ಜನಾರ್ಧನ ಪೂಜಾರಿಯವರಿಗೆ ಕಾಂಗ್ರೆಸ್ ನಾಯಕರೇ ವಿರೋಧಿ: ಬಿಜೆಪಿ

Spread the love

ಜನಾರ್ಧನ ಪೂಜಾರಿಯವರಿಗೆ ಕಾಂಗ್ರೆಸ್ ನಾಯಕರೇ ವಿರೋಧಿ: ಬಿಜೆಪಿ

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಹಾಗೂ ಮಂಗಳೂರು ದಸರಾ ರೂವಾರಿ ಬಿ.ಜನಾರ್ಧನ ಪೂಜಾರಿಯವರಿಗೆ ಸಡ್ಡು ಕೊಡಲು ಈ ಪರ್ಯಯ ಗೂಡುದೀಪ ಸ್ಪರ್ಧೆಯನ್ನು ಕದ್ರಿ ದೇವಸ್ಥಾನ ವಠಾರಾದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಮತ್ತು ಕಾಂಗ್ರೆಸ್‍ನ ನಾಯಕರು ಸೇರಿ ಆಯೋಜನೆ ಮಾಡಿದ್ದು ಜನಾರ್ಧನ ಪೂಜಾರಿಯವರೊಂದಿಗೆ ಶೀತಲ ಸಮರ ನಡೆಸಲು ಕಾಂಗ್ರೆಸ್‍ನ ಐವನ್ ಡಿ’ಸೋಜಾ ಸೇರಿದಂತೆ ಕಾಂಗ್ರೆಸ್‍ನ ಇನ್ನಷ್ಟು ನಾಯಕರು ಇದಕ್ಕೆ ಇನ್ನಷ್ಟು ವೇಗವನ್ನು ಕೊಟ್ಟಿದ್ದಾರೆ ಎಂದು ಬಿಜೆಪಿ ಮ.ನ.ದಕ್ಷಿಣ ವಿಧಾನಸಭಾ ಅಧ್ಯಕ್ಷ ಡಿ. ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು ಈ ಹಿಂದೆ ಕುದ್ರೋಳಿ ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೋಗದಂತೆ ತಡೆದ ಆರೋಪ ಕೂಡ ಐವನ್ ಡಿಸೋಜಾ ಮತ್ತು ಹಲವಾರು ಕಾಂಗ್ರೆಸ್ ಮುಖಂಡರ ಮೇಲಿದೆ. ಪೂಜಾರಿಯವರಿಗೆ ಸಡ್ಡು ಕೊಡಲು ಮುಖ್ಯಮಂತ್ರಿಯವರನ್ನು ದೇವರ ಕಾರ್ಯಕ್ರಮಕ್ಕೆ ತಡೆದದ್ದು ಸರಿಯಲ್ಲ. ಐವನ್ ಡಿ’ಸೋಜಾ ಹಾಗೂ ಕಾಂಗ್ರೆಸ್ ನಾಯಕರು ಈ ರೀತಿಯ ರಾಜಕೀಯವನ್ನು ಮಾಡಲು ಕದ್ರಿ ದೇವಸ್ಥಾನವನ್ನು ಆಯ್ಕೆ ಮಾಡಿದ್ದು ಹಿಂದು ಸಮಾಜಕ್ಕೆ ಅತ್ಯಧಿಕ ನೋವನ್ನು ತಂದಿದೆ. ಹಿಂದು ಸಮಾಜದ ಭಾವನೆಗೆ ಧಕ್ಕೆಯಾಗಿದೆ. ರಾಜಕೀಯ ಲಾಭ ಪಡೆಯಲು ತಮಗೆ ಇಚ್ಚೆ ಬಂದಂತೆ ದೇವಸ್ಥಾನವನ್ನು ಆಯ್ಕೆ ಮಾಡುವುದು ಮತ್ತು ಕದ್ರಿ ದೇವಸ್ಥಾನವನ್ನು ಆಯ್ಕೆ ಮಾಡಿದಕ್ಕೆ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಮತ್ತೆ ವಿರೋಧಿಸುತ್ತದೆ.

