ಸಮೀರ ಗಾಯಕವಾಡ ಮತ್ತು ಡಾ.ತಾವಡೆಯವರನ್ನು ಬಲಿಪಶು ಮಾಡಬೇಡಿ ! ಸನಾತನ ಸಂಸ್ಥೆ

Spread the love

ಸಮೀರ ಗಾಯಕವಾಡ ಮತ್ತು ಡಾ.ತಾವಡೆಯವರನ್ನು ಬಲಿಪಶು ಮಾಡಬೇಡಿ ! ಸನಾತನ ಸಂಸ್ಥೆ

ಕೊಲ್ಹಾಪುರ : ಕಾ. ಪಾನಸರೆ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರ ವಿಶೇಷ ತನಿಖಾ ದಳ (ಎಸ್‌ಐಟಿ)ಸುಳ್ಳು ಪುರಾವೆಗಳ ಆಧಾರದಲ್ಲಿ ಮತ್ತು ಕಪೋಲಕಲ್ಪಿತ ಕಥೆಗಳನ್ನು ಕಟ್ಟಿ ಸನಾತನ ಸಂಸ್ಥೆಯ ತೇಜೋವಧೆ ಮಾಡುತ್ತಿದೆ. ಡಾ. ವೀರೆಂದ್ರಸಿಂಹ ತಾವಡೆಯವರು ಒಬ್ಬ ‘ಎಮ್.ಎಸ್’ ಡಾಕ್ಟರ್ ಆಗಿದ್ದು ಅವರನ್ನು ಒಂದು ವ್ಯಾಪಕ ಸಂಚಿನ ಮೂಲಕ ಈ ಕೊಲೆಯಲ್ಲಿ ಸಿಲುಕಿಸಲಾಗುತ್ತಿದೆ. ವಿಶೇಷ ತನಿಖಾ ದಳದ ಪೊಲೀಸರು ಕಾನೂನುಬಾಹಿರವಾಗಿ ವರ್ತಿಸಿ ಹಾಗೂ ಮಾನವಾಧಿಕಾರವನ್ನು ಉಲ್ಲಂಘಿಸಿ ಸನಾತನ ಸಂಸ್ಥೆಯ ಸಾಧಕರಿಗೆ ಕಿರುಕುಳ ನೀಡುತ್ತಿದ್ದಾರೆ. ಕಾ.ಪಾನಸರೆ ಹತ್ಯೆಪ್ರಕರಣದಲ್ಲಿ ಪೊಲೀಸರು ಸನಾತನದ ಸಾಧಕ ಶ್ರೀ. ಸಮೀರ ಗಾಯಕವಾಡ್ ಇವರನ್ನು ೧೬ ಸೆಪ್ಟೆಂಬರ್ ೨೦೧೫ ರಂದು ಶಂಕಿತನೆಂದು ಬಂಧಿಸಿ ಒಂದು ವರ್ಷ ಪೂರ್ಣವಾಗಿದೆ. ಡಿಸೆಂಬರ್ ೨೦೧೫ ರಲ್ಲಿ ಆರೋಪಪತ್ರ ದಾಖಲಿಸಿಯೂ ಮೇ ೨೦೧೬ ತನಕ ಖಟ್ಲೆ ನಡೆಸಲು ಪೊಲೀಸರು ಸಿದ್ಧವಿರಲಿಲ್ಲ. ಸಮೀರ ಗಾಯಕವಾಡರಂತೆ ಡಾ. ತಾವಡೆಯವರನ್ನೂ ಅನೇಕ ದಿನಗಳ ಕಾಲ ಸೆರೆಮನೆಯಲ್ಲಿ ದಬ್ಬಿಡಲು ಹರಸಾಹಸ ನಡೆಯುತ್ತಿದೆ. ನಿಜವಾದ ಆರೋಪಿ ಸಿಗುತ್ತಿಲ್ಲವೆಂದು ಸಮೀರ ಗಾಯಕವಾಡ ಮತ್ತು ಡಾ.ತಾವಡೆಯವರನ್ನು ಬಲಿಪಶು ಮಾಡಬೇಡಿ, ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕರು ಇಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

