ಮಂಗಳೂರು: ಸಾಧಕರಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ; ಮಾರ್ಚ್ 6 ರಂದು ಭಟ್ಕಳದಲ್ಲಿ ಮುಖ್ಯಮಂತ್ರಿಯಿಂದ ವಿತರಣೆ

Spread the love

ಮಂಗಳೂರು: ಕೊಂಕಣಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ತೋರಿದ ಸಾಧಕರಿಗೆ ಕೊಂಕಣಿ ಸಾಹಿತ್ಯ ಅಕಾಡಿಮಿಯ 2015 ನೇ ಸಾಲಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಲಭಿಸಿದೆ.

ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಕೊಂಕಣಿ ಸಾಹಿತ್ಯ ವಿಭಾಗದ ಪ್ರಶಸ್ತಿಗಾಗಿ ಶ್ರೀ ರಾಮಚಂದ್ರ ಎಂ. ಶೇಟ್, ಕಲಾ ವಿಭಾಗದ ಪ್ರಶಸ್ತಿಗಾಗಿ ಶ್ರೀ ಕಾಸರಗೋಡು ಚಿನ್ನಾ, ಜಾನಪದ ಕ್ಷೇತ್ರದ ಪ್ರಶಸ್ತಿಗಾಗಿ ಶ್ರೀ ಆಲೂ ಪೀಲೂ ಮರಾಠಿ, ಇವರನ್ನು ಗೌರವಿಸಲಾಗುವುದು. ಪುಸ್ತಕ ಬಹುಮಾನಕ್ಕಾಗಿ ಕೊಂಕಣಿಗೆ ಭಾಷಾಂತರಕ್ಕಾಗಿ ಓಂ ಗಣೇಶ್ (ಪುಸ್ತಕ – ಭಾಯ್ಲ ಭಾಡೆ ಬಾಯ್ಲ್), ಕೊಂಕಣಿ ಲೇಖನಕ್ಕಾಗಿ ಫಾ. ಡೆನಿಸ್ ಕ್ಯಾಸ್ತೆಲಿನೊ (ಪುಸ್ತಕ-ದಲಿತ್), ಕೊಂಕಣಿ ಅಧ್ಯಯನ ಕೃತಿಗಾಗಿ ಶ್ರೀ ರೊನಿ ಅರುಣ್ (ಪುಸ್ತಕ-ಥಕಾನಾತ್ಲ್ಲೊ ಝುಜಾರಿ), ಯುವ ಪುರಸ್ಕಾರಕ್ಕಾಗಿ ಕು. ಅಂಜಲಿ ವಿಲ್ಸನ್ ವಾಜ್, ಶ್ರೀ ನಸರುಲ್ಲ ಅಸ್ಕೇರಿ, ಶ್ರೀ ರಾಜಾರಾಮ ಪ್ರಭು ಇವರುಗಳನ್ನು ಆರಿಸಲಾಗಿದೆ. ಹಾಗೂ ಕೊಂಕಣಿಗರಾಗಿದ್ದು, ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಸಾಧಕರು ಶ್ರೀ ಸಿಎ ಎಸ್. ಎಮ್ ಸಯ್ಯದ್ ಖಲೀಲ್, ಶ್ರೀ ಪ್ರದೀಪ್ ಜಿ. ಪೈ ಮತು ಶ್ರೀ ಜೊರ್ಜ್ ಫರ್ನಾಂಡಿಸ್, ಇವರನ್ನು ಗೌರವಿಸಲಾಗುವುದು.

ಮಾರ್ಚ್ 6 ರಂದು ಸಂಜೆ 5 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಾಗಯಕ್ಷೆ ಸಭಾಭವನದಲ್ಲಿ ಪ್ರಶಸ್ತಿ ವಿಜೇತರಿಗೆ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯ ರವರು ಗೌರವ ಪ್ರದಾನ ಮಾಡಲಿರುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಶ್ರೀಮತಿ ಉಮಾಶ್ರೀ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಕೈಗಾರಿಕ ಮತ್ತು ಪ್ರವಾಸೋದ್ಯಮ ಖಾತೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಅರ್.ವಿ.ದೇಶಪಾಂಡೆ ಇವರು ಗೌರವ ಉಪಸ್ಥಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಶಕುಂತಲಾ ಟಿ ಶೆಟ್ಟಿ ಹಾಗೂ ಉತ್ತರ ಕನ್ನಡದ ಸಂಸದರಾದ ಅನಂತ ಕುಮಾರ್ ಹೆಗಡೆ ಇವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ, ಭಟ್ಕಳ ವಿಧಾನ ಸಭಾ ಸದಸ್ಯರಾದ ಮಾಂಕಾಳ ವೈದ್ಯ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು, ಅಕಾಡೆಮಿಯ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಇವರು ಪ್ರಾಸ್ತಾವಿಕ ಮಾತುಗಳನ್ನಾಡುವರು.

