ಕಾವ್ಯಾಳ ಸಂಶಯಾಸ್ಪದ ಸಾವಿನ ತನಿಖೆ ಸಿಓಡಿಗೆ ನೀಡುವಂತೆ ಶ್ರೀರಾಮ ಸೇನೆ ಆಗ್ರಹ

Spread the love

ಕಾವ್ಯಾಳ ಸಂಶಯಾಸ್ಪದ ಸಾವಿನ ತನಿಖೆ ಸಿಓಡಿಗೆ ನೀಡುವಂತೆ ಶ್ರೀರಾಮ ಸೇನೆ ಆಗ್ರಹ

ಮಂಗಳೂರು: ಬ್ಯಾಡ್ಮಿಂಟನ್ ಕ್ರೀಡಾಪುಟು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಸಂಶಯಾಸ್ಪದ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮತ್ತು ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ರೂ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿತು. ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಮನವಿಯನ್ನು ಸ್ವೀಕರಿಸಿದರು.

ಕಟೀಲು ದೇವರಗುಡ್ಡೆಯ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಗಳ ಏಕೈಕ ಪುತ್ರಿ ಕಾವ್ಯಳು ಕಳೆದ ಒಂದುವರೆ ತಿಂಗಳಿನಿಂದ ಮೂಡಬಿದ್ರೆಯ ಪ್ರತಿಷ್ಠಿತ ವಿದ್ಯಾ ಸಮೂಹ ಸಂಸ್ಥೆ ಆಳ್ವಾಸ್ ನಲ್ಲಿ ಅತ್ಯಂತ ಲವಲವಿಕೆಯಿಂದ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಅವಳ ಸಾವು ಆಕೆಯ ಸಹಪಾಠಿಗಳಿಗೆ ಅನುಮಾನವನ್ನುಂಟುಮಾಡಿದೆ. ಈ ಪ್ರಕರಣದ ತನಿಖೆಯ ಹಾದಿಯನ್ನು ಮುಚ್ಚಿ ಹಾಕಲು ಶಿಕ್ಷಣ ಸಂಸ್ಥೆಯು ಹಲವಾರು ವಾಮಮಾರ್ಗಗಳನ್ನು ಹುಡುಕಿಕೊಂಡಿದ್ದು, ಮೃತಳಾದ ಕಾವ್ಯಾಳ ಕುಟುಂಬಿಕರಿಗೆ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಆದುದರಿಂದ ಅಸಹಜ ಸಾವಿನ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಈ ಪ್ರಕರಣದ ತನಿಖೆಯನ್ನು ಸಿಓಡಿ ಅಧಿಕಾರಿಗಳಿಗೆ ಒಪ್ಪಿಸುವಂತೆ ಹಾಗೂ ಮೃತರ ಕುಟುಂಬಕ್ಕೆ ಸರ್ಕಾರ ಶೀಘ್ರವೇ ರೂ 25 ಲಕ್ಷ ಪರಿಹಾರ ಧನ ಒದಗಿಸುವಂತೆ ಶ್ರೀರಾಮ ಸೇನೆ ಮನವಿಯಲ್ಲಿ ಆಗ್ರಹಿಸಿದೆ.

ಶ್ರೀರಾಮ ಸೇನೆಯ ಪ್ರಧಾನ ಕಾರ್ಯದರ್ಶೀ ಹರೀಶ್ ಅಮ್ಟಾಡಿ, ದುರ್ಗಾಸೇನೆ ಜಿಲ್ಲಾಧ್ಯಕ್ಷರಾದ ವಿಜಯಶ್ರೀ ಪಂಪ್ ವೆಲ್, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜೀವನ್ ನೀರುಮಾರ್ಗ ಹಾಗೂ ಇತರರು ಉಪಸ್ಥಿತರಿದ್ದರು.


Spread the love

1 Comment

Comments are closed.