ಸಂಸ್ಕೃತಾಸಕ್ತರ ಅಭ್ಯಾಸ ವರ್ಗ ಶುಭಾರಂಭ

Spread the love

ಸಂಸ್ಕೃತಾಸಕ್ತರ ಅಭ್ಯಾಸ ವರ್ಗ ಶುಭಾರಂಭ

ಮಂಗಳೂರು : ಸಂಸ್ಕೃತ ಭಾರತೀ ಮಂಗಳೂರು ಹಾಗೂ ರಾಮಕೃಷ್ಣ ಮಠ ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ದಿನಾಂಕ 17-7-2016 ಭಾನುವಾರದಂದು ಸಂಸ್ಕೃತಾಸಕ್ತರ ಅಭ್ಯಾಸ ವರ್ಗವನ್ನು ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿತ್ತು.
ರಾಮಕೃಷ್ಣ ಮಠದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಅವರು ಬೆಳಿಗ್ಗೆ 10 ಗಂಟೆಗೆ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು.
ತದನಂತರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು; “ಹಿಂದಿನ ಕಾಲದಲ್ಲಿ ಭಾರತದ ಉದ್ದಗಲಕ್ಕೂ ಸಂಸ್ಕೃತ ಭಾಷೆಯೇ ಪ್ರಮುಖ ಸಂಪರ್ಕ ಮಾಧ್ಯಮವಾಗಿತ್ತು. ದೇಶದ ಹಲವು ಭಾಷೆಗಳಲ್ಲಿ ಇಂದಿಗೂ ಸಂಸ್ಕೃತವು ಸಮ್ಮಿಲಿತವಾಗಿರುವುದನ್ನು ನಾವು ಕಾಣಬಹುದು. ಸಂಸ್ಕೃತ ಭಾರತಿಯ ಅದ್ಭುತ ಪ್ರಯತ್ನದ ಫಲವಾಗಿ ಸಂಸ್ಕೃತವು ಇಂದು ಪುನ: ಜನಮನದ ಭಾಷೆಯಾಗುತ್ತ ದಾಪುಗಾಲಿಡುತ್ತಿದೆ. ಹಾಗಾಗಿ ಈ ಸತ್ ಚಿಂತನೆಗೆ ರಾಮಕೃಷ್ಣ ಮಠದ ಸಂಪೂರ್ಣ ಸಹಕಾರವಿದೆ” ಎಂದು ಹರಸಿದರು.

KIR_9504

ಇಡೀ ದಿನ ನಡೆದ ಈ ಅಭ್ಯಾಸ ವರ್ಗದಲ್ಲಿ ಕೊಡಗು, ಕಾಸರಗೋಡು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರಾಂತ ಸಂಘಟನಾ ಕಾರ್ಯದರ್ಶಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ವರ್ಗದಲ್ಲಿ ಈ ವರ್ಷ ನಡೆಯಲಿರುವ “ಸಂಭಾಷಣಾ ಶಿಬಿರಾಭಿಯಾನ” ಇತ್ಯಾದಿ ಹಲವು ಕಾರ್ಯಕ್ರಮಗಳ ನಿರ್ಣಯಗಳನ್ನು ಸ್ವೀಕರಿಸಲಾಯಿತು. ಸಂಸ್ಕೃತ ಪ್ರಚಾರ-ಪ್ರಸಾರಕ್ಕಾಗಿ ಹಲವು ಕಾರ್ಯಕರ್ತರಿಗೆ ಜವಾಬ್ದಾರಿಗಳನ್ನು ಘೋಷಿಸಲಾಯಿತು.
ಶ್ರೀಧರ ಅಚಾರ್ಯ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾಪಿಸಿದರು. ಸತೀಶ್ ರಾವ್, ಕುಮಾರ ಬಾಗೇವಾಡಿಮಠ, ಉಮಾಮಹೇಶ್ವರ ಎನ್ ಮುಂತಾದವರು ಭಾಗವಹಿಸಿದ್ದರು. ಸಂಸ್ಕೃತ ಭಾರತೀ ಮಂಗಳೂರು ಮಹಾನಗರ ಸಂಯೋಜಕರಾದ ಕೆ ವಿ ಸತ್ಯನಾರಾಯಣ ಹಾಗೂ ರಂಗನಾಥ ಅಭ್ಯಾಸವರ್ಗ ಕಾರ್ಯಕ್ರವನ್ನು ಸಂಯೋಜಿಸಿದರು.


Spread the love