ಸಂಜೆ 4.00 ಗಂಟೆಗೆ ಪ್ರಶಸ್ತಿ ವಿಜೇತರೊಂದಿಗೆ ವೈಭವದ ಸಾಂಸ್ಕೃತಿಕ ಮೆರವಣಿಗೆಯು ಅಂಜುಮಾನ್ ಗ್ರೌಂಡ್ ನಿಂದ ಹೊರಟು ಮಾರಿಕಟ್ಟಾ ವೃತ್ತ, ಫೂಲ್ ಬಜಾರ್, ನೆಹರೂ ರಸ್ತೆ, ನಾಗರಕಟ್ಟೆಯಿಂದ ನಾಗಯಕ್ಷೆ ಸಭಾಭವನವನ್ನು ತಲುಪಲಿದೆ. ಈ ಮೆರವಣಿಗೆಯಲ್ಲಿ ಕೊಂಕಣಿಯ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಜೇಮ್ಸ್ ಲೋಪಿಸ್ ಮತ್ತು ತಂಡದವರ ಮದರ ತೆರೆಜಾ ಬ್ರಾಸ್ ಬ್ಯಾಂಡ್, ನಾಕುದಾ ಧಪ್ ಮಂಡಳಿಯ ದಫ್, ಲಕ್ಷ್ಮಿ ಸಿದ್ದಿ ಮತ್ತು ತಂಡದವರ ಸಿದ್ದಿ ದಮಾಮ್, ಪುಗ್ಡಿ ನೃತ್ಯ, ವಾಮನ್ ಶಿರ್ಸಾಟ್ ಇವರಿಂದ ನೃತ್ಯ, ಕುಮ್ರಿ ಮರಾಠಿ ಇವರ ಯಕ್ಷಗಾನ ಪ್ರದರ್ಶಿಕೆ, ಹರೀಶ್ ಪಾಲೇಕರ್ ಮತ್ತು ತಂಡದ ಬೇಡರ ನೃತ್ಯ, ಶ್ರೀ ಲಕ್ಷ್ಮಿ ವೆಂಕಟರಮಣ ಮಹಿಳಾ ಚೆಂಡೆ ವೃಂದ ಇವರ ಚಂಡೆ, ನಂದ ಕಲಗುಟಕರ ಇವರಿಂದ ಖೇಳ್ ಪ್ರಸಂಗ, ವಿಷ್ಣುರಾಣಿ ಮತ್ತು ತಂಡದವರ ಧೋಲ್ ನೃತ್ಯ, ಸತೀಶ್ ಬೇಳಾರ್ಕರ್ ಮತ್ತು ತಂಡದಿಂದ ಶಿಗ್ಮೊ ನೃತ್ಯ, ದೈವಜ್ಞ ಮಹಿಳಾ ಸಂಘ ಇವರ ಅಷ್ಟ ಲಕ್ಷ್ಮಿ ರೂಪಕ, ಶಿವಾನಿ ಸುರೇಂದ್ರ ಬಾಂದೇಕರ್ ಮತ್ತು ತಂಡದ ತೊಣಿಯಾ ನೃತ್ಯ ಈ ಎಲ್ಲಾ ಪ್ರದರ್ಶನಗಳಿರುತ್ತದೆ.

