ಧರ್ಮಸ್ಥಳ : ದುವ್ರ್ಯಸನ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಿಂದ ಸುಖೀ ಸಮಾಜ ನಿರ್ಮಾಣ

Spread the love

ಧರ್ಮಸ್ಥಳ : ದುವ್ರ್ಯಸನ ಮತ್ತು ಭ್ರಷ್ಟಾಚಾರ ಎಂಬ ಹಾಲಾಹಲ ಎಲ್ಲರ ಹೃದಯದಿಂದ ಮಾಯವಾಗಿ ಆರೋಗ್ಯಪೂರ್ಣ ಸುಖೀ ಸಮಾಜ ನಿರ್ಮಾಣವಾಗಬೇಕು. ಹಾಲಾಹಲವನ್ನು ಕುಡಿದು ವಿಷಕಂಠನಾದ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಮಾತ್ರ ಇದು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

pejawar_dharmastala 12-01-2016 22-49-25 pejawar_dharmastala 12-01-2016 22-50-50 pejawar_Dharamstala 12-01-2016 05-59-55 pejawar_Dharamstala 12-01-2016 06-00-54 pejawar_Dharamstala 12-01-2016 06-01-04 pejawar_Dharamstala 12-01-2016 06-02-38

ಉಡುಪಿ ಪರ್ಯಾಯ ಪೀಠವನ್ನೇರುವ ಪೂರ್ವಭಾವಿಯಾಗಿ ಮಂಗಳವರಾ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಯತಿವಂದನಾ ಸಮಾರಂಭದಲ್ಲಿ ಮಾತನಾಡಿದರು.

ಭಗವಂತನ ದರ್ಶನ ಮತ್ತು ಭಕ್ತರ ಸಂಪರ್ಕವೇ ಪರ್ಯಟಣೆಯ ಉದ್ದೇಶವಾಗಿದೆ. ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ ಹೆಗ್ಗಡೆಯವರ ಬಹುಮುಖಿ ಸೇವಾ ಕಾರ್ಯದಿಂದ ತನಗೆ ಸ್ಫೂರ್ತಿ ದೊರಕಿದೆ ಎಂದರು. ಶಿವನ ಹೃದಯದಲ್ಲಿ ವಿಷ್ಣು ಇದ್ದಂತೆ ಹಾಗೂ ವಿಷ್ಣುವಿನ ಹೃದಯದಲ್ಲಿ ಶಿವ ಇದ್ದಂತೆ ಹೆಗ್ಗಡೆಯವರು ಮತ್ತು ತಾನು ಆತ್ಮೀಯವಾಗಿದ್ದು ತಮ್ಮೊಳಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ದುಶ್ಚಟ ನಿವಾರಣೆಗಾಗಿ ಪ್ರತ್ಯೇಕ ಹುಂಡಿ: ಉಡುಪಿ ಕೃಷ್ಣ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಅಲ್ಲದೆ ಭಕ್ತರು ತಮ್ಮ ದುಶ್ಚಟಗಳನ್ನು, ದುವ್ರ್ಯಸನಗಳನ್ನು ಹಾಕಲು ಪ್ರತ್ಯೇಕ ಹುಂಡಿ ಇಡಲಾಗುವುದು ಎಂದು ಸ್ವಾಮೀಜಿ ಪ್ರಕಟಿಸಿದರು.

ಕೃಷ್ಣ ದರ್ಶನದೊಂದಿಗೆ ತಮ್ಮಲ್ಲಿರುವ ಚಟಗಳನ್ನು ಹುಂಡಿಗೆ ಹಾಕಿ ಮುಂದೆ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ ಪ್ರಾಮಾಣಿಕವಾಗಿ ಮಾಡುವ ಕರ್ತವ್ಯವೇ ದೇವರ ಪೂಜೆಯಾಗಿದೆ. ನಮ್ಮ ನಿರಂತರ ಪ್ರಯತ್ನದೊಂದಿಗೆ ಭಗವಂತನ ಅನುಗ್ರಹವೂ ಇದ್ದರೆ ಮಾತ್ರ ಬದುಕಿನಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.

ಉಡುಪಿಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧ: ಆರಂಭದಲ್ಲಿ ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಉಡುಪಿಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ. ತನ್ನ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಿಗೆ ಪೇಜಾವರ ಶ್ರೀಗಳೇ ಪ್ರೇರಕರು ಹಾಗೂ ಮಾರ್ಗದರ್ಶಕರು ಎಂದು ಹೇಳಿದರು.

ಬೀಡಿನಲ್ಲಿ (ಹೆಗ್ಗಡೆಯವರ ನಿವಾಸದಲ್ಲಿ) ಪಾದಪೂಜೆ ಬಳಿಕ ಸ್ವಾಮೀಜಿದ್ವಯರು ದೇವರ ದರ್ಶನ ಮಾಡಿ ಉಡುಪಿಗೆ ತರೆಳಿದರು.


Spread the love