ಗಲಭೆಯಲ್ಲಿ ಧಾಳಿಗೆ ಬಲಿಯಾದ ಅಮಾಯಕರಿಗೆ ಪರಿಹಾರ ನೀಡುವಂತೆ ಮನವಿ

Spread the love

ಮಂಗಳೂರು: ಇತ್ತೀಚೆಗೆ ವಿಧ್ವಂಸಕ ಕೃತ್ಯದಿಂದ ಜೀವ ಕಳಕೊಂಡ ಅಮಾಯಕರಾದ ರಾಜು ಕೋಟ್ಯಾನ್, ಸೈಫಾನ್(ಮೃತ) ಹಾಗೂ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಸಫ್ವಾನ್ ಮತ್ತು ಇಬ್ರಾಹೀಮ್ ನಶ್ಫಾನ್ರಿಗೆ ಸೂಕ್ತ ಪರಿಹಾರ ಕೊಡಿಸುವಂತೆ ಸಮಾನ ಮನಸ್ಕ ಸಂಘಟನೆಗಳ ಪರವಾಗಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

muslime-manavi

ಈ ವೇಳೆ ಮಾತನಾಡಿದ ಸಂಘಟನೆಯ ಪ್ರಮುಖರು ಕಳೆದ ದಿನಾಂಕ ಎಪ್ರಿಲ್ 12ರಂದು ಉಳ್ಳಾಲದ ಕೋಟೆಪುರದಲ್ಲಿ ದುಷ್ಕರ್ಮಿಗಳಿಂದ ಅಮಾಯಕರಾದ ರಾಜು ಕೋಟ್ಯಾನ್ರವರು, ಹತ್ಯೆಗೀಡಾಗಿದ್ದು ಮಾತ್ರವಲ್ಲದೆ, ಆ ಬಳಿಕ ದಿನಾಂಕ ಎಪ್ರಿಲ್ 26ರಂದು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸೈಫಾನ್ ಹಾಗೂ ಸಫ್ವಾನ್ ಇವರುಗಳ ಪೈಕಿ ಸೈಫಾನ್ರವರು ದಿನಾಂಕ ಎಪ್ರಿಲ್ 30ರಂದು ಮೃತಪಟ್ಟಿರುವರು.
ಮೃತ ರಾಜು ಕೋಟ್ಯಾನ್ ಹಾಗೂ ಸೈಫಾನ್ ಹಾಗೂ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಸಫ್ವಾನ್, ಇಬ್ರಾಹೀಮ್ ನಶ್ಫಾನ್ ತೀರಾ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಅವರುಗಳು ಯಾವುದೇ ಕಾನೂನು ವಿರೋಧಿ ಕೃತ್ಯಗಳಲ್ಲಿ ಭಾಗವಹಿಸಿದವರಲ್ಲ. ಮೀನುಗಾರಿಕೆ ಹಾಗೂ ಇತರ ಕೂಲಿನಾಲಿ ಕೆಲಸಗಳನ್ನು ಮಾಡಿಕೊಂಡು ಅದರಿಂದ ಬರುತ್ತಿದ್ದ ಅತ್ಯಲ್ಪ ಆದಾಯದಿಂದ ತಮ್ಮ ತಮ್ಮ ಬಡ ಕುಟುಂಬವನ್ನು ಸಾಕುತ್ತಿದ್ದ ಇವರುಗಳು, ಮೃತಪಟ್ಟಿದ್ದರಿಂದ ಹಾಗೂ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ, ಅವರ ಬಡ ಕುಟುಂಬಗಳು ತಮ್ಮ ಕುಟುಂಬದ ಆಧಾರ ಸ್ತಂಭಗಳನ್ನೇ ಕಳೆದುಕೊಂಡು ಬೀದಿಪಾಲಾಗಿವೆ. ಸದ್ರಿ ಕುಟುಂಬಗಳು ಎರಡು ಹೊತ್ತಿನ ಅನ್ನ-ನೀರಿಗೂ ತತ್ವಾರ ಪಡಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಗಾಯಾಳು ಸಫ್ವಾನ್ ಯಾವುದೇ ಚಿಕಿತ್ಸೆ ನೀಡಿದರೂ, ಆತ ಹಿಂದಿನಂತೆ ಆರೋಗ್ಯವನ್ನು ಮರು ಪಡೆಯುವುದು ಸಾಧ್ಯವಿಲ್ಲ. ಆತ ಶಾಶ್ವತ ಊನ ಹೊಂದಿದವನಾಗಿಯೇ ಬದುಕು ಸವೆಸಬೇಕಾದ ಪ್ರಮೇಯ ಒದಗಿ ಬಂದಿದೆ. ಹಾಗೆ ಇಬ್ರಾಹೀಮ್ ನಶ್ಫಾನ್ ಎಂಬ ಯುವಕ ಇರಿತಗೊಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಆದ್ದರಿಂದ ದಯಾಳುಗಳಾದ ತಾವುಗಳು ಈ ಬಗ್ಗೆ ಮಾನವೀಯ ಅನುಕಂಪದ ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಸರಕಾರದ ವತಿಯಿಂದ ಮೃತ ಶ್ರೀಯುತ ರಾಜು ಕೋಟ್ಯಾನ್, ಸೈಫಾನ್ ಹಾಗೂ ಗಾಯಾಳು ಸಫ್ವಾನ್, ನಶ್ಫಾನ್ರ ಕುಟುಂಬಗಳಿಗೆ ಆರ್ಥಿಕ ಸಹಾಯಕ ಕೊಡಿಸಬೇಕು ಅಲ್ಲದೆ
ಅದೇ ರೀತಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಪ್ರಾಣ ಹಾಗೂ ಆಸ್ತಿಪಾಸ್ತಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ ಇತ್ಯಾದಿ ಕಡೆಗಳಲ್ಲಿ ಹಾಗೂ ಕರಾವಳಿಯುದ್ದಕ್ಕೂ ವ್ಯಾಪಕವಾಗಿ ಹರಡಿಕೊಂಡಿರುವ ಗಾಂಜಾ ಅಫೀಮು ಮುಂತಾದ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಜಾಲದ ವಿರುದ್ಧ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಂಡು, ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕಾಗಿ ಮುಖಂಡರು ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ಕೆ.ಇ. ಅಶ್ರಫ್ (ಅಧ್ಯಕ್ಷರು, ಮುಸ್ಲಿಮ್ ಸಂಘಟನೆಗಳ ಒಕ್ಕೂಟ ದ.ಕ.), ಇಮ್ತಿಯಾಝ್ ಜಿ.ಎ. (ಅಧ್ಯಕ್ಷರು, ಹಿದಾಯ ಫೌಂಡೇಶನ್ ಮಂಗಳೂರು), ಮುಹಮ್ಮದ್ ರಿಝ್ವಾನ್ (ಸದಸ್ಯರು, ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಮಂಗಳೂರು), ಶಬ್ಬೀರ್ ಅಹ್ಮದ್
(ಮಾಧ್ಯಮ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು), ಅಡ್ವೋಕೇಟ್ ಸರ್ಫರಾಝ್ (ಸಂಚಾಲಕರು, ಎ.ಪಿ.ಸಿ.ಆರ್. ದ.ಕ.) ಹಮೀದ್ ಕುದ್ರೋಳಿ (ಉಪಾಧ್ಯಕ್ಷರು, ಬ್ಯಾರಿ ಸಾಹಿತ್ಯ ಪರಿಷತ್, ದ.ಕ.), ಸಿ.ಎಮ್.ಮುಸ್ತಫಾ, ಪಿ.ಪಿ.ಮಜೀದ್, ತಲ್ಹಾ ಇಸ್ಮಾಈಲ್ (ಎಸ್.ಐ.ಓ. ಮಂಗಳೂರು) ಉಪಸ್ಥಿತರಿದ್ದರು.


Spread the love