ಎಸ್ಪಿ ಕಾರ್ಯಾಚರಣೆ ವಿರುದ್ದ ವಕೀಲರ ಪ್ರತಿಭಟನೆ, ಅಣ್ಣಾಮಲೈ ಸ್ಪಷ್ಟನೆ

Spread the love

ಎಸ್ಪಿ ಕಾರ್ಯಾಚರಣೆ ವಿರುದ್ದ ವಕೀಲರ ಪ್ರತಿಭಟನೆ, ಅಣ್ಣಾಮಲೈ ಸ್ಪಷ್ಟನೆ

ಚಿಕ್ಕಮಗಳೂರು: ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮತ್ತು ಅವರ ಸಿಬಂದಿ ತನಿಖಾ ವರದಿ ಅಥವಾ ಅನುಮತಿ ಪಡೆಯದೆ ಏಕಾಎಕಿ ವಕೀಲರ ಕಚೇರಿಗೆ ನುಗ್ಗಿ ಕಕ್ಷಿದಾರರನ್ನು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಜಿಲ್ಲಾ ವಕೀಲರ ಸಂಘದ ನೇತ್ರತ್ವದಲ್ಲಿ ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯದೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಸಿಬಂದಿ ಗುರುವಾರ ರಾತ್ರಿ 8 ಗಂಟೆಗೆ ಅನುಮತಿ ಇಲ್ಲದೆ ವಕೀಲರ ಕಚೇರಿಗೆ ಬಂದು ಕಕ್ಷಿದಾರರನ್ನು ವಶಕ್ಕೆ ಪಡೆದಿದ್ದಾರೆ. ಸಕಲೇಶಪುರ ನಿವಾಸಿಗಳಾದ ಅವರಿಬ್ಬರ ಮೇಲೆ ಇದುವರೆಗೆ ಯಾವುದೇ ಪ್ರಕರಣಗಳಿಲ್ಲ. ಜತೆಗೆ ಕಚೇರಿ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ವಶಪಡಿಸಕೊಂಡಿದ್ದಾರೆ ಎಂದು ವಕೀಲ ಎಚ್ ಎಸ್ ಮಹೇಶ್ ಕುಮಾರ್ ಆಪಾದಿಸಿದರು.

ಹೊಸವರ್ಷದ ಮೋಜು ಮಸ್ತಿಗೆ ಭದ್ರಾ ವನ್ಯಜೀವಿ ವಿಭಾಗದ ಕೆಮ್ಮಣ್ಣುಗುಂಡಿಯ ನೆತ್ತಿ ಚೌಕದಲ್ಲಿ ಎರಡು ಕಡವೆ ಶಿಕಾರಿ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಇಬ್ಬರು ಶಂಕಿತರನ್ನು ಗುರುವಾರ ರಾತ್ರಿ ಬಂಧಿಸಿದ್ದರು.
ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ನಗರಕ್ಕೆ ಆಗಮಿಸಿದ್ದಾರೆ ಎಂಬ ಖಚಿತ ಮಾಹಿತ ಆಧರಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹಾಗೂ ಅವರ ಸಿಬಂಧಿ ಮಫ್ತಿಯಲ್ಲಿ ಹೋಗಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳು ಹಾಗೂ ಎರಡು ಬೈಕ್ ವಶಕ್ಕೆ ಪಡೆದು ಬಸವನಹಳ್ಳ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು.
2016 ರ ಡಿಸೆಂಬರ್ 31 ರಂದು ಬೆಳಗಿನ ಜಾವ ಎರಡು ಕಡವೆಗಳನ್ನು ಬೇಟೆಯಾಡಿದ್ದ 12 ಆರೋಪಿಗಳಲ್ಲಿ 11 ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬಂಧಿಸಿದ್ದರು. ಇವರಲ್ಲಿ ಟೆಕ್ಕಿಗಳು, ಕರ್ನಾಟಕ ರೈಫಲ್ಸ್ ಅಸೋಸಿಯೇಶನ್ ಅಜೀವ ಸದಸ್ಯ, ವಿದ್ಯಾರ್ಥಿಗಳು ಸೇರಿದ್ದರು.