pressphoto-1

ವಿಶೇಷ ತನಿಖಾ ದಳದ ಪೊಲೀಸರ ಕಾನೂನುಬಾಹಿರ ವರ್ತನೆ

೧. ಸಿಬಿಐ ದಾಳಿ ಮಾಡಿಯೂ ಆಕ್ಷೇಪಾರ್ಹವೇನೂ ಸಿಗದಿದ್ದರೂ ವಿಶೇಷ ತನಿಖಾ ದಳವು ಡಾ.ತಾವಡೆಯವರ ಮನೆ ಮತ್ತು ಸನಾತನದ ದೇವದ್ ಆಶ್ರಮದ ಮೇಲೆ ಗಣೇಶ ಚತುರ್ಥಿಯಂದೇ ದಾಳಿ ಮಾಡಿತು. ಈ ದಾಳಿಯಲ್ಲಿ ಆಕ್ಷೇಪಾರ್ಹವೇನೂ ಸಿಗದಿರುವುದರಿಂದ ಪೊಲೀಸ್ ಅಧಿಕಾರಿಗಳು ಆಶ್ರಮದ ಆಸ್ಪತ್ರೆಯಲ್ಲಿ ಅಧಿಕೃತವಾಗಿ ಇಡುವ ಕೆಲವು ಔಷಧಿಗಳನ್ನು ಜಪ್ತಿ ಮಾಡಿದರು. ಈ ಔಷಧಿ ‘ಸೈಕೆಟ್ರಿಕ್ ಔಷಧಿ’ಗಳಿರುವಾಗ ಅದನ್ನು ಪೊಲೀಸರು ಉದ್ದೇಶಪೂರ್ವಕವಾಗಿ ‘ನಾರ್ಕೋಟಿಕ್ ಡ್ರಗ್ಸ್’ ಆಗಿದೆ ಎಂದು ಸುಳ್ಳು ಮಾಹಿತಿಯನ್ನು ಪತ್ರಕರ್ತರಿಗೆ ನೀಡಿದರು. ಇಷ್ಟೇ ಅಲ್ಲದೇ, ಆಶ್ರಮದಲ್ಲಿ ಸಾಧಕರಿಗೆ ತೀರ್ಥದಿಂದ ಸಮ್ಮೋಹಿತಗೊಳಿಸುವ ಔಷಧಿ ನೀಡಲಾಗುತ್ತಿದೆ ಎಂಬ ಸುಳ್ಳು ಮಾಹಿತಿಯನ್ನು ನ್ಯಾಯಾಲಯಕ್ಕೆ ಹಾಗೂ ಮಾಧ್ಯಮಗಳಿಗೆ ನೀಡಲಾಯಿತು. ಇದರಿಂದ ತನಿಖೆಗಿಂತ ಸನಾತನದ ತೇಜೋವಧೆ ಮಾಡುವುದರಲ್ಲಿ ಪೊಲೀಸರಿಗೆ ಹೆಚ್ಚು ಆಸಕ್ತಿ ಇರುವುದು ಕಂಡು ಬರುತ್ತಿದೆ.

೨. ‘ಡಾ. ತಾವಡೆಯವರ ತನಿಖೆಯ ಅವಧಿಯಲ್ಲಿ ಅವರ ನ್ಯಾಯವಾದಿಗಳನ್ನು ಭೇಟಿಯಾಗಲು ಅವಕಾಶ ಕೊಡಬೇಕು’ ಎಂದು ನ್ಯಾಯಾಲಯವು ಸೆಪ್ಟೆಂಬರ್ ೩ ರಂದು ಸಂಜೆ ಆದೇಶಿಸಿತ್ತು. ಆದರೆ ಸೆಪ್ಟೆಂಬರ್ ೪ ರಂದು ಪೊಲೀಸ್ ಕಾರ್ಯಾಲಯದಲ್ಲಿ ನ್ಯಾಯವಾದಿ ಶ್ರೀ. ವೀರೆಂದ್ರ ಇಚಲಕರಂಜಿಕರ್ ಇವರನ್ನು ಕಾಯುವಂತೆ ಮಾಡಿ ಡಾ. ತಾವಡೆಯವರನ್ನು ಭೇಟಿಯಾಗಲು ಬಿಡಲಿಲ್ಲ. ಮುಂದೆ ರವಿವಾರದ ಕಾರಣ ಹೇಳಿ ಅವರ ಆ ಕುರಿತಾದ ಪತ್ರವನ್ನು ಸ್ವೀಕರಿಸಲಿಲ್ಲ. ಅನಂತರವೂ ನ್ಯಾಯವಾದಿ ಇಚಲಕರಂಜಿಕರ್ ಇವರು ಈ ಬಗ್ಗೆ ಇಮೇಲ್ ಮತ್ತು ಫ್ಯಾಕ್ಸ್ ಕಳುಹಿಸಿಯೂ ಅವರಿಗೆ ಆ ಬಗ್ಗೆ ತಿಳಿಸಲಿಲ್ಲ.

