ಡಿವೈಎಫ್‍ಐ – ಎಸ್‍ಎಫ್‍ಐ ನಾಯಕರ ವಿರುದ್ಧ ಸುಳ್ಳು ಕೇಸು ದಾಖಲು; ಸೂಕ್ತ ಕ್ರಮಕ್ಕೆ ಆಗ್ರಹ

Spread the love

ಡಿವೈಎಫ್‍ಐ – ಎಸ್‍ಎಫ್‍ಐ ನಾಯಕರ ವಿರುದ್ಧ ಸುಳ್ಳು ಕೇಸು ದಾಖಲು; ಸೂಕ್ತ ಕ್ರಮಕ್ಕೆ ಆಗ್ರಹ

ಮಂಗಳೂರು: ಡಿವೈಎಫ್‍ಐ, ಎಸ್‍ಎಫ್‍ಐ ನಾಯಕರಾದ ಧೀರಾಜ್ ಪಕ್ಕಲಡ್ಕ, ರಾಜೇಶ್ ಪಕ್ಕಲಡ್ಕ, ಉಸ್ಮಾನ್ ಕಣ್ಣೂರು, ಇಸಾಕ್ ಕಣ್ಣೂರುರವರ ವಿರುದ್ಧ ಸುಳ್ಳು ಕೇಸು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡಿದ ಬಂದರು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಮಂಗಳೂರು ನಗರ ಸಮಿತಿಗಳು ಜಂಟಿಯಾಗಿ ಒತ್ತಾಯಿಸಿದೆ. ಈ ಬಗ್ಗೆ ಡಿವೈಎಫ್‍ಐ ಮತ್ತು ಸಿಐಟಿಯುನ ಉನ್ನತ ಮಟ್ಟದ ನಿಯೋಗವೊಂದು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು.

