ಮಂಗಳೂರು: ಅತಿಥಿ ಉಪನ್ಯಾಸಕರ ಸಮಸ್ಯೆ ಕೂಡಲೇ ಬಗೆಹರಿಸಿ – ಕಾರ್ಣಿಕ್

Spread the love

ಮಂಗಳೂರು: ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ಸಹಸ್ರಾರು ಉಪನ್ಯಾಸಕರು ಕಳೆದ 25 ದಿನಗಳಿಂದ ಮುಷ್ಕರದಲ್ಲಿ ತೊಡಗಿದ್ದು, ಉಪನ್ಯಾಸಕರಿಲ್ಲದೆ ಕೆಲವು ಕಾಲೇಜುಗಳು ಮುಚ್ಚಿದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾನಮಾನವಾಗಿದೆ.  ಅತಿಥಿ ಉಪನ್ಯಾಸಕರಿಗೆ ನೀಡಬೇಕಾದ ಗೌರವಧನವನ್ನು ಸಹ ಸರಿಯಾಗಿ ನೀಡದೆ ಸತಾಯಿಸಲಾಗುತ್ತಿದೆ. ಅತಿಥಿ ಉಪನ್ಯಾಸಕರು ಕುರಿತು ಸರ್ಕಾರ ನಿರ್ಲಕ್ಷ ವಹಿಸಿದ್ದರಿಂದ ಓರ್ವ ಅತಿಥಿ ಉಪನ್ಯಾಸಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ದು:ಖದ ವಿಚಾರವಾಗಿದೆ. ಅತಿಥಿ ಉಪನ್ಯಾಸಕರ  ಈ ಕೆಳಕಂಡ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಕ್ರಮಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ.

  1. ಅತಿಥಿ ಉಪನ್ಯಾಸಕರಿಗೆ ನೀಡಲಾಗುವ ಸಂಭಾವನೆಯನ್ನು ಯುಜಿಸಿ ಮಾನದಂಡದಂತೆಹೆಚ್ಚಿಸುವುದು ಹಾಗೂ ಗೌರವಯುತವಾಗಿ ಜೀವಿಸಲು ಅನುವು ಮಾಡಿಕೊಡುವುದು.
  2. ಯು.ಜಿ.ಸಿ. ನಿಗದಿತ ಅರ್ಹತೆಯನ್ನು ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಅವರು ಸಲ್ಲಿಸಿದ ಸೇವೆಯ ಪ್ರಮಾಣಕ್ಕೆ ತಕ್ಕಂತೆ ಗ್ರೇಸ್ ಮಾರ್ಕ್ಸ್ ನೀಡಿ ಖಾಯಂ ನೇಮಕಾತಿಗೆ ಅನುಕೂಲ ಮಾಡಿಕೊಡುವುದು.
  3. ರಾಜ್ಯದಲ್ಲಿ ಮುರಾರ್ಜಿ ಶಾಲೆಯ ಅತಿಥಿ ಶಿಕ್ಷಕರಿಗೆ ಕಲ್ಪಿಸಿದಂತೆ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ವಿಶೇಷ ಕಾಯ್ದೆಯನ್ನು ರಚಿಸಿ ನೇಮಕಾತಿ ಮಾಡುವುದು.
  4. ಪ್ರತಿ ವರ್ಷವು ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ನಡೆಸುವ ಬದಲು ಹೊಸ ಹುದ್ದೆಗಳಿಗೆ ಮಾತ್ರ ಆಯ್ಕೆ ಪ್ರಕ್ರಿಯೆ ಕೈಗೊಂಡು ಹಿಂದಿನ ವರ್ಷಗಳಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಕೈಬಿಡದೆ ಅವರ ಸೇವೆಯನ್ನು ಹಾಗೆಯೇ ಮುಂದುವರೆಸುವುದು.
  5. ಅತಿಥಿ ಉಪನ್ಯಾಸಕರಿಗೆ ನಿಗದಿತ ದಿನಾಂಕಕ್ಕೆ ಸರಿಯಾಗಿ ಮಾಸಿಕ ಗೌರವಧನವನ್ನು ಪಾವತಿಸಲು ಕ್ರಮಕೈಗೊಳ್ಳುವುದು.
  6. ಆತ್ಮಹತ್ಯೆಗೆ ಶರಣಾದ ಮಾಗಡಿ ತಾಲೂಕು ಕುದೂರು ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಶ್ರೀ ಲಕ್ಷ್ಮೀಕಾಂತ್ ಕುಟುಂಬದವರಿಗೆ ಪರಿಹಾರ ನೀಡುವುದು.

ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತೇನೆ.


Spread the love

2 Comments

  1. ಸರ್. ಜೀವ ಬಿಟ್ಟೇವು ಹೊರತು ಧರಣಿ ಬಿಡೇವು. ನಿಮ್ಮೊಂದಿಗೆ ನಾವಿದ್ದೇವೆ. ನಮ್ಮೇಲ್ಲರ ಸಹಕಾರ ನಿಮಗಿದೆ.

Comments are closed.