ಮಂಗಳೂರು: ಕದ್ರಿಯಲ್ಲಿ ಗಿಡ ನೆಡುವ ಸಪ್ತಾಹಕ್ಕೆ ಚಾಲನೆ

Spread the love

ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಮಂಗಳೂರು, ಮಂಗಳೂರು ವಕೀಲರ ಸಂಘ, ಮತ್ತು ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಕದ್ರಿ ಉದ್ಯಾನವನ, ಕದ್ರಿ, ಮಂಗಳೂರುನಲ್ಲಿ  “ಗಿಡ ನೆಡುವ ಸಪ್ತಾಹದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿತ್ತು.

b

a

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸರ್ವೋದಯ ಶೆಟ್ಟಿಗಾರ್, ಗೌರವಾನ್ವಿತ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರುರವರು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಮನುಷ್ಯ ಪ್ರಕೃತಿಯನ್ನು ಅವನ ಸ್ವಂತ ಉಪಯೋಗಕ್ಕೆಂದು ಬಳಸಿಕೊಂಡು ಅರಣ್ಯವನ್ನು ನಾಶಪಡಿಸುತ್ತಿದ್ದಾನೆ. ಆದುದ್ದರಿಂದ ಭೂಮಿಯ ಉಷ್ಣತೆ ಹೆಚ್ಚಾಗಿದ್ದು, ಪ್ರಕೃತಿಯಲ್ಲಿ ವಿಕೋಪಗಳು ಘಟಿಸುತ್ತಿದ್ದು, ಮನುಷ್ಯ ಮಾನವ ಕುಲದ ಉಳಿವಿಗೆ ಪ್ರಕೃತಿಯ ಸಮತೋಲನ ಕಾಪಾಡುವುದು ಅವಶ್ಯಕ, ಆದುದ್ದರಿಂದ ಅರಣ್ಯವನ್ನು ಬೆಳಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಎಸ್.ಪಿ. ಚೆಂಗಪ್ಪ, ಅಧ್ಯಕ್ಷರು, ಮಂಗಳೂರು ವಕೀಲರ ಸಂಘ, ಮಂಗಳೂರುರವರು ಮಾತನಾಡುತ್ತಾ ಅರಣ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮ ಸಾರ್ವಜನಿಕರಿಗೆ ಒಂದು ಒಳ್ಳೇಯ ಸಂದೇಶವನ್ನು ನೀಡುತ್ತದೆ ಮತ್ತು ನಾವು ಪ್ರಕೃತಿಗೆ ಗಿಡ ನೆಡುವ ಮುಖಾಂತರ ನಮ್ಮ ಕರ್ತವ್ಯವನ್ನು ಮೆರೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ಕೆ.ಟಿ. ಹನುಂತಪ್ಪ, ರವರು ಮಾತನಾಡುತ್ತಾ ನ್ಯಾಯಾಂಗ ಮತ್ತು ವಕೀಲ ಸಮುದಾಯದ ಜೊತೆಯಲ್ಲಿ ಅರಣ್ಯ ಇಲಾಖೆಯ ಕಾರ್ಯಕ್ರಮಗಳು ನಡೆಯುತ್ತಿರುವುದು ಸಮಾಜದಲ್ಲಿ ಒಂದು ಒಳ್ಳೇಯ ಬೆಳವಣಿಗೆಯಾಗಿದ್ದು, ಸಾರ್ವಜನಿಕರು ಇದನ್ನು ಸಕಾರತ್ಮಕವಾಗಿ ತೆಗೆದುಕೊಂಡು ಪ್ರಕೃತಿಗೆ ಅವರ ಕೊಡುಗೆಯನ್ನು ಕೊಡಬೇಕೆಂದು ಮತ್ತು ಈ ಕಾರ್ಯಕ್ರಮಕ್ಕೆ ಅವರ ಇಲಾಖೆಯಿಂದ ಸಂಪೂರ್ಣ ಬೆಂಬಲವಿದೆಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರು, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಶ್ರೀ ಗಣೇಶ. ಬಿ., ರವರು ನಿರೂಪಿಸಿದರು ಮತ್ತು ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಯಾದ ಶ್ರೀ ಲೋಬೋರವರು ವಂದಿಸಿದರು.


Spread the love