ಮಂಗಳೂರು: ಸಾರ್ಥಕ ಜೀವನದ ಯಶಸ್ವಿ ಅಮೃತೋತ್ಸವ ಆಚರಣೆಯಲ್ಲಿ ಫಾ| ಮಥಾಯಸ್ ಪಿರೇರಾ

Spread the love

ಮಂಗಳೂರು: ಅತ್ಯಂತ ಸರಳ ವ್ಯಕ್ತಿತ್ವ, ಬಡವರ ಸೇವೆಗಾಗಿ ಸದಾ ಸಿದ್ಧವಿರುವ, ಜನಸಾಮಾನ್ಯರಲ್ಲಿ ಸಾಮಾನ್ಯವಾಗಿ ಬೆರೆತು, ಅತ್ಯಂತ ಸೂಕ್ಷ್ಮವಾದ ವ್ಯಕ್ತಿತ್ವ ಹೊಂದಿರುವ ವಂದನೀಯ ಧರ್ಮ ಗುರುಗಳಾದ ಮಥಾಯಸ್ ಪಿರೇರಾರವರು ತಮ್ಮ ಜೀವನದ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದಾರೆ.

2

ಕಾರ್ಕಳ ತಾಲೂಕು ಮಿಯಾರ್‍ನ ಜೇಕಬ್ ಮತ್ತು ಮಗ್ದಲಿನ್ ಪಿರೇರಾ ಇವರ 11 ಜನ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ಇವರು ತಮ್ಮ ಕುಟುಂಬದ ಕೀರ್ತಿಯನ್ನು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಟೌನ್ ಕ್ರೈಸ್ಟ್ ಕಿಂಗ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ, ಬೋರ್ಡ್ ಹೈಸ್ಕೂಲ್ ಕಾರ್ಕಳದಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಇವರ ಹೃದಯ ಬಡವರಿಗಾಗಿ ಮಿಡಿಯುತ್ತಿತ್ತು.  ಅವರಿಗಾಗಿ ತನ್ನ ಜೀವನದಲ್ಲಿ ಏನಾದರೂ ಮಾಡಬೇಕು ಎಂಬ ಹಂಬಲವೂ ಇವರದಾಗಿತ್ತು. ಇದಕ್ಕಾಗಿ ಅವರು ಧಾರ್ಮಿಕ ಜೀವನದ ಹಾದಿ ಹಿಡಿದು ಸೆಮಿನರಿಗೆ ಭರ್ತಿಗೊಂಡು ಧಾರ್ಮಿಕ ಜೀವನದ ತರಬೇತಿ ಪಡೆದರು.

31.12.1970 ರಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮ ಗುರುಗಳಾಗಿ ದೀಕ್ಷೆ ಪಡೆದರು.  ಆರಂಭದಲ್ಲಿ ವಲೆನ್ಸಿಯಾ ದೇವಾಲಯದಲ್ಲಿ 2 ವರ್ಷಗಳ ಕಾಲ ಸಹಾಯಕ ಧರ್ಮ ಗುರುಗಳಾಗಿ ತಮ್ಮ ಉದಾರ ಸೇವೆಯನ್ನು ನೀಡಿದ ನಂತರ ಇವರಲ್ಲಿ ಇರುವ ಪ್ರತಿಭೆಯನ್ನು ಕಂಡು ಮಂಗಳೂರು ಧರ್ಮಪ್ರಾಂತ್ಯದ ಏಕೈಕ ತುಳು ಭಾಷಿಕರ ದೇವಾಲಯ ಪಾವೂರಿನಲ್ಲಿ ಧರ್ಮ ಗುರುಗಳಾಗಿ ನಿಯೋಜಿಸಿದರು. ಇಲ್ಲಿ ಇರುವ ಎಲ್ಲಾ ನಿವಾಸಿಗಳಿಗೂ ಅಚ್ಚುಮೆಚ್ಚಿನ ಧರ್ಮ ಗುರುಗಳಾಗಿ ಅವರ ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಸಿ ಅವರಿಗೆ ಆರ್ಥಿಕ ಹಾಗೂ ಆಧ್ಯಾತ್ಮಿಕವಾಗಿ ನೆರವಾದರು.

ಇಲ್ಲಿ ಕೆಲ ಕುಟುಂಬಗಳಿಗೆ ಮನೆ ನಿರ್ಮಿಸಿ ಅವರು ಮಾಡುವಂತಹ ಗುಡಿ ಕೈಗಾರಿಕೆಗಳಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಸರಕಾರದಿಂದ ಸಿಗುವ ಸೌಲಭ್ಯ ಮತ್ತಿತರ ಸಂಘ-ಸಂಸ್ಥೆಗಳಿಂದ ಅವರ ಕುಲಕಸುಬುಗಳನ್ನು ಇನ್ನಷ್ಟು ಬಲಪಡಿಸುವಲ್ಲಿ ಇವರ ಸೇವೆ ಅತ್ಯಮೂಲ್ಯವಾದದು. ನಂತರ ಅವರು ಅರ್ವ ದೇವಾಲಯದಲ್ಲಿ ಹಲವಾರು ಬಡಕುಟುಂಬಗಳಿಗೆ ಆರ್ಥಿಕ ಸಹಾಯ, ಕಡಿಮೆ ದರದಲ್ಲಿ ಜಾಗ ಒದಗಿಸಲು ನೆರವಾದರು. ಇಲ್ಲಿ ಇರುವ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲು ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಅವರ ಜೀವನವನ್ನು ರೂಪಿಸುವಲ್ಲಿ ಸಹಕಾರಿಯಾದರು.

