ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟದ ಉದ್ಘಾಟನೆ

Spread the love

ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟದ ಉದ್ಘಾಟನೆ – ಭಜನೆಯಿಂದ ಮಾನಸಿಕ ಶಾಂತಿ, ನೆಮ್ಮದಿ

ಧರ್ಮಸ್ಥಳದಲ್ಲಿ ಭಾನುವಾರ ಮಂಜೇಶ್ವರ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಹದಿನೆಂಟನೆ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.

image006bhajan-dharmastala-20160918-006image001bhajan-dharmastala-20160918-001 image002bhajan-dharmastala-20160918-002 image003bhajan-dharmastala-20160918-003 image004bhajan-dharmastala-20160918-004 image005bhajan-dharmastala-20160918-005

ಮನೆಯಲ್ಲಿಯೂ, ಮನದಲ್ಲಿಯೂ ಧರ್ಮ ಮತ್ತು ಅಧರ್ಮದ ನಡುವೆ ಯಾವಾಗಲೂ ಸಂಘರ್ಷ ನಡೆಯುತ್ತಿರುತ್ತದೆ. ಭಜನೆಯ ಮೂಲಕ ಮನಸ್ಸಿಗೆ ನಿರಂತರವಾದ ಸಂಸ್ಕಾರ ಕೊಡುವುದರಿಂದ ಮನಸ್ಸು ಪರಿಶುದ್ಧವಾಗಿ, ಪವಿತ್ರವಾಗಿ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಮಂಜೇಶ್ವರ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ಭಾನುವಾರ ಅವರು ಹದಿನೆಂಟನೆ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ದೇವರು ನಮಗೆ ಬದುಕಿನಲ್ಲಿ ಅನೇಕ ಒಳ್ಳೆಯ ಅವಕಾಶಗಳನ್ನು ಕೊಡುತ್ತಾರೆ. ಅದನ್ನು ಸದುಪಯೋಗ ಮಾಡಿ ಸಾತ್ವಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನದಲ್ಲಿ ಸಾತ್ವಿಕ ಚಿಂತನೆಗಳೊಂದಿಗೆ, ನಾವು ಬದುಕುವುದರೊಂದಿಗೆ ಇತರರ ಅಭ್ಯುದಯಕ್ಕೂ ಸಹಕರಿಸಬೇಕು. ಮನೋರಂಜನೆಯಿಂದ ಮನಸ್ಸು ವಿಕಾರವಾಗುತ್ತದೆ. ಆದರೆ ಭಜನೆಯಿಂದ ಆತ್ಮರಂಜನೆಯಾಗಿ ಆಧ್ಯಾತ್ಮಿಕ ಉನ್ನತಿ ಸಾಧಿಸಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ, ಪರಿಶುದ್ಧ ಮನಸ್ಸಿನಿಂದ ಬದುಕು ಕೂಡಾ ಪರಿಶುದ್ಧವಾಗುತ್ತದೆ. ಕಮ್ಮಟದ ಶಿಬಿರಾರ್ಥಿಗಳು ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಜನೆಯ ವೆಬ್‍ಸೈಟ್ ಲೋಕಾರ್ಪಣೆ ಮಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾಪಟುಗಳು ಊರಿನ ಪ್ರಗತಿಯ ಹರಿಕಾರರಾಗಬೇಕು. ಆದರ್ಶ ನಾಯಕತ್ವದೊಂದಿಗೆ ಊರಿನ ಸಂಘಟನೆ ಮತ್ತು ಬಲವರ್ಧನೆ ಮಾಡಿ, ಜನರಲ್ಲಿ ಶಿಸ್ತು, ಸಂಹಯಮ, ಸ್ವಚ್ಛತೆ, ಪರಿಸರ ಜಾಗೃತಿ, ಆರೋಗ್ಯ ರಕ್ಷಣೆ, ದುಶ್ಚಟಗಳನ್ನು ದೂರ ಮಾಡುವ ಬಗ್ಯೆ ಅರಿವು ಜಾಗೃತಿ ಮೂಡಿಸಬೇಕು. ಭಜನಾ ಮಂದಿರಗಳು ಜನರ ಆಸಕ್ತಿಯ ಹಾಗೂ ಶ್ರದ್ಧಾ – ಭಕ್ತಿಯ ಕೇಂದ್ರಗಳಾಗಿ ಬೆಳೆಯಬೇಕು, ಬೆಳಗಬೇಕು ಎಂದು ಹೇಳಿದರು.

ನಿರಂತರವಾಗಿ ಪರಿವರ್ತನೆ ಆಗುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ ಸಾಂಪ್ರಾದಾಯಿಕ ಭಜನೆ ಹಾಡುಗಳನ್ನು ಹೊಸ ರಾಗ ಅಳವಡಿಸಿ ಸುಶ್ರಾವ್ಯವಾಗಿ ಹಾಡಬಹುದು ಎಂದು ಅವರು ಸಲಹೆ ನೀಡಿದರು.

ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಬಿ. ಜಯರಾಮ ನೆಲ್ಲಿತ್ತಾಯ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಇದೇ 24ರ ವರೆಗೆ ನಡೆಯುವ ಭಜನಾ ಕಮ್ಮಟದಲ್ಲಿ 130 ಭಜನಾ ಮಂಡಳಿಗಳಿಂದ 210 ಸದಸ್ಯರು ಭಾಗವಹಿಸುತ್ತಿದ್ದಾರೆ. ಕಳೆದ 17 ವರ್ಷಗಳಲ್ಲಿ 1510 ಭಜನಾ ಮಂಡಳಿಗಳ 2899 ಸದಸ್ಯರಿಗೆ ತರಬೇತಿ ನೀಡಲಾಗಿದೆ.


Spread the love