ದೇಹದಾನಕ್ಕೆ ಸಿದ್ದರಾದ ಹಿರಿಯ ಪತ್ರಕರ್ತ ಸಾವಿನ ನಂತರವೂ ‘ಸೇವೆ’ಯ ಚಿಂತನೆ

Spread the love

ಅಡೂರು: ಶಿಕ್ಷಣ , ಕಲೆ, ಸಾಹಿತ್ಯ, ಮಾಧ್ಯಮ, ಹೋರಾಟ, ಜೈಲುವಾಸ… ಈ ರೀತಿಯಾಗಿ ತನ್ನಿಡೀ ಜೀವನವನ್ನೇ ಸತ್ಯಕ್ಕಾಗಿ ಸಮಾಜಕ್ಕಾಗಿ ಮುಡಿಪಾಗಿಟ್ಟ ದಿಟ್ಟ ಪರ್ತಕರ್ತ, ಕನ್ನಡ ಚಳವಳಿಯ ನೇತಾರ ಎಂ.ವಾಸುದೇವ ಬಳ್ಳುಳ್ಳಾಯ ಇದೀಗ ಜೀವಿತಾವಧಿಯ ನಂತರ ದೇಹದಾನಕ್ಕೆ ಸ್ವಸ್ಪೂರ್ತಿಯಿಂದ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ಪಷ್ಟ ನಿಲುವುಹೊಂದಿದ ಅವರು ಸೂಕ್ತ ವೈದ್ಯಕೀಯ ಕಾಲೇಜು-ಆಸ್ಪತ್ರೆಯನ್ನು ಶೀಘ್ರ ಸಂಪರ್ಕಿಸಿ ದಾಖಲೆ ಸಿದ್ಧಪಡಿಸುವುದಾಗಿ ತಿಳಿಸಿದ್ದಾರೆ.

vasudeva

ಜೀವಮಾನದುದ್ದಕ್ಕೂ ತನ್ನಿಂದ ಇತರರಿಗೆ ಪ್ರಯೋಜನವಾಗಬೇಕು ಎಂಬ ಚಿಂತನೆಯಲ್ಲಿಯೇ ಕ್ರಿಯಾಶೀಲರಾಗಿ ಸೇವೆ ಮಾಡಿದ ಎಂ.ವಿ.ಬಳ್ಳುಳ್ಳಾಯರು, ಜೀವಿತಾವಧಿಯ ನಂತರವೂ ತನ್ನ ದೇಹ ಇತರರಿಗೆ ಉಪಯೋಗವಾಗಬೇಕೆಂಬುದು ಅವರ ಇಚ್ಛೆ. ವಿವಿಧ ಅಂಗಾಂಗಳನ್ನು ದಾನಮಾಡುವ ಮೂಲಕ ಹಲವರ ಬಾಳಿಗೆ ಆಶಾಕಿರಣವಾಗಬೇಕೆಂಬುದು ಮಾತ್ರವಲ್ಲದೆ ದೇಹ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಲಭ್ಯವಾಗಬೇಕೆಂಬ ಚಿಂತನೆಯನ್ನು ಹೊಂದಿ ಈ ಸ್ಪಷ್ಟ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾಮದ ಮೂಡುಮನೆ ಸುಬ್ರಾಯ ಬಳ್ಳುಳ್ಳಾಯರ ತೃತೀಯಪುತ್ರ. ಎಳವೆಯಿಂದಲೇ ಶಿಕ್ಷಣ, ಮಾಧ್ಯಮ, ಹೊರಾಟದ ಮನೋಭಾವ. ಏನಾದರೊಂದು ಸಾಧಿಸಲೇ ಬೇಕೆಂಬ ಛಲ. ಜೋಯಂಟ್ ಬುಕ್ಕಿಂಗ್ ಬಸ್ ಕಂಪೆನಿಯಲ್ಲಿ ಬಸ್ ಚೆಕ್ಕಿಂಗ್ ಕೆಲಸದಿಂದ ವೃತ್ತಿಜೀವನಾರಂಭ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಹೊಸ ಮಾಧ್ಯಮರಂಗ ಸ್ಥಾಪಿಸುವ ಉದ್ದೇಶದಿಂದ ನಾಡಪ್ರೇಮಿ ಪತ್ರಿಕೆಯನ್ನು ಆರಂಭಿಸಿ ಹೊಸ ಕ್ರಾಂತಿಗೆ ಕಾರಣರಾದರು. 1956ರಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಕೂಗು ಹೆಚ್ಚಾದಾಗ ಕರ್ನಾಟಕ ಸಮಿತಿಯ ಕಾರ್ಯದರ್ಶಿಯಾಗಿದ್ದುಕೊಂಡು ದೊಡ್ಡ ಚಳವಳಿಯನ್ನೇ ಮಾಡಿದವರು. ಅದೇ ಕಾರಣಕ್ಕೆ ಜೈಲುವಾಸ. ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿ ಪತ್ರಿಕೆಯ ಪ್ರತಿನಿಧಿಯಾಗಿ ದುಡಿದವರು. ವಿವಿದ ಶಿಕ್ಷಣ ಸಂಸ್ಥೆಗಳ ಮೂಲಕ ಅತಿಥಿ ಉಪನ್ಯಾಸಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಮಾಧ್ಯಮದ ಪಾಠ ಹೇಳಿದ್ದಾರೆ. ಕೋಟೂರು ಕಾರ್ತಿಕೇಯ ಕಲಾನಿಲಯದ ಸ್ಥಾಪಕ ಸದಸ್ಯ. ಹೀಗೆ ಜೀವನದ ಹಲವು ಮಜಲುಗಳನ್ನು ವಿವಿಧ ಪ್ರಕಾರಗಳಲ್ಲಿ ತೊಡಗಿಸಿ ಅಪಾರ ಅನುಭವ ಗಳಿಸಿದವರು. ಇಳಿವಯಸ್ಸಿನಲ್ಲೂ ಕ್ರಿಯಾಶೀಲರಾಗಿರುವುದು ಇವರ ಸಾರ್ಥಕ ಜೀವನಕ್ಕೆ ಸಾಕ್ಷಿಯಾಗಿದೆ.


Spread the love