ಸಂಘ ಪರಿವಾರದ ಗೂಂಡಾಗಳನ್ನು ಸರಕಾರ ಬಂಧಿಸಿಲ್ಲವೇಕೆ ? ಸಿಪಿಐ ಪ್ರಶ್ನೆ

Spread the love

ಮಂಗಳೂರು: ಜೆಎನ್‍ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ, ಎಐಎಸ್‍ಎಫ್ ನಾಯಕ ಕನ್ನಯ್ಯ ಕುಮಾರ್ ಮೇಲಿನ ಪೂರ್ವಯೋಜಿತ ದೇಶದ್ರೋಹದ ಆರೋಪ ಹಾಗೂ ಹೈದರಾಬಾದ್ ವಿ.ವಿ.ಯ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಗಳ ಸತ್ಯಾಸತ್ಯತೆ ಕುರಿತ ಕರಪತ್ರಗಳನ್ನು ತುಮಕೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹಂಚುತ್ತಿದ್ದ ಎಐಎಸ್‍ಎಫ್ ಹಾಗೂ ಎಐಟಿಯುಸಿ ಕಾರ್ಯಕರ್ತರ ಮೇಲೆ ಎಬಿವಿಪಿ ಮತ್ತು ಸಂಘಪರಿವಾರದ ಗೂಂಡಾಗಳು ನಡೆಸಿರುವ ಮಾರಣಾಂತಿಕ ಹಲ್ಲೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ ಮತ್ತು ಉಡುಪಿ ಜಿಲ್ಲಾ ಮಂಡಲಿ ಖಂಡಿಸಿದೆ.
ಸಂಘ ಪರಿವಾರದ ಸುಮಾರು 60ಕ್ಕೂ ಮಿಕ್ಕಿದ ಗೂಂಡಾಗಳು ಸಾರ್ವಜನಿಕವಾಗಿ ಹಲ್ಲೆ ನಡೆಸಿದರೂ ಪೋಲೀಸರು ಇವರ್ಯಾರನ್ನೂ ಬಂಧಿಸದೆ ಇರುವುದು ರಾಜ್ಯ ಸರಕಾರ ಗೂಂಡಾಗಿರಿಯನ್ನು ಬೆಂಬಲಿಸುತ್ತಿದೆಯೇ ಎಂದು ಪಕ್ಷ ಸರಕಾರವನ್ನು ಪ್ರಶ್ನಿಸಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅಧಿಕಾರಕ್ಕೇರಿದಂದಿನಿಂದ ದೇಶದಲ್ಲಿ ಪ್ರಗತಿಪರರ ಮೇಲೆ ನಿರಂತರ ಹಲ್ಲೆಯಾಗುತ್ತಿದೆ. ಸರಕಾರದ ನೀತಿಗಳನ್ನು ಪ್ರಶ್ನಿಸುವವರ ಮೇಲೆ ತಮ್ಮ ಫ್ಯಾಸಿಸಂ ಗೂಂಡಾಗಳನ್ನು ಛೂ ಬಿಟ್ಟು ಜನರ ಜೀವದ ರಕ್ಷಣೆಗೆ ಸವಾಲೊಡ್ಡುತ್ತಿದೆ.
ಪೊಲೀಸರೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದರೂ ಯಾರೊಬ್ಬರನ್ನೂ ಬಂಧಿಸದಿರುವುದು ಖಂಡನೀಯವಾಗಿದೆ. ದಾಳಿಕೋರರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಸಿಪಿಐ ಒತ್ತಾಯಿಸಿದೆ.


Spread the love