ಕಾವೇರಿ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಉಗ್ರ ಹೋರಾಟ – ವಸಂತ ಶೆಟ್ಟಿ ಬೆಳ್ಳಾರೆ

Spread the love

ಕಾವೇರಿ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಉಗ್ರ ಹೋರಾಟ – ವಸಂತ ಶೆಟ್ಟಿ ಬೆಳ್ಳಾರೆ  

ದೆಹಲಿ: ಕಾವೇರಿ ನದಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದೆಹಲಿ ಕರ್ನಾಟಕ ಸಂಘವು ಕರ್ನಾಟಕ ಸರ್ಕಾರ ಮತ್ತು ಜನತೆಗೆ ತನ್ನ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿತು.

ಕರ್ನಾಟಕ ಸಂಘದ ಅಂಗಳದಲ್ಲಿ ಸಂಘದ ಪದಾಧಿಕಾರಿಗಳ ಜೊತೆ ಸೇರಿದ ನೂರಾರು ಕನ್ನಡಿಗರು ಮೇಣದ ಬತ್ತಿ ಉರಿಸಿ, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ತಮ್ಮ ತೀವ್ರ ಅಸಮಧಾನವನ್ನು ಒಕ್ಕೊರಲಿನಿಂದ ಪ್ರಕಟಿಸಿತು.

ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆಯವರು ಕರ್ನಾಟಕಕ್ಕೆ ನ್ಯಾಯ ದೊರಕದೇ ಇದ್ದರೆ ಉಗ್ರ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಉಚ್ಚತಮ ನ್ಯಾಯಾಲಯದ ಆದೇಶವು ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ಕನ್ನಡಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರಧಾನ ಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಈ ಗಂಭೀರ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕೆಂದು ಆಗ್ರಹಿಸಿದರು.

cauvery-protest-delhi-karnataka-00 cauvery-protest-delhi-karnataka-01

ಜೆ.ಎನ್.ಯು ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆಯವರು ಮಾತನಾಡಿ ಕರ್ನಾಟಕವು ಹಿಂದಿನಿಂದಲೂ ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುತ್ತಾ, ಪ್ರಾದೇಶಿಕ ಪಕ್ಷಗಳನ್ನು ನಿರಾಕರಿಸಿ ದೇಶದ ಬಗೆಗಿನ ತನ್ನ ಬದ್ಧತೆಯನ್ನು ಪ್ರಕಟಿಸುತ್ತಲೇ ಬಂದಿದೆ. ಆದರೆ ಇದೀಗ ಭಾರತದ ಉಚ್ಛ ನ್ಯಾಯಾಲಯ ಕರ್ನಾಟಕದ ಈ ಬದ್ಧತೆಯನ್ನೇ ಪ್ರಶ್ನಿಸಿಸುವ ಹಾಗೆ ಮಾತಾಡಿದ್ದು 6 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ. ತಜ್ಞರ ತಂಡವನ್ನು ಕಳುಹಿಸಬೇಕೆಂಬ ಕನ್ನಡಿಗರ ಕೋರಿಕೆಯನ್ನು ಮನ್ನಿಸದೇ ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ತರಾತುರಿಯಲ್ಲಿ ರಚಿಸಲು ಆದೇಶಿಸಿರುವುದು ಕರ್ನಾಟಕಕ್ಕೆ ಮಾಡಿದ ಇನ್ನೊಂದು ಅವಮಾನ. ಹೊರನಾಡ ಕನ್ನಡಿಗರಾದ ನಾವು ಈ ಬಿಕ್ಕಟ್ಟಿನ ಸಮಯದಲ್ಲಿ ಕರ್ನಾಟಕ ಸರಕಾರ ಮತ್ತು ಜನತೆಗೆ ನಮ್ಮ ಸಂಪೂರ್ಣ ಬೆಂಬಲವನ್ನು ಘೋಸಿಸುತ್ತದೆ ಎಂದು ಹೇಳಿದರು.

ನೆರೆದ ಸಮಸ್ತ ಕನ್ನಡಿಗರು ಕಾವೇರಿ ನೀರು ನಮ್ಮದು, ಕುಡಿಯುವ ನೀರು ನಮ್ಮ ಹಕ್ಕು ಕಾವೇರಿ ಹೋರಾಟಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಿದರು.


Spread the love