ಮಾರ್ಚ್ 5 ರಂದು 5 ಗಂಟೆಗೆ ಕೊಂಕಣಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ನಡೆಯಲಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾಂಬಾರು ಮಂಡಳಿ ಮತ್ತು ತಂಝಿಂ ಭಟ್ಕಳ, ಇದರ ಅಧ್ಯಕ್ಷರಾದ ಶ್ರೀ ಮುಝಾಂಬಿಲ್ ಕಾಝಿಯಾ, ಭಟ್ಕಳ ಪುರಸಭಾ ಅಧ್ಯಕ್ಷರಾದ ಶ್ರೀ ಮಂಜಮ್ಮ ರವೀಂದ್ರ, ತಾಲೂಕು ಪಂಚಾಯತ್ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾಂತಿ ಜಗದೀಶ್ ಸುಕ್ರನ್ ಮನೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ ರಹೀಮ್, ಸೇವಾವಾಹಿನಿ ಇದರ ಅಧ್ಯಕ್ಷರಾದ ಶ್ರೀ ಸುರೇಂದ್ರ ಶ್ಯಾನುಭಾಗ್, ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಖಾದಿರ್ ಮೀರಾ ಪಠೇಲ್, ಭಟ್ಕಳದ ಉದ್ಯಮಿ ಶ್ರೀ ರಾಜೇಶ್ ನಾಯಕ್, ಸಾಮಾಜಿಕ ಮುಂದಾಳು ಮತ್ತು ವಕೀಲಾಗಿರುವ ಶ್ರೀ ವಿಕ್ಟರ್ ಗೋಮ್ಸ್, ಕಥೋಲಿಕ ಸಭಾದ ಅಧ್ಯಕ್ಷರಾದ ಶ್ರೀ ಜೊನ್ ಫ್ರಾನ್ಸಿಸ್ ಗೋಮ್ಸ್, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಜನ ಸಭಾದ ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಅರ್ಬನ್ ಕೋ ಅಪರೇಟಿವ್ ಬ್ಯಾಂಕ್ನ ಜನರಲ್ ಮ್ಯಾನೇಜರ್ ಮತ್ತು ನಾಕುದಾಲ್ದಿ ಸಮುದಾಯದ ಮುಂದಾಳು ಶ್ರೀ ಅಬ್ದುಲ್ ರಜಾಕ್ ಸಾರಂಗ್, ಜಿ.ಎಸ್.ಬಿ. ಸಮಾಜದ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಕಾಮತ್, ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ಶ್ರೀ ರಾಮದಾಸ ಪ್ರಭು ಇವರುಗಳು ಅತಿಥಿಗಳಾಗಿ ಭಾಗವಹಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಇವರು ವಹಿಸಿಕೊಳ್ಳಲಿದ್ದಾರೆ.

ಕೊಂಕಣಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕೊಂಕಣಿಯ ವೈವಿಧ್ಯಮಯ ಜಾನಪದ ನೃತ್ಯ, ಸಂಗೀತ ರಸಸಂಜೆ ಮತ್ತು ನಾಟಕ ಮತ್ತು ಗಝಲ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಂಕಣಿ ಖಾರ್ವಿ ಕಲಾ ಮಾಂಡ್ ಭಟ್ಕಳ ಇವರಿಂದ ಖಾರ್ವಿ ಜಾನಪದ ನೃತ್ಯ, ಮೇಸ್ತ ಕಲಾ ತಂಡ ಶಿರೂರು ಇವರಿಂದ ಮೇಸ್ತ ಜಾನಪದ ನೃತ್ಯ, ಕರಾವಳಿ ಬಳಗ ಹೊನ್ನಾವರ ಇವರಿಂದ ನೃತ್ಯ ಮತ್ತು ಹಾಡುಗಳು, ಝೇಂಕಾರ ಮೆಲೋಡಿಸ್ ಭಟ್ಕಳ ಇವರಿಂದ ಕೊಂಕಣಿ ಸಂಗೀತ ರಸಮಂಜರಿ, ಲೂರ್ಡ್ಸ್ ಚರ್ಚ್ ಮಂಡಳಿ, ಮುಂಡಳ್ಳಿ ಇವರಿಂದ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ, ನವಾಯತಿ ಮೆಹಫಿಲ್, ಭಟ್ಕಳ ಇವರಿಂದ ಗಝಲ್ ಮತ್ತು ನಾಟಕ ಕಾರ್ಯಕ್ರಮ, ನಯನ ನೃತ್ಯ ನಿಕೇತನ ಭಟ್ಕಳ ಇವರಿಂದ ಭರತನಾಟ್ಯ ಕಾರ್ಯಕ್ರಮ ಪ್ರದರ್ಶನವಿರುತ್ತದೆ.


Spread the love