ಜಿಲ್ಲೆಯಲ್ಲಿ 35460 ಎಕರೆ ಭತ್ತ ನಾಟಿ; ರೈತರಿಗೆ ಆಶಾದಾಯಕವಾದ ಕೃಷಿ ಯಂತ್ರಧಾರೆ, ಕೃಷಿ ಭಾಗ್ಯ

Spread the love

ಜಿಲ್ಲೆಯಲ್ಲಿ 35460 ಎಕರೆ ಭತ್ತ ನಾಟಿ; ರೈತರಿಗೆ ಆಶಾದಾಯಕವಾದ ಕೃಷಿ ಯಂತ್ರಧಾರೆ, ಕೃಷಿ ಭಾಗ್ಯ

ಮ0ಗಳೂರು : ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆ ತೀವ್ರಗೊಂಡಿರುವಂತೆಯೇ ಕೃಷಿ ಚಟುವಟಿಕೆಗಳೂ ಬಿರುಸುಗೊಂಡಿವೆ. ಕರಾವಳಿಯ ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ಭತ್ತ ನಾಟಿಗೊಂಡು ಗದ್ದೆಗಳು ಹಸಿರಿನಿಂದ ನಳನಳಿಸತೊಡಗಿವೆ.

ಭತ್ತದ ಕೃಷಿಗೆ ಮಳೆಯಾಧಾರಿತವಾಗಿ ಹೊಂದಿಕೊಂಡಿರುವ ಜಿಲ್ಲೆಯ ರೈತರು ಕೆಲವೆಡೆ ಎರಡು ಬೆಳೆ ತೆಗೆಯುವುದೂ ಉಂಟು. ಕೃಷಿ ಇಲಾಖೆ ಮಾಹಿತಿ ಪ್ರಕಾರ ಈಗಿನ ಮುಂಗಾರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 14350 ಹೆಕ್ಟೇರ್ ಭೂಮಿಯಲ್ಲಿ( 1 ಹೆಕ್ಟೇರ್ = ಸಾಮಾನ್ಯವಾಗಿ ಎರಡೂವರೆ ಎಕರೆ) ಅಂದರೆ 35460 ಎಕರೆ ಭೂಮಿಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಇದುವರೆಗೆ ಭತ್ತದ ನಾಟಿ ಮಾಡಲಾಗಿದೆ. ಇದರಲ್ಲಿ ಮಂಗಳೂರು ತಾಲೂಕಿನಲ್ಲಿ 3000 ಹೆಕ್ಟೇರ್ ( 7410 ಎಕರೆ), ಬಂಟ್ವಾಳ- 5200 ಹೆಕ್ಟೇರ್( 12844ಎಕರೆ), ಬೆಳ್ತಂಗಡಿ-4550 ಹೆಕ್ಟೇರ್ ( 11238 ಎಕರೆ), ಪುತ್ತೂರು-1250( 3087 ಎಕರೆ) ಹೆಕ್ಟೇರ್ ಹಾಗೂ ಸುಳ್ಯ ತಾಲೂಕಿನಲ್ಲಿ 350 ಹೆಕ್ಟೇರ್( 864 ಎಕರೆ) ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕವಾಗಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಸೇರಿ 2013-14ರಲ್ಲಿ 56452 ಹೆಕ್ಟೇರ್, 2014-15ರಲ್ಲಿ 53640 ಹೆಕ್ಟೇರ್, 2015-16ರಲ್ಲಿ 48689 ಹೆಕ್ಟೇರ್ ಹಾಗೂ 2016-17ರಲ್ಲಿ 43282 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿತ್ತು.

ಭತ್ತದ ಕೃಷಿಗೆ ಸುಮಾರು 504 ಕ್ವಿಂಟಾಲ್ ಭಿತ್ತನೆ ಬೀಜವನ್ನು ಜಿಲ್ಲೆಯಲ್ಲಿ ವಿತರಿಸಲಾಗಿದ್ದು, ಪ್ರಮುಖವಾಗಿ ಎಂಓ4, ಜ್ಯೋತಿ, ಜಯಾ, ಉಮಾ ಬ್ರಾಂಡಿನ ಭೀಜಗಳನ್ನು ರೈತರು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಪೈಕಿ ಕರಾವಳಿಯ ಕೆಂಪು ಅಕ್ಕಿಗೆ ಎಂಓ4 ಬ್ರಾಂಡ್ ಹೆಚ್ಚು ಸೂಕ್ತವಾಗುವ ಕಾರಣಕ್ಕೆ ರೈತರು ಅದಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ರಾಜ್ಯ ಸರಕಾರವು ರೈತರಿಗೆ ಭಿತ್ತನೆ ಭೀಜ ರಿಯಾಯಿತಿ ದರದಲ್ಲಿ ಖರೀದಿಸಲು ಸಹಾಯಧನವನ್ನೂ ನೀಡುತ್ತಿದೆ.

