‘ವಿದ್ಯಾವಂತ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಯನ್ನು ಬೆಂಬಲಿಸಿ’ – ವಸಂತ ಬಂಗೇರ

Spread the love

‘ವಿದ್ಯಾವಂತ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಯನ್ನು ಬೆಂಬಲಿಸಿ’ – ವಸಂತ ಬಂಗೇರ

ನೆಲ್ಯಾಡಿ(ಉಪ್ಪಿನಂಗಡಿ): ‘ಲೋಕಸಭೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಒಂದು ಬಾರಿಯೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಧ್ವನಿಯನ್ನು ಎತ್ತದ, ಬಿಜೆಪಿ ಅಭ್ಯರ್ಥಿಯ ಬದಲು, ಕಾಂಗ್ರೆಸ್ ಪಕ್ಷದ ವಿದ್ಯಾವಂತ ಯುವ ಅಭ್ಯರ್ಥಿ ಮಿಥುನ್ ರೈ ಸುಶಿಕ್ಷಿತರಾಗಿದ್ದು ಇವರನ್ನು ಪ್ರಚಂಡ ಬಹುಮತದಿಂದ ಜಿಲ್ಲೆಯ ಪ್ರಜ್ಞಾವಂತ ಮತದಾರರು ಗೆಲ್ಲಿಸಿಕೊಡಬೇಕು’ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.

ಸೋಮವಾರ ಕೊಕ್ಕಡದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಮಿಥುನ್ ರೈ ಸಾಮಾಜಿಕ, ಜನಪರ ಕಾಳಜಿ ಇರುವ ಯುವಕನಾಗಿದ್ದು, ಜಿಲ್ಲೆಯ ಅಭಿವೃದ್ಧಿಗಾಗಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದರು.

ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ‘ಮಿಲಿಟರಿ ನಡೆಸಿದ ಕಾರ್ಯಾಚರಣೆ ಪಕ್ಷದ ಲಾಭಕ್ಕಾಗಿ ಬಳಸಲು ಮುಂದಾದ ಬಿಜೆಪಿ ಈ ರೀತಿಯಾಗಿ ದೇಶ ಪ್ರೇಮವನ್ನು ತೋರಿಸುತ್ತದೆ, ಆದರೆ ದೇಶಕ್ಕಾಗಿ ಪ್ರಾಣ ತೆತ್ತ ನಾಯಕರು ಇದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ’ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಮತ ಯಾಚನೆ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿದರು.

ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎ.ಸಿ. ಜಯರಾಜ್, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವೀಕ್ಷಕ ನವೀನ್ ಚಂದ್ರ ಶೆಟ್ಟಿ ಕಾಪು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಕಾಮತ್, ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಕೊಕ್ಕಡ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಣ್ಣಪ್ಪ ಗೌಡ ಕಾಶಿ, ಕೊಕ್ಕಡ ಯೂತ್ ಕಾಂಗ್ರೆಸ್‌ನ ಖಲಂದರ್ ಹಳ್ಳಿಂಗೇರಿ, ಜೆಸ್ಟಿನ್ ಕೊಕ್ಕಡ ಇದ್ದರು.


Spread the love