ಆದ್ಯತೆಯಲ್ಲಿ ಜಿಲ್ಲೆಗೆ ಕೃಷಿ ಪದವಿ ಕಾಲೇಜು – ಕೃಷಿ ಸಚಿವ ಕೃಷ್ಣ ಭೈರೇಗೌಡ

Spread the love

ಆದ್ಯತೆಯಲ್ಲಿ ಜಿಲ್ಲೆಗೆ ಕೃಷಿ ಪದವಿ ಕಾಲೇಜು – ಕೃಷಿ ಸಚಿವ ಕೃಷ್ಣ ಭೈರೇಗೌಡ
ಉಡುಪಿ : ರಾಜ್ಯದಲ್ಲಿ ಹೊಸದಾಗಿ ಕೃಷಿ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ಬಜೆಟ್ ಸಮಯದಲ್ಲಿ ಚರ್ಚೆ ನಡೆದಿದ್ದು, ಕಾಲೇಜುಗಳ ಮಂಜೂರು ಸಂದರ್ಭದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಆದ್ಯತೆಯ ಮೇಲೆ ಕೃಷಿ ಪದವಿ ಕಾಲೇಜು ಮಂಜೂರು ಮಾಡಲಾಗುವುದು ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ. ಅವರು ಶುಕ್ರವಾರ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಗೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಬೆಂಗಳೂರು ಇವರ ಸಹಯೋದಲ್ಲಿ ನಡೆದ, ಬ್ರಹ್ಮಾವರದ ಡಿಪ್ಲೋಮ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ , 4.8 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಡಿಪ್ಲೋಮ ಕೃಷಿ ಮಹಾವಿದ್ಯಾಲಯ ಮತ್ತು 4.8 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯಾರ್ಥಿನಿಲಯ ಕಟ್ಟಡಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಕೃಷಿ ಪದವಿ ಕಾಲೇಜು ಆರಂಭಿಸುವ ಉದ್ದೇಶದಿಂದಲೇ ಡಿಪ್ಲೋಮಾ ಕಾಲೇಜು ಪ್ರಾರಂಭಿಸಲಾಗಿದೆ, ಮುಂದೆ ಆದ್ಯತೆಯಲ್ಲಿ ಕೃಷಿ ಪದವಿ ಕಾಲೇಜು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಕೃಷಿ ವಿಸ್ತರಣಾ ಚಟುವಟಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು, ಇಲ್ಲಿನ ರೈತರು ವಿವಿಧ ಕಾರಣಗಳಿಂದಾಗಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ, ಈ ಭಾಗದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಇದ್ದು ಇದಕ್ಕಾಗಿ ಕೃಷಿ ಯಾಂತ್ರೀಕರಣವನ್ನು ಪರಿಚಯಿಸಲಾಗಿದೆ, ಭತ್ತ ನಾಟಿಯಿಂದ ಕಟಾವುವರೆಗೆ ಯಂತ್ರೋಪಕರಣಗಳ ಬಳಕೆ ಬಗ್ಗೆ 200 ಎಕರೆಯಲ್ಲಿ ಪ್ರಾಯೋಗಿಕವಾಗಿ ಯ
ಯಾಂತ್ರೀಖರಣ ಕೃಷಿ ಮಾಡಲಾಗಿತ್ತು, ಇದರಿಂದ ಶೇ.30 ವೆಚ್ಚ ಕಡಿಮೆಯಾಗಿದ್ದು, ಭತ್ತ ಕೃಷಿ ಲಾಭದಾಯಕವಾಗಿದೆ, ಇದೇ ಮಾದರಿಯಲ್ಲಿ ಉಳಿದ ಜಿಲ್ಲೆಗಳಲ್ಲಿ ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ, ಭವಿಷ್ಯದ ಕೃಷಿಗೆ ಯಾಂತ್ರೀಕರಣ ಬಹಳ ಅವಶ್ಯಕ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.
ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ 40 ರಿಂದ 45 ಲಕ್ಷ ವೆಚ್ಚದಲ್ಲಿ 300 ಹೊಸ ರೈತ ಸಂಪರ್ಕ ಕೇಂದ್ರ ಕಟ್ಟಡಗಳನ್ನು ನಿರ್ಮಿಸಿದ್ದು, ಇದರಿಂದಾಗಿ ಹೋಬಳಿ ಮಟ್ಟದಲ್ಲಿ ರೈತರಿಗೆ ಕೃಷಿ ಪರಿಕರ ವಿತರಣೆ ಸೇರಿದಂತೆ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸಲು ಸಾಧ್ಯವಾಗಿದೆ, ಕೃಷಿ ಯಾಂತ್ರೀಕರಣಕ್ಕಾಗಿ 455 ಕೋಟಿ ರೂ ವೆಚ್ಚ ಮಾಡಲಾಗಿದೆ, ಕೃಷಿ ಯಂತ್ರಧಾರೆ ಕೇಂದ್ರಗಳ ಮೂಲಕ ಮಾರುಕಟ್ಟೆ ದರಕ್ಕಿಂತ ಶೇ.30 ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣ ಬಾಡಿಗೆ ಸೌಲಭ್ಯ ಒದಗಿಸಿದ್ದು, ಉಡುಪಿ ಜಿಲ್ಲೆಯಲ್ಲಿ 7 ಹೋಬಳಿಗಳಲ್ಲಿ ಈ ಕೇಂದ್ರಗಳಿಂದ ಸುಮಾರು 10000 ರೈತರು ಇದರ ಪ್ರಯೋಜನ ಪಡೆದಿದ್ದು, ರಾಜ್ಯದಲ್ಲಿ ಇದುವರೆವಿಗೆ 314 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತರೆದಿದ್ದು, ಸುಮಾರು 6 ಲಕ್ಷಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ, ಕೃಷಿ ಇಲಾಖೆಗೆ ಕಳೆದ ಸಾಲಿನಲ್ಲಿ 4700 ಕೋಟಿ ರೂ ವೆಚ್ಚ ಮಾಡಲಾಗಿದೆ, ಅಲ್ಲದೇ ಕರಾವಳಿ ಭಾಗ ಸೇರಿದಂತೆ ರಾಜ್ಯದ ಎಲ್ಲಾ ರೈತರಿಗೆ ಕೃಷಿ ಹೊಂಡ ರಚನೆಗೆ ಸಹಾಯಧನ, ಹಾಲು ಉತ್ಪಾದನೆಗೆ ಪ್ರೋತ್ಸಾಹ ಧನ, ಕೃಷಿಗೆ ಉಚಿತ ವಿದ್ಯುತ್ ನೀಡುವುದು ಸೇರಿದಂತೆ , ರೈತರ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಪಡೆದಿದ್ದ ರೂ.8165 ಕೋಟಿ ಸಾಲವನ್ನು ಸರ್ಕಾರ ಮನ್ನಾ ಮಾಡಿದ್ದು, ಒಂದು ವಾರದಲ್ಲಿ ಆದೇಶ ಬರಲಿದೆ, ಹಿಂದಿನ ಸರ್ಕಾರಗಳು ಈ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಿರುವ ಉದಾಹರಣೆಯಿಲ್ಲ, ಈ ವಿಷಯದಲ್ಲಿ ವಿರೋಧಪಕ್ಷಗಳ ಟೀಕೆ ಮಾಡುತ್ತಿದ್ದಾರೆ, ಆದರೆ ಸಂಕಷ್ಟದಲ್ಲಿರುವ ರೈತರಿಗೆ ನೀಡಿರುವ ನೆರವಿನ ಬಗ್ಗೆ , ಈ ರೀತಿಯ ಟೀಕೆಗಳು ಸರಿಯಿಲ್ಲ ಎಂದು ಸಚಿವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಜಿಲ್ಲೆಯ ರೈತರಿಗೆ ಎಂಓ4 ತಳಿಯ ಭತ್ತದ ಬೀಜ ಹಾಗೂ ಟಾರ್ಪಾಲಿನ್ ಬೇಡಿಕೆ ಅಧಿಕವಾಗಿದೆ ಇದನ್ನು ಪೂರೈಸುವಂತೆ ತಿಳಿಸಿದರು.
ಜಿಲ್ಲೆಗೆ ಕೃಷಿ ಪದವಿ ಕಾಲೇಜು ಮಂಜೂರು ಮಾಡುವಂತೆ ತಿಳಿಸಿದ ಸಚಿವರು, ಕೃಷಿ ವಿಜ್ಞಾನ ಕೇಂದ್ರದ ರಸ್ತೆಯನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 3.5 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಕಾರ್ಯಕ್ರಮಗಳ ಮಾಹಿತಿ ಕೈಪಿಡಿಯನ್ನು ಕೃಷಿ ಸಚಿವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿ.ಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಜನಾರ್ಧನ ತೋನ್ಸೆ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ದಿನಕರ ಪೂಜಾರಿ, ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ವಿ.ನಾಯ್ಕ, ಕೃಷಿ ಇಲಾಖೆಯ ನಿರ್ದೇಶಕ ಬಿ.ವೈ ಶ್ರೀನಿವಾಸ್, ನಬಾಡ್ ್ ನ ಎ.ಜಿ.ಎಂ.ರಮೇಶ್, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಚಂದ್ರಶೇಖರ್ ನಾಯ್ಕ್, ಸಹಾಯಕ ನಿರ್ದೇಶಕ ಮೋಹನ್ ರಾಜ್, ವ.ಕೃ.ತೋ.ಸಂ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪ,ಡಾ.ಬಿ. ಧನಂಜಯ ಮತ್ತಿತರರು ಉಪಸ್ಥಿತರಿದ್ದರು..
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ಕುಲಪತಿ ಡಾ.ಸಿ. ವಾಸುದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.


Spread the love