಲಿ ‘ಬದುಕು ಬೇಸಾಯ’ ಎಂಬ ಹೆಸರನಲ್ಲಿ ರೈತರ ಸಾಂತ್ವನ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ.

raita 1

ರೈತರ ಮನ: ಪರಿವರ್ತನೆ ಮಾಡಲು ಹಾಗೂ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶವಾಗಿದೆ. ಬದುಕಿನಲ್ಲಿ ಬರುವ ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಸಮಸ್ಯೆಯನ್ನು ಮೆಟ್ಟಿ ನಿಂತರೆ ಬದುಕು ಹಸನಾಗುತ್ತದೆ ಎನ್ನುವ ಜಾಗೃತಿಯನ್ನು ವಿವರಿಸುವುದು ಯಾತ್ರೆಯ ಉದ್ದೇಶ.
ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು ಈ ಯಾತ್ರೆಯನ್ನು ಸಂಘಟಿಸಿದ್ದು, ತಜ್ಞರ ಸಹಕಾರ ಪಡೆದು ಜನರ ಮನ ಮುಟ್ಟುವ ಬೀದಿ ನಾಟಕ ಹಾಗೂ ಜನಪದ ಹಾಡಿನ ಮೂಲಕ ಈ ಜಾಗೃತಿ ಕಾರ್ಯಕ್ರಮ ನಡೆಸಲಿದೆ. ಆತ್ಮಹತ್ಯೆ ತಡೆಯುವ ಸಂದೇಶವಿರುವ ಬೀದಿನಾಟಕ, ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಿನಲ್ಲಿ ಸಾಧಿಸುವುದಕ್ಕೆ ಇರುವ ಅವಕಾಶ ಹಾಗೂ ಸವಾಲುಗಳನ್ನು ಎದುರಿಸಿ ಬದುಕಿನಲ್ಲಿ ಮುಂದೆ ಸಾಗುವ ಬಗ್ಗೆ ರೈತರಲ್ಲಿ ಹುಮ್ಮಸ್ಸು ಮೂಡಿಸುವ ಸಂದೇಶವನ್ನು ನೀಡಲಾಗುತ್ತದೆ.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಗಳು ಯಾತ್ರಾ ವಾಹನವನ್ನು ಸಜ್ಜುಗೊಳಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಲಾವಿದರಿಗೆ ತರಬೇತಿ ನೀಡಲಾಗಿದ್ದು, ಯಶಸ್ವೀ ರೈತರ ಅನುಭವಗಳು, ಕಷ್ಟಗಳನ್ನು ಎದುರಾದರೂ ಅವಗಳಿಗೆ ಅಂಜದೆ ಕೃಷಿಯಲ್ಲಿ ತೊಡಗಿರುವ ರೈತರ ಅನುಭವಗಳನ್ನು ಯಾತ್ರೆಯಲ್ಲಿ ಕಲಾ ಪ್ರದರ್ಶನಗಳ ಮೂಲಕ ಮಾಹಿತಿ ನೀಡಲಾಗುವುದು. ಈ ವಾಹನ ಜಿಲ್ಲಾದ್ಯಂತ ಸುತ್ತಾಡುತ್ತದೆ. ನಿತ್ಯ 10 ಗ್ರಾಮಗಳಲ್ಲಿ ಪ್ರದರ್ಶನ ನೀಡುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೃಷಿಯನ್ನು ಪ್ರೋತ್ಸಾಹಿಸಿ, ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ನೀಡಿರುವ ಸಂದೇಶವನ್ನು ಧ್ವನಿಮುದ್ರಿಸಲಾಗಿದ್ದು, ಅದನ್ನು ಯಾತ್ರೆಯುದ್ದಕ್ಕೂ ಬಿತ್ತರಿಸಲಾಗುತ್ತದೆ. ಇದಕ್ಕೆ ಪೂರಕವಾದ ಕರಪತ್ರಗಳನ್ನು ವಿತರಿಸಲಾಗುವುದು. ರೈತರ ಆತ್ಮಹತ್ಯೆ ತಡೆ ಜಾಗೃತಿ ಮೂಡಿಸುವ ಫಲಕಗಳನ್ನು ಹೆದ್ದಾರಿಗಳ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ.
ಆಗಸ್ಟ್ 3ರಂದು ಮಂಗಳೂರಿನಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.


Spread the love