ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಆಚರಣೆ ಪೂರ್ವಭಾವಿ ಸಭೆ

Spread the love

ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಆಚರಣೆ ಪೂರ್ವಭಾವಿ ಸಭೆ

ಮಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮ ಶತಮಾನೋತ್ಸವವನ್ನು ಸಾರ್ವಜನಿಕವಾಗಿ ಕರಾವಳಿ ಕರ್ನಾಟಕದಲ್ಲಿ ಆಚರಿಸುವ ಕುರಿತು ನಗರದ ವುಡ್‍ಲ್ಯಾಂಡ್ಸ್ ಹೋಟೇಲ್‍ನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಂಸದ ಹಾಗೂ ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್ ಅವರು ವಹಿಸಿದ್ದರು.

ಶಿಕ್ಷಣವೆತ್ತರು, ಚಿಂತಕರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ರಾಜಕಾರಣಿಗಳು ಭಾಗವಹಿಸಿದ ಈ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಆಸ್ಕರ್ ಅವರು ಇಂದಿರಾಗಾಂಧಿಯವರು ಜನರ ಉಸಿರಾಗಿದ್ದರು, ಬಡಜನತೆಯ ದೇವರಾಗಿದ್ದರು. ಅವರ ಆಗಿನ ಕಾಲದ ಬಡವರ ಪರವಾದ ಗರೀಬಿ ಹಠಾವೋ ಹಾಗೂ 20 ಅಂಶದ ಕಾರ್ಯಕ್ರಮಗಳನ್ನು ಸೋನಿಯಾಗಾಂಧಿಯವರು ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರದ ಹಕ್ಕು, ಉದ್ಯೋಗದ ಹಕ್ಕು, ಮಾಹಿತಿ ಹಕ್ಕು ಹಾಗೂ ಶಿಕ್ಷಣದ ಹಕ್ಕು ಇತ್ಯಾದಿ ಕಾಯಿದೆ ಮೂಲಕ ತಂದು ಬದ್ಧತೆಯನ್ನು ತೋರಿಸಿದರು. ನಾವು ಜನರ ಬಳಿಗೆ ಯಶಸ್ವಿಯಾಗಿ ತೆಗೆದುಕೊಂಡು ಹೋಗುವಲ್ಲಿ ವಿಫಲರಾದೆವು ಎಂದು ನೋವಿನಿಂದ ಹೇಳಿದರು. ಈ ಬಾರಿ ವರ್ಷಾದಾದ್ಯಂತ ನಡೆಯಲಿರುವ ಇಂದಿರಾಗಾಂಧಿ ಜನ್ಮಶತಮಾನೋತ್ಸವ ಸಮಯದಲ್ಲಿ ಯುವಜನ, ಮಹಿಳೆ ಮತ್ತು ಬಡವರಿಗೆ ಪರಿಣಾಮಕಾರಿ ರೀತಿಯಲ್ಲಿ ಇಂದಿರಾಗಾಂಧಿಯವರ ಸಾಧನೆ ಮತ್ತು ಮುಂದಿನ ಯೋಜನೆಯನ್ನು ಮುಟ್ಟಿಸಲಿದ್ದೇವೆ ಎಂದು ಹೇಳಿದರು.

ಪ್ರಸ್ತಾವಿಕ ಭಾಷಣ ಮಾಡಿದ ಎ ಐಸಿಸಿ ಸದಸ್ಯ ಪಿ.ವಿ. ಮೋಹನ್ ಅವರು ಇಂದಿರಾ ಕಾಲದಲ್ಲಿದ್ದ ಸೆಕ್ಯೂಲರ್ ಶಕ್ತಿಗಳ ಸಾಮಾಜಿಕ ಕಾರ್ಯಸೂಚಿ, ಸಾಮಾಜಿಕ ಉಪಸ್ಥಿತಿ, ಸಾಮಾಜಿಕ ಹೋರಾಟಗಳು ಹಾಗೂ ಸಾಮಾಜಿಕ ಒಕ್ಕೂಟಗಳು ಈಗ ಸಂಪೂರ್ಣ ನೇಪಥ್ಯಕ್ಕೆ ಸರಿದಿವೆ. ಕೋಮು ಶಕ್ತಿಗಳು ಧಾರ್ಮಿಕ ಕಾರ್ಯಸೂಚಿಯನ್ನು ಮುಂದಿಟ್ಟು ಈ ಜಾಗವನ್ನು ಆಕ್ರಮಿಸಿ ವಿಜೃಂಭಿಸುತ್ತಿವೆ. ಇಂದಿರಾಗಾಂಧಿ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಈ ದಿಶೆಯಲ್ಲಿ ಚಿಂತನೆ ನಡೆಯಬೇಕು ಎಂದು ಹೇಳಿದರು.

ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಬಡವರು ಬ್ಯಾಂಕ್ ಖಾತೆಯನ್ನು ಹೊಂದುವಂತೆ ಮಾಡಿದವರು ಇಂದಿರಾಗಾಂದಿ. ಅಮೆರಿಕಾದವರು ಈಗ ಬ್ಯಾಂಕಿನ ರಾಷ್ಟ್ರೀಕರಣದ ಬಗ್ಗೆ ಮಾತನಾಡುತ್ತಿದ್ದೆರೆ ಎಂದು ಪ್ರೋ. ವಿಶ್ವನಾಥ್ ಅವರು ಹೇಳಿದರು.

ರಾಜಕೀಯ ಶಾಸ್ತ್ರದ ಹಿರಿಯ ವಿದ್ವಾಂಸರಾದ ಪ್ರೋ. ರಾಜರಾಮ ತೋಲ್ವಾಡಿಯವರು ಇಂದಿರಾ ಗಾಂಧಿಯವರ ಬಗ್ಗೆ ಗಂಭೀರವಾದ ಬರವಣಿಗೆಯ ಕೆಲಸ ನಡೆದಿಲ್ಲ. ಕನ್ನಡದಲ್ಲಿ ಅವರ ಬಗ್ಗೆ ಅನುವಾದ ಕೆಲಸಗಳು ಆಗಬೇಕು ಎಂದರು. ಮಂಗಳೂರು ವಿಶ್ವವಿದ್ಯಾಲಯದ ಪ್ರೋ. ಧರ್ಮ, ದಲಿತ ಚಿಂತಕ ಲೋಲಾಕ್ಷ, ಉದ್ಯಮಿ ರಮೇಶ್ ಶೆಟ್ಟಿ ಸಾಮಾಜಿಕ ಕಾರ್ಯಕರ್ತ ಸುರೇಶ್ ಶೆಟ್ಟಿ, ಪ್ರೋ. ನಾಬರ್ಟ್ ಲೋಬೋ, ಮುಖಂಡರುಗಳಾದ ನಾಗೇಶ್ ಕುಮಾರ್, ಸುಭೋದಯ ಆಳ್ವ ಮುಂತಾದವರು ಮಾತನಾಡಿ ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಹನೀಫ್, ಮುಖಂಡರುಗಳಾದ ಸುರೇಶ್ ಬಲ್ಲಾಳ್, ತೇಜೋಮಯ, ಶ್ರೀಮಾನ್ ಬಲರಾಜ್ ರೈ, ಅವರು ಉಪಸ್ಥಿತರಿದ್ದರು. ಎಂ.ಎ. ಗಫೂರ್ ಅವರು ಸ್ವಾಗತಿಸಿದರು.


Spread the love