ಕರಾವಳಿ ಮರಳು ಸಮಸ್ಯೆ: 24ರಂದು ಬೆಂಗಳೂರಿನಲ್ಲಿ ಸಭೆ

Spread the love

ಕರಾವಳಿ ಮರಳು ಸಮಸ್ಯೆ: 24ರಂದು ಬೆಂಗಳೂರಿನಲ್ಲಿ ಸಭೆ

ಮಂಗಳೂರು : ಸೆಪ್ಟೆಂಬರ್ 24ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮರಳು ಸಮಸ್ಯೆ ಮತ್ತು ಭೂಪರಿವರ್ತನೆ ಸಂಬಂಧ ಸಭೆಯನ್ನು ಕರೆಯಲಾಗಿದೆ.

ಈ ಸಭೆಗೆ ಪೂರ್ವಭಾವಿಯಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ರಾಜಶೇಖರ್ ಪಾಟೀಲ್ ಅವರು 24ರಂದು ಅಪರಾಹ್ನ ಎರಡು ಗಂಟೆಗೆ ವಿಶೇಷ ಸಭೆಯನ್ನು ನಡೆಸಲಿದ್ದಾರೆ. ಬಳಿಕ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅದೇ ದಿನ ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ಕರಾವಳಿಯ ಮರಳು ಸಮಸ್ಯೆಗೆ ಪರಿಹಾರ ಕಂಡುಹುಡುಕಲು ಸಭೆಯನ್ನು ನಡೆಸಲು ತಾನು ಮುಖ್ಯಮಂತ್ರಿಗಳನ್ನು ವಿನಂತಿಸಿದ್ದು, ಅದರಂತೆ ಈ ಸಭೆ ಏರ್ಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ತಿಳಿಸಿದ್ದಾರೆ.

ಕೆಡಿಪಿ ಸಭೆ ಮುಂದೂಡಿಕೆ: ಮುಖ್ಯಮಂತ್ರಿಗಳ ಈ ಸಭೆಯ ಹಿನ್ನೆಲೆಯಲ್ಲಿ ಸೆ.24ರಂದು ಮಂಗಳೂರಿನಲ್ಲಿ ನಿಗದಿಯಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆಯನ್ನು ಸೆ.26ಕ್ಕೆ ಮುಂದೂಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


Spread the love