ಕೊರಗರ ಅನಾರೋಗ್ಯಕ್ಕೆ ಡಿ.ಎನ್.ಎ ಪರೀಕ್ಷೆ : ಜಿಪಂ ಸಿಇಒ ಶ್ರೀವಿದ್ಯಾ

Spread the love

ಮ0ಗಳೂರು: ದ.ಕ ಜಿಲ್ಲೆಯ ಮೂಲ ನಿವಾಸಿ ಕೊರಗರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳ ಅಧ್ಯಯನಕ್ಕೆ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ಡಿಎನ್‍ಎ ಕೇಂದ್ರದನಿರ್ದೇಶಕರಾದ ಪ್ರೋ. ಪಿ.ಬಿ.ಗಯ್ ಅವರ ನೇತೃತ್ವದಲ್ಲಿ ಜೂನ್ 15 ಮತ್ತು 16 ರಂದು ಎರಡು ದಿನಗಳ ಕಾಲ ಕೊರಗ ಜನಾಂಗದವರ ರಕ್ತ ಮಾದರಿಗಳನ್ನು ಸಂಗ್ರಹಿಸಿ ಡಿಎನ್‍ಎ ಅಧ್ಯಯನ ನಡೆಸಲಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ಅವರು ತಮ್ಮ ಕಚೇರಿಯಲ್ಲಿ ನಡೆದ ಮೂಲ ನಿವಾಸಿ ಕೊರಗ ಜನಾಂಗದ ಜನಸಂಖ್ಯೆ ಕ್ಷೀಣಿಸುತ್ತಿರುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕೊರಗರು ಮೂಲತ: ಪೌರಕಾರ್ಮಿಕ ವೃತ್ತಿಯನ್ನು ಅವಲಂಭಿಸಿದ್ದು, ಅವರಲ್ಲಿ ಬಹುತೇಕರು ಮದ್ಯಪಾನ, ಧೂಮಪಾನಗಳಿಗೆ ಅಂಟಿಕೊಂಡಿರುವ ಕಾರಣ ಕ್ಯಾನ್ಸರ್, ಕ್ಷಯರೋಗಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಕೊರಗರು ಸರ್ಕಾರ ನೀಡುತ್ತಿರುವ ಪೌಷ್ಠಿಕ ಆಹಾರಗಳನ್ನು ಸೇವಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಅವರು ತಿಳಿಸಿ, ಡಿಎನ್‍ಎ ಪರೀಕ್ಷೆಯಿಂದ ಕೊರಗರಲ್ಲಿ ಆಗಿಂದಾಗೆ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಕೊರಗರ ಕಾಲೋನಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವಂತೆ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಿಇಓ ಸೂಚಿಸಿದರು.

ನಗರದ ಎ.ಜೆ ಆಸ್ಪತ್ರೆವತಿಯಿಂದ ಪ್ರತಿ ಭಾನುವಾರ ಕೊರಗರ ಕಾಲೋನಿಗಳಲ್ಲಿ ಸಂಚಾರಿ ಆರೋಗ್ಯ ಘಟಕ ಆರೋಗ್ಯ ತಪಾಸಣೆ ನಡೆಯಲಿದೆ. ಈ ಸಂಬಂಧ ಜೂನ್ 19 ರಂದು ಮುಲ್ಕಿ ಹೋಬಳಿ ಕೆರೆಕಾಡು ಕೊರಗರ ಕಾಲೋನಿಯಲ್ಲಿ ಆರೋಗ್ಯ ತಪಾಸನಾ ಶಿಬಿರ ನಡೆಯಲಿದೆ ಎಂದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹೇಮಲತಾ ಅವರು ಮಾತನಾಡಿ ಜಿಲ್ಲೆಯಲ್ಲಿ (ಅವಿಭಜಿತ ದ.ಕ ಜಿಲ್ಲೆಯಲ್ಲಿ) ಜನಗಣತಿ ಆಧಾರದಲ್ಲಿ 1961 ರಲ್ಲಿ 6382, 1971 ರಲ್ಲಿ 7620, 1981 ರಲ್ಲಿ 9439 ಮತ್ತು 1991 ರಲ್ಲಿ 11656 ಕೊರಗರ ಜನಸಂಖ್ಯೆ ದಾಖಲಾಗಿದ್ದು 2001 ರ ಜನಗಣತಿಯಂತೆ ಇವರ ಜನಸಂಖ್ಯೆ 4858 ಇದೆ ಎಂದು ಮಾಹಿತಿ ನೀಡಿದರು. ಒಟ್ಟು 1206 ಕುಟುಂಬಗಳ ಸಂಖ್ಯೆ ಇದ್ದು ಇವರಲ್ಲಿ 2465 ಗಂಡಸರು 2393 ಹೆಂಗಸರು ಸೇರಿ ಒಟ್ಟು 225 ಕಾಲೋನಿಗಳಲ್ಲಿ 4858 ಜನ ವಾಸವಾಗಿದ್ದಾರೆ ಎಂದರು.