೩. ದೇವದ ಆಶ್ರಮದಲ್ಲಿ ಮುಂಜಾನೆ ೪.೩೦ ರ ವರೆಗೆ ಮಹಿಳಾ ಸಾಧಕರ ತನಿಖೆ ನಡೆಸಲಾಯಿತು.ಕಾನೂನುಪ್ರಕಾರ ಸಾಯಂಕಾಲ ೬ ರ ನಂತರ ಮಹಿಳೆಯರ ತನಿಖೆ ಮಾಡಬಾರದು, ಎಂದಿದ್ದರೂ ವಿಶೇಷ ತನಿಖಾ ದಳವು ಕಾನೂನನ್ನು ಉಲ್ಲಂಘಿಸಿತು.

೪. ಔಷಧಿ ಜಪ್ತಿ ಮಾಡಿದ ನಂತರ ಆ ಬಗ್ಗೆ ಮಾನಸೋಪಚಾರ ತಜ್ಞರ ತನಿಖೆ ಮಾಡುವಾಗ “ಇಷ್ಟು ದೊಡ್ಡ ಪ್ರಮಾಣದಲ್ಲಿ ಔಷಧಿಗಳು ಆಶ್ರಮಕ್ಕೆ ಏಕೆ ಬೇಕಾಗುತ್ತದೆ? ಈ ಸಂಗ್ರಹ ೩-೪ ಆಸ್ಪತ್ರೆಗಳಿಗೆ ಸಾಕಾಗುವಷ್ಟಿದೆ. ಇಡೀ ದೆಹಲಿ ನಗರಕ್ಕೆ ಇಷ್ಟು ಔಷಧಿಸಂಗ್ರಹ ಸಾಕಾಗುತ್ತದೆ’, ಮುಂತಾದ ವ್ಯಂಗ್ಯವಾದ ಪದಗಳನ್ನು ಉದ್ಧಟವಾಗಿ ಬಳಸಿ ಒತ್ತಡ ಹೇರಲು ಪ್ರಯತ್ನಿಸಿದರು.

೫. ತನಿಖೆಗಾಗಿ ಹೋಗಿದ್ದ ಒಬ್ಬ ಸಾಧಕನಿಗೆ ಪೊಲೀಸರು ‘ಬರ್ಫ್(ಮಂಜುಗಡ್ಡೆ) ಮೇಲೆ ಮಲಗಿಸುತ್ತೇನೆ’,ಎಂದು ಬೆದರಿಕೆ ಹಾಕಿದರು.

೬. ‘ತನಿಖೆಯ ವಿಷಯವನ್ನು ಮಾಧ್ಯಮಗಳಿಗೆ ನೀಡಬಾರದು’ ಎಂದು ನ್ಯಾಯಾಲಯದ ಆದೇಶವಿದ್ದರೂ ತನಿಖೆಯ ಸುಳ್ಳು ವರದಿಯನ್ನು ಬಹಿರಂಗಪಡಿಸಿ ವಿಶೇಷ ತನಿಖಾ ದಳವು ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ಅವಮಾನ ಮಾಡಿತು.

೭. ೨ ಸೆಪ್ಟೆಂಬರ್ ೨೦೧೬ ರಂದು ಪೊಲೀಸರು ಡಾ.ತಾವಡೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮತ್ತು ಆಸ್ಪತ್ರೆಯಲ್ಲಿಯೂ ಅವರ ಭದ್ರತೆಯ ಬಗ್ಗೆಯೂ ಯಾವುದೇ ಕಾಳಜಿ ವಹಿಸದೇ ಪತ್ರಕರ್ತರಿಗೆ ಉದ್ದೇಶಪೂರ್ವಕವಾಗಿ ಅವರ ಛಾಯಾಚಿತ್ರ ತೆಗೆಯಲು ಅವಕಾಶ ನೀಡಿದರು. ಸರಕಾರ ಹಾಗೂ ಉಚ್ಚನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಈ ಕಾನೂನುಬಾಹಿರ ವರ್ತನೆ ಏತಕ್ಕಾಗಿ ?

