ಪರಿಸರವನ್ನು ಪ್ರೀತಿಸಲು ನ್ಯಾಯಾಧೀಶ ಅಮರಣ್ಣನವರ್ ವಿದ್ಯಾರ್ಥಿಗಳಿಗೆ ಕರೆ

Spread the love

ಪರಿಸರವನ್ನು ಪ್ರೀತಿಸಲು ನ್ಯಾಯಾಧೀಶ ಅಮರಣ್ಣನವರ್ ವಿದ್ಯಾರ್ಥಿಗಳಿಗೆ ಕರೆ

ಉಡುಪಿ : ನಮಗೆ ಶುದ್ಧ ಗಾಳಿ, ಪ್ರಾಣವಾಯು ಆಮ್ಲಜನಕ ನೀಡಲು ನಮ್ಮ ಸುತ್ತಮುತ್ತಲೂ ಮರಗಿಡಗಳಿರಬೇಕು. ಹಸಿರು ಪರಿಸರದಿಂದ ಜೀವಜಾಲ ನಳನಳಿಸುತ್ತಿರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ ಬಿ ಅಮರಣ್ಣನವರ್ ಹೇಳಿದರು.

vanamahotsava-udupi

ಅವರಿಂದು ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಉಡುಪಿ ವಲಯ ಮತ್ತು ವಕೀಲರ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವನಮಹೋತ್ಸವ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಿಡ ನೆಡುವ ಜೊತೆಗೆ ಗಿಡಗಳ ನಿರ್ವಹಣೆಯ ಹೊಣೆಯನ್ನು ವಿದ್ಯಾರ್ಥಿಗಳು ಅರಿತು ಮರಗಿಡಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಸ್ವತಃ ತಮ್ಮ ಮರಗಳಿಂದಲೇ ಹಣ್ಣು ಹೂವನ್ನು ಪಡೆಯುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದರು.

ಶಾಲಾ ಆವರಣದಲ್ಲಿ ಹೊನ್ನೆ ಮತ್ತು ಮಾವಿನ ಸಸಿಯನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ವಕೀಲರ ಸಂಘದ ಅಧ್ಯಕ್ಷ ದಯಾನಂದ, ಅರಣ್ಯ ಇಲಾಖೆಯ ಅಧಿಕಾರಿಗಳಾದ ರಮೇಶ್, ಸತೀಶ್ ಬಾಬಾ ರೈ, ಇಲಾಖಾ ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು


Spread the love