ಕಾವ್ಯಾ ಸಾವಿನ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮೌನವೇಕೆ ?- ಅಮೃತ್ ಶೆಣೈ

Spread the love

ಕಾವ್ಯಾ ಸಾವಿನ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮೌನವೇಕೆ ?- ಅಮೃತ್ ಶೆಣೈ

ಉಡುಪಿ: ಕರಾವಳಿಯಲ್ಲಿ ಯಾವುದೇ ಸಾವು ಸಂಭವಿಸಿದಾಗ ಆಗಮಿಸಿ ಪ್ರಚೋದನಾಕಾರಿಯಾಗಿ ಮಾತನಾಡುವ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ಸಾವಿನ ಬಗ್ಗೆ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಕಾರಣವೇನು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಅಮೃತ್ ಶೆಣೈ ಪ್ರಶ್ನಿಸಿದ್ದಾರೆ.

ಅವರು ಶುಕ್ರವಾರ ಎನ್ ಎಸ್ ಯು ಐ ನೇತೃತ್ವದಲ್ಲಿ ಕಾವ್ಯಾ ಪೂಜಾರಿ ಅಸಹಜ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಹೋರಾಟ ಕಾವ್ಯಾಳ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದಲೇ ಹೊರತು ಯಾವುದೇ ವ್ಯಕ್ತಿಯ ಅಥವಾ ಸಂಸ್ಥೆಯ ವಿರುದ್ದ ಅಲ್ಲ. ಇಂತಹ ಸಾವು ಮುಂದೆ ಯಾವ ಶಿಕ್ಷಣ ಸಂಸ್ಥೆಯಲ್ಲೂ ನಡೆಯಬಾರದು. ಕಾವ್ಯಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸಂಶಯ ಇದ್ದು ಇದರ ಕುರಿತು ಸೂಕ್ತ ತನಿಖೆ ನಡೆಯಬೇಕಾಗಿದೆ. ಕಾವ್ಯಾಳ ಹೆತ್ತವರ ಮುಂದಿರುವ ಪ್ರಶ್ನೆಗಳಿಗೆ ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಸೂಕ್ತ ಉತ್ತರ ಲಭಿಸಲು ಸಾಧ್ಯ ಎಂದರು.

ಕರಾವಳಿಯಲ್ಲಿ ಈ ಮೊದಲು ಕೂಡ ಹಲವಾರು ಅಸಹಜ ಸಾವುಗಳು ಸಂಭವಿಸಿದೆ. ಉಜಿರೆಯ ಸೌಜನ್ಯ ಕೊಲೆ ಪ್ರಕರಣ ಕೂಡ ಪ್ರತಿಭಟನೆಯ ಬಳಿಕ ಅಂದಿನ ಸರಕಾರ ಸಿಬಿಐ ತನಿಖೆಗೆ ವಹಿಸಿತು ಆದರೂ ಆಕೆಯ ಕುಟುಂಬಕ್ಕೆ ಇದುವರೆಗೆ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ. ಅಂತಹ ಪರಿಸ್ಥಿತಿ ಕಾವ್ಯಾಳ ಕುಟುಂಬಕ್ಕೆ ಬಾರದೆ ಸರಕಾರ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಕಾವ್ಯಾಳ ಕುಟುಂಬಕ್ಕೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ, ಇತರ ನಾಯಕರಾದ ಪ್ರಜ್ವಲ್ ಕುಂದರ್, ಮಾರ್ಸ್ ಸಿಕ್ವೇರಾ, ಕ್ಯಾಲ್ವಿನ್ ಡಿಸಿಲ್ವಾ, ಪ್ರಿನ್ಸ್ ಲೀ, ನಗರಸಭಾ ಸದಸ್ಯ ಜನಾರ್ಧನ ಭಂಡಾರ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

1 Comment

  1. ELLIYAVAREGE POLISARIGE MUKTHA VATAVARANA SIGUDILLAVO ALLIYAVREGE SRISAMANYANIGE NYAYA MARICHIKE.

Comments are closed.