ಹುಡುಗಿ ಅಪಹರಣ ಶಂಕೆ: ಘರ್ಷಣೆ – ಸಾರಡ್ಕದಲ್ಲಿ ಲಾಠಿ ಪ್ರಹಾರ, ಎಸ್‌ಐಗೆ ಗಾಯ, ಹಲವು ವಾಹನಗಳ ವಶ

Spread the love

ಹುಡುಗಿ ಅಪಹರಣ ಶಂಕೆ: ಘರ್ಷಣೆ – ಸಾರಡ್ಕದಲ್ಲಿ ಲಾಠಿ ಪ್ರಹಾರ, ಎಸ್‌ಐಗೆ ಗಾಯ, ಹಲವು ವಾಹನಗಳ ವಶ

ವಿಟ್ಲ(ಪ್ರಜಾವಾಣಿ): ಕೇರಳ ಭಾಗದಿಂದ ಸೋಮವಾರ ರಾತ್ರಿ ಅತಿಯಾದ ವೇಗದಲ್ಲಿ ಬರುತ್ತಿದ್ದ ವಾಹನವೊಂದನ್ನು ಪೊಲೀಸರು ತಡೆಗಟ್ಟಲು ಮುಂದಾದಾಗ ಉದ್ವಿಗ್ನದ ಪರಿಸ್ಥಿತಿ ನಿರ್ಮಾಣಗೊಂಡು ಲಘು ಲಾಠಿ ಪ್ರಹಾರ ನಡೆದಿದೆ. ಈ ಸಂದರ್ಭದಲ್ಲಿ ಪ್ರೊಬೆಷನರಿ ಎಸ್‌ಐ ಒಬ್ಬರಿಗೆ ಗಾಯವಾಗಿದೆ.

ಸಾರಡ್ಕ ಚೆಕ್ ಪೋಸ್ಟ್‌ನಲ್ಲಿ ಬೊಲೆರೋ ವಾಹನವನ್ನು ಪೊಲೀಸರು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹುಡುಗಿಯೊಬ್ಬಳ ಅಪಹರಣ ಶಂಕೆಯಿಂದ ಹಿಂಬಾಲಿಸಿಕೊಂಡಿದ್ದ ಬಂದ ವಾಹನದವರು ಗಲಾಟೆಗೆ ಮುಂದಾದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಕೇರಳದ ಕಳತ್ತೂರು ಭಾಗದ ಹುಡುಗಿಯೊಬ್ಬಳನ್ನು ಅಪಹರಣ ಮಾಡಿದ ಬಗ್ಗೆ ಬೆಳಗ್ಗಿನಿಂದಲೇ ಸುದ್ದಿ ಹರಡಿ ಗಡಿ ಭಾಗದಲ್ಲಿ ಹಲವು ಮಂದಿ ಪಹರೆ ಕಾಯುತ್ತಿದ್ದರು. ಮುಸ್ಸಂಜೆ ಸಮಯದಲ್ಲಿ ಪೆರ್ಲದಿಂದ ಬೊಲೆರೋ ಒಂದು ಅತಿಯಾದ ವೇಗದಲ್ಲಿ ವಿಟ್ಲ ಕಡೆಗೆ ಹೋಗುವುದನ್ನು ಹಲವರು ಗಮನಿಸಿ ಅಪಹರಣಕಾರರ ವಾಹನ ಇರಬಹುದೆಂದು ನಿಲ್ಲಿಸಲಾಯಿತು’ ಎಂದು ಪೊಲೀಸ್‌ ಮಾಹಿತಿ ಇದೆ.