ಮುಂದಿನ ದಿನಗಳಲ್ಲಿ ಒಬ್ಬ ಹಿಂದು ಶಾಸಕ ತನ್ನಷ್ಟಕ್ಕೆ ತಾನು ಕ್ರೈಸ್ತ ಸಮಾಜ, ಚರ್ಚಿನ ಆಡಳಿತ ಮಂಡಳಿಯೊಂದಿಗೆ ಅನುಮತಿ ಪಡೆಯದೆ ಅಥವಾ ಮುಸಲ್ಮಾನರ ಸಮಾಜದೊಂದಿಗೆ ,ಮಸೀದಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸದೆ ಪವಿತ್ರ ಕ್ರಿಸ್ಮಮಸ್ ಅಥವಾ ಪವಿತ್ರ ರಂಜಾನ್ ಹಬ್ಬವನ್ನು ಚರ್ಚ ಅಥವಾ ಮಸೀದಿ ವಠಾರದಲ್ಲಿ ಆಯೋಜಿಸಿದಲ್ಲಿ ಕ್ರೈಸ್ತ ಹಾಗೂ ಮುಸಲ್ಮಾನ ಬಂಧುಗಳ ಭಾವನೆಗಳಿಗೆ ನೋವನ್ನು ಉಂಟು ಮಾಡುತ್ತದೆ ಮತ್ತು ಅದು ಸರಿಯಾದ ಕ್ರಮ ಕೂಡ ಅಲ್ಲ.

ಯಾವುದೇ ಹಿಂದು ಮುಖಂಡರೊಂದಿಗೆ ಅಥವಾ ದೇವಸ್ಥಾನ ಆಡಳಿತ ಮಂಡಳಿಯೊಂದಿಗೆ ಚರ್ಚಿಸದೆ ಐವನ್ ಡಿ’ಸೋಜಾ ಮತ್ತು ಇತರ ನಾಯಕರು ಇಂತಹ ಕಾರ್ಯಕ್ರಮವನ್ನು ದೇವಸ್ಥಾನದಲ್ಲಿ ಆಯೋಜನೆ ಮಾಡಿದ್ದು ಹಿಂದುಗಳ ಭಾವನೆಗೆ ನೋವನ್ನುಂಟು ಮಾಡಿದೆ. ಇಂತಹ ಕಾರ್ಯಕ್ರಮಕ್ಕೆ ಬಿಜೆಪಿಯವರು ವಿರೋಧ ಮಾಡುತ್ತಿಲ್ಲ. ಸಾಮರಸ್ಯದೊಂದಿಗೆ ಎಲ್ಲಾ ರಾಜಕೀಯ ಮತ್ತು ಎಲ್ಲಾ ಧಾರ್ಮಿಕ ಮುಖಂಡರೊಂದಿಗೆ ಇಂತಹ ಕಾರ್ಯಕ್ರಮ ಯಾವುದಾದರೂ ಮೈದಾನದಲ್ಲಿ ಅಥವಾ ಸಾರ್ವಜನಿಕ ಹಾಲ್‍ಗಳಲ್ಲಿ ಆಯೋಜನೆ ಮಾಡಿದಲ್ಲಿ ನಮಗೆ ಬೇಸರವಿರಲಿಲ್ಲ. ಕೇವಲ ದೇವಸ್ಥಾನದಲ್ಲಿ ಆಯೋಜನೆ ಮಾಡಿದ್ದು ಸರಿಯಲ್ಲ.

ಈ ಕಾಂಗ್ರೆಸ್ ಪ್ರೇರಿತ ಕಾರ್ಯಕ್ರಮ ಮಂಗಳೂರು ನಗರ ದಕ್ಷಿಣದ ಎಲ್ಲಾ ಬಿಜೆಪಿಯ ಕಾರ್ಯಕರ್ತರು, ಪದಾಧಿಕಾರಿಗಳು, ಸದಸ್ಯರುಗಳು ಸೇರಿ 28.10.2016 ಶುಕ್ರವಾರ ಸಂಜೆ 4 ಗಂಟೆಯಿಂದ ರಾತ್ರಿಯ ಪೂಜೆಯ ತನಕ ಮತ್ತು 29.10.2016 ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಕದ್ರಿ ದೇವಸ್ಥಾನ ವಠಾರದಲ್ಲಿ ಪರಿವಾರದ ಕಡೆಯಿಂದ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷರಾದ ಡಿ.ವೇದವ್ಯಾಸ ಕಾಮತ್‍ರವರು ವಿನಂತಿಸಿದ್ದಾರೆ.


Spread the love