೮. ಅನಾರೋಗ್ಯವಿರುವ ಡಾ.ತಾವಡೆಯವರನ್ನು ಪೊಲೀಸ್ ಅಧಿಕಾರಿ ರವಿ ಪಾಟಿಲ್ ಮತ್ತು ಪೊಲೀಸ್ ನಿರೀಕ್ಷಕರ ಅಮೃತ ದೇಶಮುಖ ಇವರಿಬ್ಬರು ಸೇರಿ ಕಾನೂನುಬಾಹಿರವಾಗಿ ಪೊಲೀಸ್ ಕಸ್ಟಡಿಯಲ್ಲಿ ಥಳಿಸಿದರು. ಈ ಬಗ್ಗೆ ಮಾ. ನ್ಯಾಯಾಲಯವು ಆದೇಶ ನೀಡಿದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಡಾ. ತಾವಡೆಯವರಿಗೆ ಇರುವ ಅನೇಕ ಅನಾರೋಗ್ಯದ ಸಮಸ್ಯೆಗಳು ಬಹಿರಂಗವಾದವು. ವಿಶೇಷ ತನಿಖಾ ದಳವು ಡಾ.ತಾವಡೆಯವರ ಮಾನವಾಧಿಕಾರವನ್ನು ಹತ್ತಿಕ್ಕಿದ್ದು ಮಾತ್ರವಲ್ಲ ಅದರ ಜೊತೆಗೆ ಮುಂಬಯಿ ಉಚ್ಚ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿದೆ.

೯. ಪೊಲೀಸ್ ಕಸ್ಟಡಿಯಲ್ಲಿ ಡಾ. ತಾವಡೆಯವರು ಜಪಮಾಲೆ ಹಿಡಿದು ಜಪ ಮಾಡುತ್ತಿದ್ದರು. ಈ ಮಾಲೆಯನ್ನು ಪೊಲೀಸರು ಕಸಿದುಕೊಂಡರು. ಡಾ.ತಾವಡೆಯವರು ಪರಿಪರಿಯಾಗಿ ವಿನಂತಿಸಿದ ನಂತರ ಪೊಲೀಸರು ಆ ಮಾಲೆಯನ್ನು ಹಿಂದಿರುಗಿಸಿದರು. ವಾಸ್ತವದಲ್ಲಿ ದೇವತೆಗಳ ನಾಮಜಪ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅಧಿಕಾರವಾಗಿದೆ. ನಾಮಜಪವನ್ನು ವಿರೋಧಿಸಿ ತನಿಖೆ ನಡೆಸಿ ಪೊಲೀಸರು ತಮ್ಮ ಹಿಂದೂದ್ವೇಷವನ್ನು ತೋರಿಸಿದರು.

ಸನಾತನ ಸಂಸ್ಥೆಯ ಬೇಡಿಕೆಗಳು

೧. ಡಾ.ತಾವಡೆಯವರನ್ನು ವಶಕ್ಕೆ ಪಡೆದಾಗಿನಿಂದ ಪ್ರತಿಯೊಂದು ಕಾನೂನುಬಾಹಿರ ಕೃತಿಗೆ ಮುಖ್ಯ ತನಿಖಾಧಿಕಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಹೇಲ ಶರ್ಮಾ ಇವರೇ ಕಾರಣರಾಗಿದ್ದು ಅವರ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು.

೨. ಡಾ.ತಾವಡೆಯವರಿಗೆ ಥಳಿಸಿದ ಪೊಲೀಸ್ ಅಧಿಕಾರಿ ರವಿ ಪಾಟಿಲ್ ಮತ್ತು ಪೊಲೀಸ್ ನಿರೀಕ್ಷಕ ಅಮೃತ ದೇಶಮುಖ ಇವರಿಬ್ಬರ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು.

೩. ನ್ಯಾಯಾಲಯ ಮತ್ತು ಸರಕಾರದ ಆದೇಶವನ್ನು ಧಿಕ್ಕರಿಸಿ ಡಾ.ತಾವಡೆಯವರನ್ನು ಪೊಲೀಸರಿಂದ ಮಾಧ್ಯಮಗಳೆದುರು ಕೊಂಡೊಯ್ಯಲಾಯಿತು. ಅವರ ಭದ್ರತಾ ವ್ಯವಸ್ಥೆ ಮಾಡಲಿಲ್ಲ. ಈ ಬಗ್ಗೆ ದೇಶಮುಖ,ಸುಹೇಲ ಶರ್ಮಾ, ವಿಶೇಷ ತನಿಖಾ ದಳದ ಮುಖ್ಯಾಧಿಕಾರಿ ಶ್ರೀ. ಸಂಜಯಕುಮಾರ್ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು.

– ಶ್ರೀ. ಅಭಯ ವರ್ತಕ

 


Spread the love