ದ.ಕ ಜಿಲ್ಲೆಯಲ್ಲಿ 2001 ರಲ್ಲಿ ಕೊರಗ ಜನಾಂಗದವರಲ್ಲಿ 1000 ಗಂಡಸರಿಗೆ 986 ಹೆಂಗಸರಿದ್ದರು. ಈ ಪ್ರಮಾಣ 2011 ರಲ್ಲಿ 1000ಕ್ಕೆ 973 ಅನುಪಾತದಲ್ಲಿದ್ದಾರೆ. ದಕ ಜಿಲ್ಲೆಯಲ್ಲಿ 2011ರ ಆಗಸ್ಟ್‍ನಿಂದ 2016 ರ ಮೇ ಅಂತ್ಯದವರೆಗೆ ಮಂಗಳೂರು, ದೇರಳಕಟ್ಟೆ, ಪುತ್ತೂರು, ಉಜಿರೆ ಮುಂತಾದೆಡೆಗಳ 10 ಹೈಟೆಕ್ ಆಸ್ಪತ್ರೆಗಳಲ್ಲಿ ಒಟ್ಟು 448 ಕೊರಗರಿಗೆ ವಿವಿಧ ಖಾಯಿಲೆಗಳಲ್ಲಿ ಚಿಕಿತ್ಸೆ ನೀಡಿದ ಬಾಬ್ತು ರೂ. 87.63 ಲಕ್ಷ ಆಗಿರುತ್ತದೆ ಎಂದು ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿ ತಿಳಿಸಿದರು.

ಕೊರಗರಿಗೆ ಸರ್ಕಾರ ನೀಡುತ್ತಿರುವ ಉಚಿತ ಪೌಷ್ಠಿಕಾಂಶಯುಕ್ತ ಅಕ್ಕಿ ಬೇಳೆ, ಅಡುಗೆ ಎಣ್ಣೆ, ನಂದಿನಿ ತುಪ್ಪ, ಕೆಂಪು ಕಡ್ಲೆಕಾಳು, ಸೂರ್ಯಕಾಂತಿ ಎಣ್ಣೆ ಇತ್ಯಾದಿಗಳನ್ನು ಮಾರಾಟಮಾಡಿಕೊಳ್ಳುತ್ತಿರುವ ಬಗ್ಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿಯಲ್ಲಿ ದೂರುಗಳು ಬರುತ್ತಿವೆ ಎಂದು ಖುದ್ದು ಶ್ರೀವಿದ್ಯಾರವರೆ ತಿಳಿಸಿ ಇದು ಕೊರಗರ ಆರೋಗ್ಯ ಸುಧಾರಣೆಗಾಗಿ ಸರ್ಕಾರ ನೀಡುತ್ತಿದ್ದು ಇದರ ದುರುಪಯೋಗ ಸಹಿಸಲು ಸಾಧ್ಯವಿಲ್ಲ ಎಂದು ಸಭೆಯಲ್ಲಿದ್ದ ಕೊರಗ ಜನಾಂಗದ ನಾಯಕರಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣರಾವ್ ಮುಂತಾದವರು ಉಪಸ್ಥಿತರಿದ್ದರು.


Spread the love