ಮಂಗಳೂರು ;ತಾಲಿಬಾನಿ ಸಂಸ್ಕೃತಿ ಪ್ರದರ್ಶನ; ವೃದ್ದನಿಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿತ; ಮನನೊಂದು ವೃದ್ದ ಆತ್ಮಹತ್ಯೆ

Spread the love

ಮಂಗಳೂರು: ವೃದ್ದರೋರ್ವರು ಕುಡಿದು ಬಂದು ತನ್ನ ಹೆಂಡತಿ ಮತ್ತು ಮಗನಿಗೆ ಕಿರುಕುಳ ನೀಡುತ್ತಿದ್ದರು ಎನ್ನುವ ಕಾರಣಕ್ಕೆ ಊರಿನವರು ವೃದ್ದರಿಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ಹಿಗ್ಗಾಮುಗ್ಗಾ ಥಳಿಸಿದ ಅವರು ಅತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗುವಂತಹ ತಾಲಿಬಾನಿ ಸಂಸ್ಕೃತಿಯ ಪ್ರದರ್ಶನ ಮಂಗಳೂರಿನಲ್ಲಿ ವರದಿಯಾಗಿದೆ.

mng-suicide

ಮಂಗಳೂರಿನ ವಾಮಂಜೂರು ಜೋತಿ ನಗರದ ನಿವಾಸಿ ವಾಸುದೇವ ಭಟ್ (58), ಪ್ರತಿದಿನ ಕುಡಿದು ಬಂದು ತನ್ನ ಪತ್ನಿ ಹಾಗೂ ಮಗನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ. ಇವರ ಕಿರುಕುಳ ತಾಳಲಾರದೆ ಪತ್ನಿ ಹಾಗೂ ಮಗ ಪಕ್ಕದ ಮನೆಯಲ್ಲಿ ಮಲಗುತ್ತಿದ್ದರು. ಈ ಬಗ್ಗೆ ವಾಸುದೇವ ಭಟ್ ಅವರಿಗೆ ಊರಿನವರು ಹಲವು ಬಾರಿ ಬುದ್ದಿವಾದ ಹೇಳಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದರಿಂದ ರೊಚ್ಚಿಗೆದ್ದ ಊರಿನವರು ವಾಸುದೇವ ಭಟ್ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ, ಕಣ್ಣಿಗೆ ಮೆಣಸಿನ ಪುಡಿ ಎರಚಿ ಹಿಗ್ಗಾ ಮುಗ್ಗಾ ಥಳಿಸಿದ್ದರು. ವಾಸುದೇವ ಭಟ್ ಅವರನ್ನು ಥಳಿಸಿದ ವೀಡಿಯೋ ಚಿತ್ರೀಕರಣ ಮಾಡಿ ವಾಟ್ಸಾಪ್ ಹಾಗೂ ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ಹಾಕಿದ್ದು, ಇದರಿಂದ ಮನನೊಂದ ವಾಸುದೇವ ಭಟ್ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಊರಿನವರು ನಡೆಸಿದ ಅಮಾನವಿಯ ಕೃತ್ಯ ತಾಲಿಬಾನಿ ಸಂಸ್ಕೃತಿಯನ್ನು ಹೋಲುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


Spread the love