ನೆಲ-ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ- ಡಾ ವೀರೇಂದ್ರ ಹೆಗ್ಗಡೆ

Spread the love

ಧಾರವಾಡ: ಪಂಚಮಹಾಭೂತಗಳ ರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಒಡಮೂಡಿಸಿ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ನಾವೆಲ್ಲಾ ಒಂದಾಗಬೇಕು. ಪಂಚ ಭೂತಗಳಲ್ಲಿ ನೀರು ಸಹ ಒಂದಾಗಿದ್ದು, ಕೆರೆ ಹೂಳೆತ್ತಿ ನೀರು ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ನೀರಿನ ಸಂರಕ್ಷಣೆ ಮಾಡುವ ಕಾರ್ಯವನ್ನು ಸ್ಥಳೀಯರ ಸಹಕಾರದೊಂದಿಗೆ ಸಂಸ್ಥೆ ಮಾಡುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡೀ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
image001skdrp-dharawad-20160617 image004skdrp-dharawad-20160617

ಅವರು ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ರೂ.2,86,000 ವೆಚ್ಚದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ)ಯ ಸಹಾಯ ಧನದೊಂದಿಗೆ ಹೂಳೆತ್ತಲಾದ ಹೊನ್ನಮ್ಮನ ಕೆರೆ ಕಾಮಗಾರಿ ವೀಕ್ಷಿಸಿರಸ್ತೆ ಬದಿಯಲ್ಲಿ ಸಾಲುಮರ ನಾಟಿಗೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.

ಅನೇಕರು ನಾವು ಅನುಭವಿಸುತ್ತಿರುವ ಭೂಮಿ ನಮ್ಮ ಅಜ್ಜ ಮುತ್ತಜ್ಜದಿಂರು ನೀಡಿರುವ ಕೊಡುಗೆ ಎಂದು ತಿಳಿದಿದ್ದಾರೆ. ಬದಲಾಗಿ ಅದು ನಮ್ಮ ಮೊಮ್ಮಕ್ಕಳು, ಮರಿ ಮಕ್ಕಳು ನೀಡಿದ ಆಸ್ತಿ ಎಂದು ತಿಳಿದು ನಮ್ಮ ಮುಂದಿನ ಪೀಳಿಗೆಗೆ ಜೋಪಾನವಾಗಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಸಾರ್ವಜನಿಕ ಆಸ್ತಿ ಪಾಸ್ತಿಗಳು ನಮ್ಮದೇ ಎಂದು ತಿಳಿದು ಸಂರಕ್ಷಿಸಿದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ. ಅಂತಹ ಕೆಲಸ ಮುಗುದ ಗ್ರಾಮದಲ್ಲಿ ಆಗಿದ್ದು ಅದನ್ನು ಮುಂದುವರಿಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ ಗ್ರಾಮದ ಪ್ರತಿಯೊಬ್ಬ ನಾಗರಿಕರ ಹೆಗಲ ಮೇಲಿದೆ ಎಂದು ತಿಳಿಸಿದರು.
ಮುಗುದ ಗ್ರಾ.ಪಂ ಅಧ್ಯಕ್ಷ ಬಸವರಾಜ ಕಲಕೆರೆರವರು ಮಾತನಾಡುತ್ತ ಮುಗದಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ಕೆರೆ ಬದಿಯ ರಸ್ತೆ ಅಭಿವೃದ್ಧಿ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದು ಈ ಬೇಡಿಕೆಯನ್ನು ಧರ್ಮಸ್ಥಳದ ವತಿಯಿಂದ ಪೂರೈಸಿರುವುದು ಗ್ರಾಮಸ್ಥರ ಭಾಗ್ಯ ಎಂಬುದಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶP ಡಾ.ಎಲ್.ಎಚ್. ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಎನ್. ಜಯಶಂಕರ ಶರ್ಮ, ಗ್ರಾಮದ ಹಿರಿಯರಾದ ಎಸ್.ಎಸ್ ಪಿರ್ಜಾದೆ, ಸಚಿವ ವಿನಿಯ್ ಕುಲಕರ್ಣಿ ಹಾಗೂ ಸ್ಥಳೀಯ ಶಾಸಕರಾದ ಅನೀಲ್ ಲಾಡ್‍ರ ಆಪ್ತ ಕಾರ್ಯದರ್ಶಿಗಳಾದ ಪ್ರಶಾಂತ್ ಮತ್ತು ಶ್ರೀಕಾಂತ್ ಹಾಗೂ ಗ್ರಾ.ಪಂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಪ್ರಸ್ಥಾವಿಸಿ ಸ್ವಾಗತಿಸಿದರು. ಧಾರವಾಡ ಯೋಜನಾಧಿಕಾರಿ ಕುಸುಮಾಧರ್ ಕೆ. ನಿರೂಪಿಸಿ ವಂದಿಸಿದರು.


Spread the love