ರಸಗೊಬ್ಬರದ ಕೊರತೆಯಾಗದಂತೆ ಪ್ರಸಕ್ತ ಖಾರೀಫ್ ಸೀಸನ್‍ನಲ್ಲಿ 9330 ಟನ್ ರಸಗೊಬ್ಬರ ವಿರಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 7500 ಟನ್ ವಿತರಿಸಲಾಗಿದೆ. ಇನ್ನೂ 1750 ಟನ್‍ಗಳಷ್ಟು ಸ್ಟಾಕ್ ಸಂಗ್ರಹಿಸಿಡಲಾಗಿದೆ. ಖಾಸಗೀ ವಿತರಕರಲ್ಲದೇ, ವಿವಿಧ ಸಹಕಾರ ಸಂಘಗಳು, ಸೊಸೈಟಿಗಳ ಮೂಲಕವೂ ರಸಗೊಬ್ಬರವನ್ನು ರೈತರು ಖರೀದಿಸುತ್ತಿದ್ದಾರೆ.

ವರದಾನವಾದ ಕೃಷಿ ಯಂತ್ರಧಾರೆ: ಕೃಷಿಯನ್ನು ಬಹುವಾಗಿ ಕಾಡುವ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಲು ಯಂತ್ರೋಪಕರಣ ಬಳಕೆಗೆ ಆದ್ಯತೆ ನೀಡಲಾಗಿದ್ದು, ರೈತರಿಗೆ ಕೃಷಿ ಯಂತ್ರ ಹಾಗೂ ಇನ್ನಿತರ ಉಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲು “ಕೃಷಿ ಯಂತ್ರಧಾರೆ’ ಯೋಜನೆ ಜಾರಿಗೆ ತರಲಾಗಿದೆ. ಈ ಕೇಂದ್ರಗಳ ಮೂಲಕ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಅತ್ಯಲ್ಪ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಟಿಲ್ಲರ್, ಟ್ರಾಕ್ಟರ್, ನಾಟಿಯಂತ್ರ, ಸ್ಪೇಯರ್, ಕಳೆ ನಿಯಂತ್ರಣ ಯಂತ್ರ, ಒಕ್ಕಣೆ ಯಂತ್ರ (ನೇಜಿ ಕಟಾವು ಯಂತ್ರ) ಮ್ತತಿತರ ಯಾಂತ್ರೀಕೃತ ಉಪಕರಣಗಳನ್ನು ರೈತರು ಬಾಡಿಗೆ ಮೂಲಕ ಕೊಂಡೊಯ್ಯಬಹುದಾಗಿದೆ. ಇದು ರೈತರಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಯಶಸ್ಸು ಕಂಡಿದೆ.

ಕೃಷಿ ಯಂತ್ರಧಾರೆ ಯೋಜನೆಯಡಿ ಕಳೆದ 2 ವರ್ಷಗಳಲ್ಲಿ ರೂ. 341.15 ಲಕ್ಷ ಅನುದಾನದಲ್ಲಿ ಜಿಲ್ಲೆಯ 11 ಹೋಬಳಿ ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳ ಮೂಲಕ ರೈತರಿಗೆ ಆಧುನಿಕ ಕೃಷಿ ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲಾಗುತ್ತಿದೆ. ಇದಲ್ಲದೇ, ಯಂತ್ರಗಳ ಮೂಲಕ ಭತ್ತದ ನಾಟಿ ಮಾಡುವ ರೈತರಿಗೆ ಪ್ರತೀ ಎಕರೆಗೆ ರೂ. 1600 ರಂತೆ ರಾಜ್ಯ ಸರಕಾರ ಪ್ರೋತ್ಸಾಹಧನವನ್ನೂ ನೀಡುತ್ತಿದೆ. ಇದು ರೈತರಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಯಶಸ್ಸು ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 8497 ರೈತರು ಕೃಷಿ ಯಂತ್ರಧಾರೆ ಪ್ರಯೋಜನ ಪಡೆದಿರುತ್ತಾರೆ.