‘ಬೊಲೆರೋ ಚಾಲಕ ಯಾರ ಸೂಚನೆಗೂ ಲೆಕ್ಕಿಸದೆ ಹಲವು ವಾಹನಗಳಿಗೆ ಉಜ್ಜಿಕೊಂಡು ಹೋಗುವ ಯತ್ನ ಮಾಡಿದ. ಇದರಿಂದ ಆ ಭಾಗದ ಒಂದಷ್ಟು ಜನರು ವಾಹನಗಳನ್ನು ಹಿಡಿದುಕೊಂಡು ಬೊಲೆರೋವನ್ನು ಬೆನ್ನಟ್ಟಿ ಬಂದಿದ್ದರು. ಜತೆಗೆ ಅಡ್ಯನಡ್ಕ ಭಾಗದ ಕೆಲವು ಹುಡುಗರಿಗೂ ವಾಹನವನ್ನು ತಡೆಯುವಂತೆ ಮಾಹಿತಿ ರವಾನಿಸಿದ್ದಾರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಾರಡ್ಕದಲ್ಲಿ ವಾಹನ ನಿಲ್ಲಿಸುತ್ತಿದ್ದಂತೆ, ಮಾತುಕತೆಗೆ ಮುಂದಾಗುವ ಬದಲಾಗಿ ಬೊಲೆರೊದಲ್ಲಿದ್ದವರ ಮೇಲೆ ನೇರ ದಾಳಿಗೆ ಮುಂದಾಗಿದ್ದರು. ಬೊಲೆರೋವನ್ನು ಮಗುಚಿ ಹಾಕುವ ಹಂತದವರೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಠಿ ಪ್ರಹಾರ ಆರಂಭವಾಗುತ್ತಿದ್ದ ಹಾಗೆ ವಾಹನಗಳನ್ನು ಸ್ಥಳದಲ್ಲಿ ಬಿಟ್ಟು, ಹಲವು ಮಂದಿ ಪರಾರಿಯಾಗಿದ್ದಾರೆ. ಹಲವರ ಪಾದರಕ್ಷೆಗಳೂ ರಸ್ತೆಯಲ್ಲಿ ಚೆಲ್ಲಾ ಪಿಲ್ಲಿಯಾಗಿಬಿದ್ದಿತ್ತು. ಕೆಲವು ದ್ವಿಚಕ್ರ ವಾಹನಗಳು ಚರಂಡಿಗೆ ತಳ್ಳಲಾಗಿದೆ ಸುಮಾರು 5 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನ ಮಾಲೀಕರನ್ನು ಪ್ರಕರಣದ ಸ್ಪಷ್ಟತೆ ದೃಷ್ಟಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾಳ ಸರ್ಕಲ್ ಇನ್‌ಸ್ಪೆಕ್ಟರ್ ಶರಣ ಗೌಡ ನೇತೃತ್ವದ ವಿಟ್ಲ ಪ್ರೊಬೆಷನರಿ ಎಸ್‌ಗಳಾದ ಕೀರ್ತಿ ಕುಮಾರ್ ಹಾಗೂ ರಾಜೇಶ್ ಅವರನ್ನೊಳೊಂಡ ವಿಟ್ಲ ಪೊಲೀಸರ ತಂಡ ಸ್ಥಳದಲ್ಲಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಿದೆ. ಬದಿಯಡ್ಕ ಪೊಲೀಸರ ತಂಡ ಸ್ಥಳಕ್ಕೆ ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ಅಪಹರಣವಾದ ಹುಡುಗಿ ಕೇರಳದಲ್ಲಿ ಪತ್ತೆಯಾಗಿದ್ದು, ಬೊಲೆರೋ ವಾಹನ ದಾರಿ ತಪ್ಪಿ ವಿಟ್ಲ ಕಡೆಗೆ ಬಂದಿತ್ತು. ಕೇರಳ ಪೊಲೀಸರು ವಿಟ್ಲ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಗಾಯ: ಸಾರಡ್ಕ ಚೆಕ್‌ಪೋಸ್ಟ್ ಆಸುಪಾಸಿನಲ್ಲಿ ಸಾಕಷ್ಟು ಬೆಳಕಿನ ಲಭ್ಯತೆ ಇಲ್ಲದ ಹಿನ್ನೆಲೆಯಲ್ಲಿ ಲಾಠಿ ಪ್ರಹಾರದ ಸಮಯದಲ್ಲಿ ಪ್ರೊಬೆಷನರಿ ಎಸ್‌ಐಯೊಬ್ಬರ ಕೈಗೆ
ಗಾಯವಾಗಿದೆ.


Spread the love