ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ರಾಷ್ಟ್ರಧ್ವಜದ ಬಳಕೆ ನಿಷೇಧ

Spread the love

ಪ್ಲಾಸ್ಟಿಕ್‍ನಿಂದ ತಯಾರಿಸಲ್ಪಟ್ಟ ರಾಷ್ಟ್ರ ಧ್ವಜದ ಬಳಕೆ ನಿಷೇಧ

ಮ0ಗಳೂರು: ಭಾರತದ ರಾಷ್ಟ್ರ ಧ್ವಜವನ್ನು ರಾಷ್ಟ್ರೀಯ ಹಬ್ಬಗಳಲ್ಲಿ ಮತ್ತಿತರ ಸರಕಾರಿ ಸಮಾರಂಭಗಳಲ್ಲಿ ಆರೋಹಣ ಮಾಡುವುದು ಮತ್ತು ರಾಷ್ಟ್ರಗೀತೆಳೊಂದಿಗೆ ರಾಷ್ಟ್ರ ಧ್ವಜವನ್ನು ಗೌರವಿಸುವುದು ಭಾರತೀಯ ರಾಷ್ಟ್ರ ಭಕ್ತಿಗಳನ್ನೊಳಗೊಂಡ ಸಂಪ್ರದಾಯವಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್‍ನಿಂದ ಮಾಡಿದಂತಹ ರಾಷ್ಟ್ರ ಧ್ವಜಗಳನ್ನು ಕಿರಿಯರು ಹಿರಿಯರೆನ್ನದೆ ಬಳಸುವುದು ಮತ್ತು ಬಳಸಿದ ಧ್ವಜಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಕಂಡುಬರುತ್ತದೆ. ಈ ರೀತಿ ಎಸೆಯಲ್ಪಟ್ಟ ಧ್ವಜಗಳು ಜನ ಸಾಮಾನ್ಯರ ಕಾಲ್ತುಳಿತಕ್ಕೆ ಒಳಗಾಗುವುದು, ರಸ್ತೆ ಬದಿ ಚರಂಡಿ ಗಟಾರ್‍ಗಳಲ್ಲಿ ಬಿದ್ದು ಕಂಡುಬರುವುದು ಶೋಚನೀಯ ವಿಷಯವಾಗಿದೆ. ಇದು ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಮಡುವ ಅಪಮಾನವಾಗಿದ್ದು ಇದನ್ನು ಅಕ್ಷಮ್ಯ ಅಪರಾಧ ಎಂದು ಪರಿಗಣಿಸಬೇಕಾಗುತ್ತದೆ.
ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮನಬಂದಂತೆ ಬಳಸಿ, ಎಲ್ಲೆಂದರಲ್ಲಿ ವಿಲೇ ಮಾಡುವುದು ಮತ್ತು ಈ ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಷ್ಟಧ್ವಜಕ್ಕೆ ಅವಮಾನ ಹಾಗೂ ಅಗೌರವ ತೋರುವುದನ್ನು ತಡೆಗಟ್ಟುವ ಅವಶ್ಯಕತೆ ಇದೆ. ಅಲ್ಲದೇ, ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರವಾಗುವುದರಿಂದ, ಪ್ರಮುಖ್ಯ ರಾಷ್ಟ್ರೀಯ, ಸಾಂಸ್ಕ್ರತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಲ್ಲಿ, ಪೇಪರ್‍ನಿಂದ ಮಾಡಿದ ರಾಷ್ಟ್ರಧ್ವಜಗಳನ್ನು ಮಾತ್ರ ಬಳಸುವಂತೆ ಮತ್ತು ಕಾರ್ಯಕ್ರಮ ಮುಗಿದ ನಂತರ ಅವುಗಳನ್ನು ನೆಲದ ಮೇಲೆ ಎಲ್ಲೆಂದರಲ್ಲಿ ಎಸೆಯಬಾರದು.
ಹಾನಿಗೊಂಡ ಹರಿದ ಉಪಯೋಗಿಸಲಾಗದಂತಹಾ ಸ್ಥಿತಿಯಲ್ಲಿರುವ ಹಳೆಯದಾಗಿರುವ ರಾಷ್ಟ್ರ ಧ್ವಜವನ್ನು ಗೌರವ ಪೂರ್ವಕವಾಗಿ ಖಾಸಗಿಯಾಗಿ ಸುಟ್ಟು ನಾಶಗೊಳಿಸಬೇಕು. ಇದರ ಹೊರತಾಗಿ ಬೇರೆ ಯಾವುದೇ ರೀತಿಯಲ್ಲಿ ವಿಲೇ ಮಾಡಬಾರದು.
ರಾಷ್ಟ್ರಧ್ವಜ ಮತ್ತು ರಾಷ್ಟ್ರದ ಲಾಂಛನವನ್ನು ನಾಶಗೊಳಿಸುವ ಅವಮಾನಿಸುವ ಅಥವಾ ಧ್ವಜ ನಿಯಮಗಳನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ರಾಷ್ಟ್ರಧ್ವಜದ ಪ್ರಾಮುಖ್ಯತೆಯನ್ನು ಅರಿತು, ಗೌರವಪೂರ್ವಕವಾಗಿ ರಾಷ್ಟ್ರಧ್ವಜಗಳನ್ನು ಬಳಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love