dyf-sfi-manavi

2016 ಸೆಪ್ಟೆಂಬರ್ 2ರಂದು ಕಾರ್ಮಿಕ ವರ್ಗದ 17 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಅಖಿಲ ಭಾರತ ಮಹಾ ಮುಷ್ಕರವು ಭಾರತ್ ಬಂದ್ ಆಗಿ ಪರಿವರ್ತನೆಗೊಂಡಿದ್ದು, ದ.ಕ ಜಿಲ್ಲೆಯಾದ್ಯಂತ ಅತ್ಯಂತ ಯಶಸ್ವಿಯಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಅಲ್ಲಲ್ಲಿ ನಡೆದ ಕಲ್ಲು ತೂರಾಟ ಪ್ರಕರಣವನ್ನು ಕೇಂದ್ರೀಕರಿಸಿ ಬಂದರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 6 ಪ್ರಕರಣಗಳು ದಾಖಲಾಗಿತ್ತು. ಈ ಬಗ್ಗೆ ಬಂದ್‍ಗೆ ಕರೆ ನೀಡಿದ್ದ ಸಿಐಟಿಯುನ ಮುಖಂಡತ್ವಕ್ಕೆ ಯಾವುದೇ ಕನಿಷ್ಠ ಮಾಹಿತಿಯನ್ನು ಒದಗಿಸದೆ, ಭೀಕರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ರೀತಿಯಲ್ಲಿ ಸೆಪ್ಟೆಂಬರ್ 13ರಂದು ಸಂಜೆ 6:30ಕ್ಕೆ ಬಂದರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ಶಾಂತಾರಾಮ್ ಕುಂದರ್, ಸುಜನ್ ಶೆಟ್ಟಿ ಸೇರಿದಂತೆ ಹಲವು ಪೊಲೀಸರು ಬಜಾಲ್ ಪಕ್ಕಲಡ್ಕದ ಎಸ್‍ಎಫ್‍ಐ ನಾಯಕರಾದ ಹಾಗೂ ಸ್ವತಃ ವಿದ್ಯಾರ್ಥಿಗಳಾದ ಧೀರಾಜ್ (21) ಹಾಗೂ ರಾಜೇಶ್ (20) ಎಂಬವರ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಎದುರಲ್ಲೇ ಹಲ್ಲೆ ನಡೆಸಿ, ಅಲ್ಲಿಂದ ಬಂಧಿಸಿ ಅನತಿ ದೂರದವರೆಗೆ ಮೆರವಣಿಗೆಯಲ್ಲಿ ಕೊಂಡುಹೋಗಿ, ಪ್ರದೇಶದಲ್ಲಿ ಭಾರಿ ಅಪರಾಧ ಕೃತ್ಯವೆಸಗಿದವರಂತೆ ಇಬ್ಬರ ಮೇಲೂ ಅಶ್ಲೀಲ ಭಾಷೆಗಳನ್ನು ಪ್ರಯೋಗಿಸಿರುವುದಲ್ಲದೆ, ಬಜಾಲ್‍ನಿಂದ ಬಂದರು ಪೊಲೀಸ್ ಠಾಣೆಗೆ ಬರುವವರೆಗೆ ಗಾಡಿಯ ಒಳಗೆ ಹಲ್ಲೆ ನಡೆಸಿದ್ದಾರೆ. ರಾತ್ರಿ ಹೊತ್ತು ಠಾಣೆಯಲ್ಲೇ ಕಳೆದು ಮರುದಿನ ಬೆಳಿಗ್ಗೆ ಇಬ್ಬರ ಕೈಗೆ ಕೋಳ ತೊಡಿಸಿ ವೆನ್‍ಲಾಕ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕೊಂಡೊಯ್ದಿದ್ದು, ಈ ಬಗ್ಗೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದರೂ ಪೊಲೀಸರು ಕ್ಯಾರೇ ಅನ್ನಲಿಲ್ಲ. ಇದೇ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 6 ಪ್ರಕರಣ ದಾಖಲಾಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂತು. ಬಳಿಕ ಅಲ್ಲಿನ ಪೊಲೀಸ್ ಅಧಿಕಾರಿಗಳಾದ ಸುಧಾಕರರವರ ಜೊತೆ ಮಾತನಾಡಿ ವಾಸ್ತವ ಪರಿಸ್ಥಿತಿಗಳನ್ನು ಅವರಿಗೆ ತಿಳಿಸಿ ಎಲ್ಲಾ ಪ್ರಕರಣಗಳನ್ನು ಕೈಬಿಡಬೇಕೆಂದು ವಿನಂತಿಸಿದರೂ, ಕೊನೆಗೆ 2 ಪ್ರಕರಣಗಳನ್ನು ದಾಖಲಿಸಿದರು. ಅದು ಬಿಟ್ಟರೆ ಇನ್ನೂ ಯಾವುದೇ ರೀತಿಯ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿದರೂ, ಸೆಪ್ಟೆಂಬರ್ 27ಕ್ಕೆ ರಾತ್ರಿ ಕಣ್ಣೂರಿನ ಮರಳು ಮಾಫಿಯಾದ ಕಿಂಗ್‍ಪಿನ್ ಬೋಟಿ ಫಾರೂಕ್‍ನ ಒತ್ತಾಯದ ಮೇರೆಗೆ ಮತ್ತೆ 1 ಪ್ರಕರಣವನ್ನು ದಾಖಲಿಸಿಲಾಯಿತು. ಅದರಲ್ಲಿ ಬಸ್‍ಗೆ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧವೇ ಇಲ್ಲದ ಡಿವೈಎಫ್‍ಐ ನಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿ ಮರುದಿನ ಸೆಪ್ಟೆಂಬರ್ 28ರಂದು ರಾತ್ರಿ 8 ಗಂಟೆಗೆ ಡಿವೈಎಫ್‍ಐ ನಾಯಕರಾದ ಉಸ್ಮಾನ್ ಹಾಗೂ ಇಸಾಕ್‍ರವರನ್ನು ಬಂಧಿಸಲಾಯಿತು. ಇದೇ ಪ್ರಕರಣದಲ್ಲಿ ಮತ್ತಷ್ಟು ಡಿವೈಎಫ್‍ಐ ನಾಯಕರನ್ನು ಸೇರಿಸಿ ಜೈಲಿಗಟ್ಟುವ ಕುತಂತ್ರವನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶರೀಫ್ ಹಾಗೂ ಸುಧಾಕರ್‍ರವರು ನಡೆಸುತ್ತಿದ್ದಾರೆ ಎಂದು ಉಭಯ ಸಂಘಟನೆಗಳು ಆರೋಪಿಸಿದೆ.

ಸಮಾಜದ ಸ್ವಾಸ್ತ್ಯವನ್ನು ಕಾಪಾಡುವಲ್ಲಿ ಹಾಗೂ ಅನ್ಯಾಯ, ದಬ್ಬಾಳಿಕೆಗಳ ವಿರುದ್ಧ ಸಿಡಿದೇಳುವ ಡಿವೈಎಫ್‍ಐ ಸಂಘಟನೆಯ ನಾಯಕರ ವಿರುದ್ಧ ಸುಳ್ಳು ಕೇಸು ದಾಖಲಿಸುವ ಮೂಲಕ ಜನಚಳುವಳಿಗಳನ್ನು ಕತ್ತು ಹಿಸುಕಲು ಹೊರಟಿರುವ ಬಂದರು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಈ ಇಡೀ ಪ್ರಕರಣಗಳನ್ನು ಸ್ವತಃ ಆಯುಕ್ತರೇ ಖುದ್ದಾಗಿ ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಮನವಿ ನೀಡಲಾಯಿತು.

ನಿಯೋಗದಲ್ಲಿ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಕಾರ್ಯದರ್ಶಿ ಸಾಧಿಕ್ ಕಣ್ಣೂರು, ಮಹಾಬಲ ದೆಪ್ಪೆಲಿಮಾರ್‍ರವರು ಉಪಸ್ಥಿತರಿದ್ದರು.


Spread the love