ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

Spread the love

ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಉಡುಪಿ : ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಜೂನ್ ಮಾಹೆಯಲ್ಲಿ “ಇಲಾಖೆಗಳ ನಡೆ ರೈತರ ಮನೆ ಬಾಗಿಲಿಗೆ” ಕೃಷಿ ಅಭಿಯಾನ ಕಾರ್ಯಕ್ರಮದ ಮೂಲಕ ಸಮಗ್ರ ಕೃಷಿ ಮಾಹಿತಿಯನ್ನು ಜಿಲ್ಲೆಯ ರೈತರಿಗೆ ನೀಡುವ ಕಾರ್ಯಕ್ರಮ ನಡೆಯಲಿದೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೃಷಿ ಅಭಿಯನ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂನ್ 12 ರಿಂದ ಪ್ರಾರಂಭವಾಗುವ ಈ ಅಭಿಯಾನ ಕಾರ್ಯಕ್ರಮದಲ್ಲಿ ,ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ತೆರಳಿ ರೈತರಿಗೆ ವಿವಿದ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಗತ್ಯ ನೆರವು ನೀಡಲಿದ್ದು, ರೈತರಿಗೆ ಕೃಷಿ ಉತ್ಪಾದಕತೆ ಹೆಚ್ಚಳ , ಹೊಸ ತಾಂತ್ರಿಕತೆಯ ಪರಿಚಯ, ಯಂತ್ರೋಪಕರಣಗಳ ಬಳಕೆ, ಕೃಷಿ ವಿಜ್ಞಾನಿಗಳ ಜೊತೆ ಸಂವಾದ, ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಅಭಿಯಾನ ಕಾರ್ಯಕ್ರಮದಲ್ಲಿ ಪ್ರತಿ ಹೋಬಳಿಯ 2 ಗ್ರಾಮಗಳನ್ನು ದತ್ತು ಪಡೆದು, ಗ್ರಾಮದಲ್ಲಿ ಅಂರ್ತಜಲ ವೃದ್ದಿ, ಕೊಳವೆ ಬಾವಿಗಳಿಗೆ ಮರುಪೂರಣ, ಪೈಪ್ ಕಾಂಪೋಸ್ಟ್, ಇಂಗು ಗುಂಡಿ ನಿರ್ಮಾಣ ಸೇರಿದಂತೆ ಕೃಷಿ ಸಂಬಂದಿತ ಎಲ್ಲಾ ಯೋಜನೆಗಳನ್ನು ಗ್ರಾಮದಲ್ಲಿ ಅನುಷ್ಠಾನ ಮಾಡಿ, ಮಾದರಿ ಕೃಷಿ ಗ್ರಾಮವಾಗಿ ರೂಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆರೆಗಳು, ಮದಗಗಳು, ನಿರುಪಯುಕ್ತ ಕೊಳವೆ ಬಾವಿಗಳ ವಿವರಗಳನ್ನು ಪಂಚಾಯತ್ ಗಳ ಸಹಕಾರದಿಂದ ಪಡೆದು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಅಂತಹ ಪ್ರದೇಶದಲ್ಲಿ ಕೆರೆ ಸಂಜೀವಿನಿ, ಭೂ ಸಮೃದ್ದಿ ಯೋಜನೆಯಲ್ಲಿ ಜಲ ಮರು ಪೂರಣ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಗತಿಪರ ರೈತರ ಅನುಭವಗಳ ಹಂಚಿಕೆ, ಮಣ್ಣು ಪರೀಕ್ಷೆ, ಕೃಷಿ ವಿಜ್ಞಾನಿಗಳಿಂದ ವೈಜ್ಞಾನಿಕ ಕೃಷಿ ಮತ್ತು ನೂತನ ಸಂಶೋಧನೆಗಳ ಕುರಿತು ರೈರಿಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕೃಷಿಗೆ ಸಂಬಂದಿಸಿದ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ಮಾಹಿತಿ ಪುಸ್ತಕಗಳನ್ನು ಮತ್ತು ಸ್ಥಬ್ಧಚಿತ್ರಗಳನ್ನು ಹಾಗೂ ವಸ್ತು ಪ್ರದರ್ಶನವನ್ನು ಈ ಅಭಿಯಾನ ಕಾರ್ಯಕ್ರಮದಲ್ಲಿ ಆಯೋಜಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ನಾಯಕ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ. ಹನುಮಂತಪ್ಪ , ತೋಟಗಾರಿಕೆ, ಪಶುಪಾಲನೆ ಹಾಗೂ ಇತರೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


Spread the love