ಯಾವುದೇ ಕಾನೂನು ಉಲ್ಲಂಘನೆ ನಡೆದಿಲ್ಲ – ಅಣ್ಣಾಮಲೈ

ವಕೀಲರು ಪೋಲಿಸರ ವಿರುದ್ದ ನಡೆಸಿರುವ ಕೋರ್ಟ್ ಕಲಾಪ ಬಹಿಷ್ಕಾರ ಮುಷ್ಕರಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಕೀಲರ ಖಾಸಗಿ ಕಚೇರಿ ಬಳಿ ನಡೆದ ಘಟನೆಯಲ್ಲಿ ಪೋಲಿಸರು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಗುರುವಾರ ಸಂಜೆ ನಡೆದ ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿರುವ ತೇಜಸ್ವಿ ವಕೀಲರ ಕಚೇರಿಗೆ ಅರಣ್ಯ ಪ್ರಕರಣ ನಂ 2/2016-17ರಲ್ಲಿನ ಆರೋಪಿ ಸಂಬಂಧಿಕರು ಜಾಮೀನು ಬಗ್ಗೆ ಅರ್ಜಿ ಸಲ್ಲಿಸಲು ಬಂದಿದ್ದ ಸಮಯದಲ್ಲಿ ಪೋಲಿಸ್ ಅಧೀಕ್ಷಕರು ಮತ್ತು ಇತರೆ ಅಧಿಕಾರಿಗಳು ವಕೀಲರ ಕಚೇರಿಗೆ ಹೋಗಿ ಆರೋಪಿಗಳ ಸಂಬಂಧಿಕರನ್ನು ಬಂಧಿಸಿರುವುದು ಸರಿಯಲ್ಲ ಎಂದು ವಕೀಲರು ಆರೋಪಿಸಿದ್ದು, ಕೋರ್ಟ್ ಕಲಾಪ ಬಹಿಷ್ಕರಿಸಿ ಕೋರ್ಟ್ ಎದುರು ವಕೀಲರು ಪ್ರತಿಭಟನೆ ನಡೆಸಿರುವುದು ಸರಿಯಲ್ಲ. ಸದರಿ ಪ್ರಕರಣದಲ್ಲಿನ ಆರೋಪಿ ಮತ್ತು ಕೃತ್ಯಕ್ಎಕ ಬಳಸಿದ್ದ ವಾಹನ ಸೇರಿದಂತೆ ಇತರೆ ವಾಹನಗಳು ನಗರದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಸಂಜೆ ಜಿಲ್ಲಾ ಪೋಲಿಸ್ ಕಚೇರಿಗೆ ಬಂದ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಲಾಯಿತು. ತೇಜಸ್ವಿ ವಕೀಲರ ಖಾಸಗಿ ಕಚೇರಿ ಹತ್ತಿರ ಇರುವ ಬಗ್ಗೆ ಖಚಿತಪಡಿಸಿ ಪೋಲಿಸ್ ಅಧಿಕಾರಿಗಳ ತಂಡ ಖುದ್ದಾಗಿ ಮುನ್ನಡೆಸಿ ವಿಜಯಪುರ ಮುಖ್ಯ ರಸ್ತೆಯಲ್ಲಿರುವ ತೇಜಸ್ವಿ ವಕೀಲರ ಖಾಸಗಿ ಕಚೇರಿ ಹತ್ತಿರ ಹೋಗಿ ನೋಡಿದಾಗ ಅಲ್ಲಿದ್ದ ವಾಹನದಲ್ಲಿದ್ದ ನಾಲ್ಕು ಜನರ ಪೈಕಿ ಎರಡು ಮಂದಿ ಪೋಲಿಸರನ್ನು ನೋಡಿ ಓಡಿ ಹೋಗಿದ್ದಾರೆ. ಸ್ಥಳದಲ್ಲಿ ದೊರೆತ ವಾಹನ ಮತ್ತು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ನಾನು ವಕೀಲರ ಖಾಸಗಿ ಕಚೇರಿಗೆ ಹೋಗದೆ ವಕೀಲರನ್ನು ಕಚೇರಿ ಹೊರಗಡೆಯೇ ಮಾತಾನಾಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಜನವರಿ 1ರಂದು ತರೀಕೆರೆ ತಾಲೂಕಿನ ಕಣಿಗೆಬೈಲ್ ಭದ್ರಾ ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿ ಕೊಂದು ಸಾಗಿಸುತ್ತಿದ್ದ 12 ವ್ಯಕ್ತಿಗಳ ಪೈಕಿ 11 ವ್ಯಕ್ತಿಗಳನ್ನು ಕೆಮ್ಮಣ್ಣುಗುಂಡಿ ಅರಣ್ಯ ತನಿಖಾ ಠಾಣೆಯ ಹತ್ತಿರ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬಂದಿ ವಶಕ್ಕೆ ತೆಗೆದುಕೊಂಡಿದ್ದರು. ಪ್ರಕರಣದಲ್ಲಿನ ಪ್ರಮುಖ ಆರೋಪಿ ರಫೀಕ್ ಅಹಮ್ಮದ್ ತಲೆ ಮರೆಸಿಕೊಂಡಿದ್ದಾನೆ. ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆ ಹಚ್ಚಿಕೊಡುವಂತೆ, ಬಂದೂಕು ವಶಪಡಿಸಿಕೊಳ್ಳಲು ಇಲಾಖೆಗೆ ಸಹಾಯ ಮಾಡುವಂತೆ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಸೂಚಿಸಿದ್ದಾರೆ. ಚಿಕ್ಕಮಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪತ್ರ ಕಳುಹಿಸಿದ್ದಾರೆ. ಪ್ರಮುಖ ಆರೋಪಿ ಪತ್ತೆ ಹಚ್ಚಲು ಹಾಗೂ ಕೃತ್ಯಕ್ಕೆ ಬಳಸಿದ ಬಂದೂಕನ್ನು ವಶಪಡಿಸಿಕೊಳ್ಳಲು ಮೂವರು ಅಧಿಕಾರಿಗಳು ಮತ್ತು ಸಿಬ್ಭಂದಿ ವಿಶೇಷ ತಂಡ ರಚಿಸಲಾಗಿದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.


Spread the love

1 Comment

Comments are closed.