ಧರ್ಮ ಸಂಸದ್ ಗೆ ಉಗ್ರರ ಭೀತಿ; ಗಾಳಿ ಸುದ್ದಿ ಹಬ್ಬಿಸದಂತೆ ಎಸ್ಪಿ ಸಂಜೀವ್ ಪಾಟೀಲ್ ಮನವಿ

Spread the love

ಧರ್ಮ ಸಂಸದ್ ಗೆ ಉಗ್ರರ ಭೀತಿ; ಗಾಳಿ ಸುದ್ದಿ ಹಬ್ಬಿಸದಂತೆ ಎಸ್ಪಿ ಸಂಜೀವ್ ಪಾಟೀಲ್ ಮನವಿ

ಉಡುಪಿ:   ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಕಾರ್ಯಕ್ರಮ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಕಾರ್ಯಕ್ರಮಕ್ಕೆ ಉಗ್ರರ ಭೀತಿ ಎದುರಾಗಿದ್ದು. ಉಗ್ರರ ದಾಳಿ ಬಗ್ಗೆ ಗುಪ್ತಚರ ಇಲಾಖೆ ಈಗಾಗಲೇ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ. ರಾಮಮಂದಿರ ನಿರ್ಮಾಣದ ಘೋಷಣೆ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು  ಮಾಧ್ಯಮಗಳು ವರದಿ ಮಾಡಿವೆ.

ಕರ್ನಾಟಕದ ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಮೌಖಿಕ ಆದೇಶ ನೀಡಲಾಗಿದ್ದು, ಕೋಮು ಸಂಘಟನೆಗಳ ಚಟುವಟಿಕೆ ಮೇಲೂ ಕಣ್ಣಿಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ. ಧರ್ಮ ಸಂಸದ್ ಸ್ಥಳದಲ್ಲಿ ಹೆಚ್ಚಿನ ಮೆಟಲ್ ಡಿಟೆಕ್ಟರ್ ಅಳವಡಿಸಿದ್ದು, ಬಾಂಬ್ ನಿಷ್ಕ್ರೀಯ ದಳ ಹೆಚ್ಚಿನ ಪರಿಶೀಲನೆ ನಡೆಸಿದೆ.ಇನ್ನು ಇಂದು ನಡೆಯುವ ಸಭೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಮ್ ಪಾಟೀಲ್ ಅವರು ಈ ವರೆಗೆ ಅಂತಹ ಯಾವುದೇ ಉಗ್ರರ ಬೆದರಿಕೆ ಕಾರ್ಯಕ್ರಮದ ಮೇಲಿಲ್ಲ ಇದೆಲ್ಲಾ ಸಂಪೂರ್ಣ ಗಾಳಿ ಸುದ್ದಿಯಾಗಿದ್ದು ಸಾರ್ವಜನಿಕರು ಇದರ ಬಗ್ಗೆ ಕಿವಿಗೊಡದೆ ನಿರಾಂತಕವಾಗಿರುವಂತೆ ಕೋರಿದ್ದಾರೆ. ಅಲ್ಲದೆ ಮೆಟಲ್ ಡಿಟೆಕ್ಟರ್ ನ್ನು ಕಾರ್ಯಕ್ರಮದ ಮೊದಲ ದಿನದಿಂದ  ಅಳವಡಿಸಿದ್ದು, ವಿಶೇಷ ಭಧ್ರತೆ ಹೊಂದಿರುವ ಗಣ್ಯರಾದ ಮೋಹನ್ ಭಾಗವತ್ ಹಾಗೂ ಪ್ರವೀಣ್ ತೊಗಾಡಿಯಾ ನಗರದಲ್ಲಿ ವಾಸ್ತವ್ಯ ಇರುವುದರಿಂದ ಹೆಚ್ಚಿನ ಪರಿಶೀಲನೆ ಎಂದಿನಂತೆ ನಡೆದಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

 


Spread the love