1

ಇವರ 7 ವರ್ಷಗಳ ಸೇವೆಯಲ್ಲಿ ಪಾಲಡ್ಕ ದೇವಾಲಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿತು. ಇವರ ಧಾರ್ಮಿಕ ಜೀವನ ಹಲವಾರು ಕುಟುಂಬಗಳಿಗೆ ಮಾದರಿಯಾಗಿದೆ. ಇಲ್ಲಿಯ ದೇವಾಲಯದ 75ನೇ ವರ್ಷಾಚರಣೆ ಸವಿನೆನಪಿಗಾಗಿ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣ, ಸಾವೆರಾಪುರದಲ್ಲಿ ನೂತನ ಧರ್ಮಕೇಂದ್ರವು ಸೇರಿದಂತೆ ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಇವರು ನಾಂದಿಯಾಗಿದ್ದಾರೆ. 3 ವರ್ಷಗಳ ಕಾಲ ಬೀದರ್‍ನಲ್ಲಿ ಮಿಷನರಿಯಾಗಿ ಅಲ್ಲಿ ಇರುವ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸಿ ಅವರಿಗೆ ಅಧ್ಯಾತ್ಮಿಕವಾಗಿ ಬಲಗೊಳ್ಳುವಲ್ಲಿಯೂ ಇವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯವಾಗಿದೆ.

ವಾಮಂಜೂರು ಕೃಷಿ ಶಾಲೆಯಲ್ಲಿ ನಿರ್ದೇಶಕರಾಗಿ, ರೋಜಾ ಮಿಸ್ತಿಕಾ ಕಾನ್ವೆಂಟ್‍ನಲ್ಲಿ ಚಾಪ್ಲೆನ್ ಆಗಿ ತಮ್ಮ ನಿಸ್ವಾರ್ಥ ಸೇವೆಯನ್ನು ನೀಡಿರುತ್ತಾರೆ. ಮೂಲ್ಕಿಯ ನೂತನ ದೇವಾಲಯ, ಗುರುಗಳ ನಿವಾಸ, ಉತ್ತಮವಾದ ರೀತಿಯಲ್ಲಿ ಪರಿಸರ ಮತ್ತು ತೋಟಗಾರಿಕೆ ಇವರ ಸೇವೆಗೆ ಹಿರಿಮೆಯಾಗಿದೆ.  ಬಜ್ಪೆ ಸಂತ ಜೋಸೆಪ್ ಆರ್ಕೆಡ್, ಕಮರ್ಷಿಯಲ್ ಕಟ್ಟಡ ರಚನೆ ಮತ್ತು ಹಲವಾರು ಸಂಘ ಸಂಸ್ಥೆಗಳೊಂದಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿರುವುದರಿಂದ ಸತತ ಏಳು ವರ್ಷಗಳ ಕಾಲ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಇಂದಿಗೂ ಜನರು ಕೊಂಡಾಡುತ್ತಾರೆ.

ಪ್ರಸ್ತುತ ಮೊಗರ್ನಾಡ್ ದೇವಾಲಯದ ಧರ್ಮಗುರುಗಳಾಗಿ ಸೇವೆ ನೀಡುತ್ತಿರುವ ಇವರು ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ, ಸಂತ ಅಂತೋನಿ ಪ್ರೌಢಶಾಲೆ ಹಾಗೂ ದೇವಮಾತಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಚಾಲಕರಾಗಿ ಈ ವಿದ್ಯಾಸಂಸ್ಥೆಗಳನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುವಂತೆ ಶ್ರಮಿಸಿರುತ್ತಾರೆ.  ಇವರ ಮುಂದಾಳುತ್ವದಲ್ಲಿ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲಾ 125 ವರುಷಗಳ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮವು ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ದೇವಮಾತಾ ಆಂಗ್ಲ ಮಾಧ್ಯಮ ಶಾಲೆಗೆ ಹೆಚ್ಚುವರಿ ತರಗತಿ ಕೊಠಡಿಗಳನ್ನು ನಿರ್ಮಾಣ ಮಾಡಿರುತ್ತಾರೆ.

ಇವರ ಆದರ್ಶ ಜೀವನ ಆಧ್ಯಾತ್ಮಿಕತೆಯೊಂದಿಗೆ ಸಮಾಜ ಸೇವೆ ಮಾದರಿಯಾಗಿದೆ.  ಇವರ ಸೇವೆಯು ಫಲಪ್ರದವಾಗಿಯೂ ಆಗಿದೆ. ತನ್ನ ಜೀವನದ ಅಮೃತೋತ್ಸವ ಸಂದರ್ಭದಲ್ಲಿ ಇವರು ಮಾಡಿದ ಬಡ ಜನರಿಗಾಗಿ ಸೇವೆಯೂ ಅಜರಾಮರವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾದ ಫಾ| ಮಥಾಯಸ್ ಪಿರೇರಾರವರು ಯಶಸ್ವಿಯಾಗಲಿ.


Spread the love