ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಅಣ್ಣಾಮಲೈ ಸಹಾಯಧನ

Spread the love

ಉಡುಪಿ: ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಎರಡು ವಿಭಾಗದಲ್ಲಿ ರಾಜ್ಯಕ್ಕೆ ಫಲಿತಾಂಶದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ವಿದ್ಯಾರ್ಥಿನಿಯರು ಎರಡು ವಿಭಾಗದಲ್ಲಿ ಮೇಲುಗೈ ಸಾಧಿಸಿದ್ದು, ಪಿಯುಸಿ ವಿಭಾಗದಲ್ಲಿ ಜಿಲ್ಲೆಯ ಅತೀ ಹೆಚ್ಚು ವಿದ್ಯಾರ್ಥಿನಿಯರು ರಾಜ್ಯಕ್ಕೆ ಉನ್ನತ ಸ್ಥಾನದ ಫಲಿತಾಂಶವನ್ನು ಪಡೆದಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಅವರ ಸಾಧನೆಗೆ ಪ್ರೋತ್ಸಾಹ ನೀಡಿ ಸನ್ಮಾನಿಸಿದ್ದಾರೆ. ವಿಶೇಷವೆಂದರೆ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ವಿದ್ಯಾರ್ಥಿಗಳ ರಿಯಲ್ ಸಿಂಗಮ್ ಅಣ್ಣಾಮಲೈ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೋರ್ವಳಿಗೆ ರೂ 10000 ಸಹಾಯಧನ ನೀಡಿ ವಿಶೇಷತೆಯನ್ನು ಮೆರೆದಿದ್ದಾರೆ.
sp-annamalai-udupi suma-byndoor-studentಬೈಂದೂರು ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 574 ಅತೀ ಹೆಚ್ಚು ಅಂಕ ಪಡೆದ ಬೈಂದೂರು ಮಯ್ಯಾಡಿಯ ಲಕ್ಷ್ಮಣ್ ದೇವಾಡಿಗ ಹಾಗೂ ಗುಲಾಬಿ ದೇವಾಡಿಗ ಅವರ ಪುತ್ರಿ ಈ ಗೌರವಕ್ಕೆ ಪಾತ್ರರಾದವಳು.
ಬೈಂದೂರಿನ ಅಕ್ಷತಾ ದೇವಾಡಿಗ ಕೊಲೆ ಪ್ರಕರಣ ಜಿಲ್ಲೆ ಹಾಗೂ ರಾಜ್ಯದ ನಿದ್ದೆಗೇಡಿಸಿದ ಪ್ರಕರಣವಾಗಿತ್ತು. ಆರೋಪಿಗಳ ಬಂಧನಕ್ಕಾಗಿ ಜಿಲ್ಲೆಯ ವಿದ್ಯಾರ್ಥಿ ಸಮುದಾಯ ಪ್ರತಿಭಟನೆಗೆ ಇಳಿದು ರಸ್ತೆ ತಡೆ ಇನ್ನಿತರ ರೀತಿಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ವಾರದ ಒಳಗೆ ಆರೋಪಿಗಳನ್ನು ಬಂಧಿಸುವುದಾಗಿ ವಿದ್ಯಾರ್ಥಿಗಳ ಮನವೊಲಿಸಿ ಪ್ರತಿಭಟನೆಗಳನ್ನು ಹಿಂಪಡೆಯುವಲ್ಲಿ ಯಶಸ್ವಿಯಾದವರು ಜಿಲ್ಲಾ ಎಸ್ ಪಿ ಅಣ್ಣಾಮಲೈ ಅವರು. ಕೊಟ್ಟ ಮಾತಿನಂತೆ ವಾರದೊಳಗೆ ಆರೋಪಿಗಳನ್ನು ಹಿಡಿದು ಜೈಲಿಗಟ್ಟಿದ ಪೋಲಿಸ್ ಕಾರ್ಯಾಚರಣೆ ಎಸ್ ಪಿ ಅಣ್ಣಾಮಲೈ ಅವರ ಸಾಧನೆಗೆ ರಾಜ್ಯದಾದ್ಯಂತ ಶ್ಲಾಘನೆಗೆ ಕಾರಣವಾಗಿತ್ತು.
ಬಳಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿವರ್ಷ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಮೂಲಕ ಆರ್ಥಿಕ ಸಹಾಯ ನೀಡುತ್ತಾ ಬಂದಿದೆ. ಇದರ ಕಾರ್ಯಕ್ರಮಕ್ಕೆ ಕಳೆದ ವರ್ಷ ಮುಖ್ಯ ಅತಿಥಿಯಾಗಿ ಆಗಮಿಸಿದ ಅಣ್ಣಾಮಲೈ ಬೈಂದೂರು ವಲಯದಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯೋರ್ವಳಿಗೆ ತಾನು ವೈಯುಕ್ತಿಕವಾಗಿ ರೂ 10000 ಸಹಾಯಧನವನ್ನು ಯಕ್ಷಗಾನ ಕಲಾರಂಗದ ಮೂಲಕ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಸುಮಾ ದೇವಾಡಿಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 574 ಅತೀ ಹೆಚ್ಚು ಅಂಕ ಪಡೆದಿದ್ದು, ಆಕೆಗೆ ಯಕ್ಷಗಾನ ಕಲಾರಂಗದ ಮೂಲಕ ವಿದ್ಯಾಪೋಷಕ್ ಪುರಸ್ಕಾರ ಕಾರ್ಯಕ್ರಮದ ವೇಳೆಯಲ್ಲಿ ಸಹಾಯಧನ ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಅಣ್ಣಾಮಲೈ ಅವರು ಕಳೆದ ಕೃಷ್ಣಾಷ್ಟಮಿ ಸಮಯದಲ್ಲಿ ಕಟಪಾಡಿಯ ರವಿ ಅವರು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವೇಷ ಹಾಕಿ ಹಣ ಸಂಗ್ರಹಿಸಿ ವಿತರಣೆ ಸಂದರ್ಭದಲ್ಲಿ ಸ್ವತಃ ಅಣ್ಣಾಮಲೈ ಅವರು ವೈಯುಕ್ತಿಕ ರೂ 10000 ಸಹಾಯಧನ ನೀಡಿ ವಿಶೇಷತೆಯನ್ನು ಮೆರೆದಿದ್ದಾರೆ.

Spread the love