ಸರಕಾರೇತರ ಸಂಘ ಸಂಸ್ಥೆಗಳ ಮೂಲಕ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ. ಇದಲ್ಲದೇ, ವಿಟ್ಲದಲ್ಲಿ ರೈತರೊಬ್ಬರು ಕೃಷಿ ಯಂತ್ರಧಾರೆ ಕೇಂದ್ರವನ್ನು ನಿರ್ವಹಿಸುತ್ತಿದ್ದಾರೆ. ರಾಜ್ಯ ಸರಕಾರ ಹಾಗೂ ನಿರ್ವಹಣೆ ಮಾಡುವವರು 75:25 ಆಧಾರದಲ್ಲಿ ಕೇಂದ್ರದ ವೆಚ್ಚವನ್ನು ನಿರ್ವಹಿಸುತ್ತಿದ್ದಾರೆ.

ಕೃಷಿ ಭಾಗ್ಯ: ಪ್ರಸಕ್ತ ವರ್ಷದಿಂದ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ಬಂದಿದೆ. ಇದರಡಿ ರೈತರು ತಮ್ಮ ಕೃಷಿ ಜಮೀನಿಗೆ ಹೊಂಡಗಳನ್ನು ತೆಗೆದು ನೀರು ಸಂಗ್ರಹಿಸಿ ಇಂಗಿಸುವ ವ್ಯವಸ್ಥೆ ಕೈಗೊಳ್ಳಲು ರಾಜ್ಯ ಸರಕಾರ ಸಹಾಯಧನ ನೀಡುತ್ತಿದೆ. ಇದರಿಂದ ರೈತರ ಜಮೀನು ಅಲ್ಲದೇ ಸುತ್ತಮುತ್ತಲ ಬಾವಿ, ಕೆರೆಗಳಲ್ಲೂ ನೀರಿನ ಮಟ್ಟ ಹೆಚ್ಚಲಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಕಾಲದಲ್ಲೂ ಕೃಷಿ ಚಟುವಟಿಕೆಗಳಿಗೆ ಇದು ಆಶಾದಾಯಕವಾಗಲಿದೆ ಎಂದು ಜಂಟೀ ಕೃಷಿ ನಿರ್ದೇಶಕ ಕೆಂಪೇಗೌಡ ತಿಳಿಸಿದ್ದಾರೆ.

ಕೃಷಿ ಹೊಂಡಗಳ ವಿನ್ಯಾಸವನ್ನು ಕೃಷಿ ಇಲಾಖೆ ನೀಡಲಿದ್ದು, ರೈತರೇ ತಾವೇ ಹೊಂಡವನ್ನು ಕೊರೆದು ನಿರ್ವಹಿಸಲಿದ್ದಾರೆ. ರಾಜ್ಯ ಸರಕಾರ ಇದಕ್ಕಾಗಿ ವೆಚ್ಚದ ಶೇಕಡಾ 80ರಷ್ಟು ಸಹಾಯಧನ ( ಪರಿಶಿಷ್ಟ ಜಾತಿ ಮತ್ತು ಪಂಗಡದವವರಿಗೆ ಶೇಕಡಾ 90)ವನ್ನು ನೀಡುತ್ತಿದೆ.

ಇದಲ್ಲದೇ ರೈತರಿಗೆ ಶೇ 90ರಷ್ಟು ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ, ಸಾಮಾನ್ಯ ರೈತರಿಗೆ ಶೇಕಡಾ 50 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಕಡಾ 75ರ ರಿಯಾಯಿತಿ ದರದಲ್ಲಿ ಕೃಷಿ ಸುಣ್ಣ, ಸಾವಯವ ಗೊಬ್ಬರ, ಲಘು ಷೋಷಕಾಂಶಗಳನ್ನು ಬೇಡಿಕೆಯನುಸಾರ ಪೂರೈಸಲಾಗುತ್ತಿದೆ. ಕಳೆದ 4 ವರ್ಷದಲ್ಲಿ 135.00ಲಕ್ಷ ಅನುದಾನದಲ್ಲಿ 205 ಪವರ್ ಟಿಲ್ಲರ್ ಹಾಗೂ 269.20 ಲಕ್ಷ ಅನುದಾನದಲ್ಲಿ 2168 ಪವರ್ ವೀಡರ್ ವಿತರಿಸಲಾಗಿದೆ.

ಕರಾವಳಿಯಲ್ಲಿ ಭತ್ತವು ರೈತರ ಪಾರಂಪರಿಕ ಕೃಷಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಭಿತ್ತನೆ ವಿಸ್ತೀರ್ಣ ಕಡಿಮೆಯಾಗುತ್ತಿದ್ದರೂ, ಸರಕಾರದ ಕೃಷಿ ಯೋಜನೆಗಳು ರೈತರಲ್ಲಿ ಕೃಷಿ ಚಟುವಟಿಕೆಗಳಲ್ಲಿ ಮುಂದುವರಿಯಲು ಪ್ರೋತ್ಸಾಹದಾಯಕವಾಗಿದೆ.


Spread the love