“ಭರತೇಶ ವೈಭವ ಸಾರ್ವಕಾಲಿಕ ಕೃತಿ”- ಡಾ.ಎನ್.ಎಸ್.ತಾರಾನಾಥ್

Spread the love

“ಭರತೇಶ ವೈಭವ ಸಾರ್ವಕಾಲಿಕ ಕೃತಿ”- ಡಾ.ಎನ್.ಎಸ್.ತಾರಾನಾಥ್

ಮಂಗಳೂರು: ಕೃತಿಯೊಂದು ಪೂರ್ವಕಾಲೀನ, ಸಮಕಾಲೀನ ಸಂಗತಿಗಳನ್ನು ಒಳಗೊಂಡರೆ ಸಾರ್ವಕಾಲಿವೆನಿಸುತ್ತದೆ. ರತ್ನಾಕರವರ್ಣಿಯ ಭರತೇಶ ವೈಭವವು ಪೂರ್ವಕಾಲಿಕವಾಗಿ ಬಂದ ಕೃತಿಗಳ ಸಾರವನ್ನು ವಿಭಿನ್ನವಾಗಿ, ನಾವೀನ್ಯವಾಗಿ ಚಿತ್ರಿತವಾಗಿದೆ. ಇದರೊಂದಿಗೆ ಕವಿ “ತನ್ನ ಕಾಲದ ಮೌಲ್ಯಗಳನ್ನು, ಚಾರಿತ್ರಿಕ ವಿಚಾರಗಳನ್ನು ಹೊಂದಿಸಿಕೊಂಡಿದ್ದಾನೆ. ಹಾಗಾಗಿ ಭರತೇಶ ವೈಭವ ಕೃತಿಯೂ ಸಾರ್ವಕಾಲಿಕವೆನಿಸಿದೆ” ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕರೂ, ಸಂಶೋಧಕರೂ ಆದ ಡಾ. ಎನ್.ಎಸ್ ತಾರಾನಾಥ ನುಡಿದರು.

ಅವರು ಡಾ. ಪಿ.ದಯಾನಂದ.ಪೈ- ಪಿ.ಸತೀಶ.ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಕಾಲೇಜಿನಲ್ಲಿ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಕಾಲೇಜು ರಥಬೀದಿ ಇಲ್ಲಿ “ರತ್ನಾಕರವರ್ಣಿಯ ಭರತೇಶ ವೈಭವ ಮರು ಓದು” ವಿಷಯದ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕವಿಯೊಬ್ಬ ನೂತನ ಸೃಷ್ಟಿಗೆ ಹೊರಟಾಗ ವಸ್ತು, ನಿರೂಪಣೆ ಛಂದಸ್ಸು ಎಲ್ಲವೂ ಹೊಸತಾಗಿದ್ದರೆ ಕವಿಗೆ ಸವಾಲು ಇರುವುದಿಲ್ಲ. ಆದರೆ ರತ್ನಾಕರವರ್ಣಿ ಆರಿಸಿದ ವಸ್ತು, ಛಂದಸ್ಸು ಆಗಲೇ ಜನಪ್ರಿಯವಾಗಿತ್ತು. ಹಾಗಾಗಿ ಅದರ ನಿರೂಪಣೆಯೇ ಅವನಿಗೆ ಸವಾಲಾಗಿತ್ತು. ಸಮಕಾಲೀನ ಚಾರಿತ್ರಿಕ ಅಂಶಗಳನ್ನು ಪುರಾಣದ ಚೌಕಟ್ಟಿನೊಳಗೆ ಕಾಲ್ಪನಿಕ ಅಂಶಗಳೊಂದಿಗೆ ವೈಭವೀಕರಿಸುತ್ತಾ ಸಾರ್ವಕಾಲಿಕಗೊಳಿಸುವ ವೈಶಿಷ್ಯ ಭರತೇಶ ವೈಭವದಲ್ಲಿದೆ. ರತ್ನಾಕರವರ್ಣಿ ಯಾವ ಕಾಲಕ್ಕೂ ಸಲ್ಲುವವನಾಗುವುದು ಈ ವಿಶಿಷ್ಟ ಗುಣದಿಂದ ಎಂದವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್ ಸಿ ಅವರು ವÁತನಾಡುತ್ತಾ ಸಾಹಿತ್ಯದ ಓದು ಮನಸ್ಸನ್ನು ಹಸನಾಗಿಸುತ್ತದೆ, ಜೀವನೋತ್ಸಾಹ ಮತ್ತು ಮಾನವೀಯ ಗುಣಗಳನ್ನು ಬೆಳೆಸುತ್ತದೆ. ಇದಕ್ಕಾಗಿ ಸಾಹಿತ್ಯದ ಅಭಿರುಚಿ ಇರಬೇಕು ಎಂದರು.

ಪೀಠದ ಸಂಯೋಜಕರಾದ ಡಾ.ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ.ಶಿವರಾಮ. ಪಿ ಉಪಸ್ಥಿತರಿದ್ದರು. ಡಾ ನಾಗವೇಣಿ ಮಂಚಿ ಧನ್ಯವಾದ ಸಮರ್ಪಿಸಿದರು. ಪ್ರೊ ರವಿಕುಮಾರ ಎಂ.ಪಿ ಕಾರ್ಯಕ್ರಮ ನಿರ್ವಹಿಸಿದರು.

ತದ ನಂತರ ನಡೆದ ಗೋಷ್ಠಿಗಳಲ್ಲಿ ಡಾ.ಕೆ ತಿಮ್ಮಯ್ಯ ಮೈಸೂರು ವಿವಿ, ಡಾ. ಎಂ ರಂಗಸ್ವಾಮಿ ಮದರಾಸು ವಿವಿ, ಡಾ. ಎಚ್.ಎಂ ನಾಗಾರ್ಜುನ ಸಹ್ಯಾದ್ರಿ ಕಾಲೇಜು ಶಿವಮೊಗ್ಗ, ಡಾ.ಪಿ ನಾಗರಾಜು ಬೆಳಗಾಂ ವಿವಿ, ಶ್ರೀ.ಮುನಿರಾಜ ರೆಂಜಾಳ ಮೂಡಬಿದಿರೆ, ಡಾ.ಮಾಧವ ಎಂ.ಕೆ ಮಂಗಳೂರು ವಿವಿ ಕಾಲೇಜು ಇವರು ವಿವಿಧ ವಿಚಾರಗಳ ಮೇಲೆ ಪ್ರಬಂಧಗಳನ್ನು ಮಂಡಿಸಿದರು.


Spread the love