ಮಂಗಳೂರು: ಲೋಕೊಪಯೋಗಿ ಸಚಿವ ಹೆಚ್.ಸಿ ಮಹಾದೇವಪ್ಪರಿಂದ ನ್ಯಾಯಾಲಯ ಸಂಕೀರ್ಣ ಸಂಪರ್ಕ ರಸ್ತೆ ಶಂಕುಸ್ಥಾಪನೆ

Spread the love

ಮಂಗಳೂರು: ಮಂಗಳೂರು ನಗರಕ್ಕೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯವನ್ನು ಒದಗಿಸಿ, ನಗರದ ಸೌಂದರ್ಯದ ಜೊತೆಗೆ ನಗರವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿ ಪಡಿಸುವುದು ನನ್ನ ಮುಖ್ಯ ಉದ್ದೇಶ ಇದಕ್ಕಾಗಿ ರಾಜಕೀಯವಾಗಿ ಯೋಚಿಸದೆ ಅಭಿವೃದ್ದಿಯ ಕಡೆಗೆ ಗಮನ ನೀಡುತ್ತಿದ್ದೇನೆ ಎಂದು ಮಂಗಳೂರು ದಕ್ಷಿಣ ವಲಯದ ಶಾಸಕ ಜೆ. ಆರ್. ಲೋಬೊ ಹೇಳಿದರು.

ಅವರು ಮಂಗಳೂರು ಮುಖ್ಯ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆಗೊಳಿಸಿ ಮಾತನಾಡಿದರು.

1 2

 “ಲೋಕೋಪಯೋಗಿ ಇಲಾಖೆಯಿಂದ ಪ್ರತೀ ಶಾಸಕರ ಕ್ಷೇತ್ರಕ್ಕೆ ನೀಡುವ 11 ಕೋಟಿ ರೂ ಅನುವಾನವನ್ನು ಪೂರ್ಣವಾಗಿ ಈ ರಸ್ತೆ ಸಂಪರ್ಕವನ್ನು ಮಾಡಲು ಮೀಸಲಿಟ್ಟಿದ್ದೇನೆ. ರಾಜಕೀಯವಾಗಿ ನೋಡುವುದಾದರೆ ಇದೇ 11 ಕೋಟಿ ಅನುದಾನವನ್ನು ಬಳಸಿ ನಗರದ ವಿವಿದೆಡೆಯಲ್ಲಿ ಹಲವು ರಸ್ತೆಗಳನ್ನು ನಿರ್ಮಿಸಬಹುದಿತ್ತು ಮತ್ತು ಮತದಾರರಿಂದ ಮೆಚ್ಚುಗೆಯನ್ನೂ ಪಡೆಯಬಹುದಿತ್ತು, ಆದರೆ ನ್ಯಾಯಾಲಯ ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಅಗತ್ಯತೆಯನ್ನು ಮನಗಂಡು ಸಂಪೂರ್ಣ ಅನುದಾನವನ್ನು ಈ ಉದ್ದೇಶಕ್ಕೆ ಮೀಸಲಿಟ್ಟಿದ್ದೇನೆ.’ ಎಂದರು

ಮಂಗಳೂರು ನಗರದಲ್ಲಿರುವ ಪ್ರಮುಖ ನ್ಯಾಯಾಲಯದ ಸಂಕೀರ್ಣದ ಉದ್ಘಾಟನೆಯು ಬಹಳ ಹಿಂದೆಯೇ ಆಗಬೇಕಿತ್ತು. ಆದರೆ ನ್ಯಾಯಾಲಯ ಸಂಕೀರ್ಣಕ್ಕೆ ಹೋಗಲು ಇರುವ ರಸ್ತೆಯು ಬಹಳ ಕಿರಿದಾಗಿರುವುದರಿಂದ ಈ ಉದ್ಘಾಟನೆಯನ್ನು ಮುಂದೂಡಲಾಗಿತ್ತು.

“ರಸ್ತೆಯ ಉದ್ದ 400 ಮೀಟರ್ ಅಷ್ಟೇ ಇದ್ದರೂ ಇಲ್ಲಿ ಕಾಮಗಾರಿ ಮಾಡಲು ಅನೇಕ ತಾಂತ್ರಿಕ ಅಡಚಣೆಗಳು ಇವೆ, ಇದೊಂದು ಗುಡ್ಡ ಪ್ರದೇಶವಾದರಿಂದ ವಿಶೇಷ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಬೇಕು, ಇದಕ್ಕಾಗಿ ಈಗಾಗಲೇ ವಿನ್ಯಾಸವನ್ನು ನಿರ್ಮಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಹಾಗೂ ಇಂಡಿಯನ್ ಇನ್ಟಿಟ್ಯೂಟ್ ಆಫ್ ಸಾಯನ್ಸ್‍ನ ಪರಿಣಿತರ ಸಲಹೆಗಳನ್ನು ಪಡೆಯಲಾಗುವುದು ಆದ್ದರಿಂದ ಈ ಯೋಜನೆಗಾಗಿ ಅಧಿಕ ಪ್ರಮಾಣದ ಅನುದಾನವನ್ನು ಮೀಸಲಿಡಲಾಗಿದೆ” ಎಂದರು.

3

“ಈಗಿರುವ ರಸ್ತೆಯು ಬಹಳ ಕಿರಿದಾಗಿದ್ದು, ಇದನ್ನು ಕಾಂಕ್ರಿಟ್ ಚತುಷ್ಪತ ರಸ್ತೆಯಾಗಿ ನಿರ್ಮಿಸಲಾಗುವುದು. ಗುಡ್ಡ ಪ್ರದೇಶವಾಗಿರುವುದರಿಂದ ಇಲ್ಲಿ ಮಣ್ಣ ಕುಸಿಯುವ ಭೀತಿ ಇದೆ, ಅದಕ್ಕಾಗಿ ನೈಲಿಂಗ್ ಮಾಡಲಾಗುವುದು. ಅನುದಾನವನ್ನು ಕೇವಲ ರಸ್ತೆಗಾಗಿ ಬಳಸದೆ ದಾರಿದೀಪದಂತಹ ಇತರ ಮೂಲ ಸೌಕರ್ಯಗಳನ್ನೂ ಇಲ್ಲಿ ನಿರ್ಮಿಸಲಾಗುವುದು. ಕಾಮಗಾರಿಯನ್ನು ಇನ್ನು ಒಂದುವರೆ ವರ್ಷದಲ್ಲಿ ಮುಗಿಸಲು ಉದ್ದೇಶಿಸಲಾಗಿದೆ”

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಸಚಿವರಲ್ಲಿ ಪ್ರಸ್ತಾಪಿಸಿದಾಗ ತಕ್ಷಣ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ, ಎಂದು ಹೇಳಿದರು.

ನಗರದ ವ್ಯವಸ್ಥಿತ ಅಭಿವೃದ್ದಿಗಾಗಿ ಭವಿಷ್ಯದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ನೇತ್ರಾವತಿ ನದಿಯ ಬಳಿ ಕಣ್ಣೂರಿನ ಮೂಲಕ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸುಮಾರ್ 5ಕಿ.ಮಿ ಬೈಪಾಸ್ ರಸ್ತೆಯ ನಿರ್ಮಿಸಲು, ಸಚಿವರಲ್ಲಿ ಮನವಿ ಮಾಡಿದರು. ಇದರಿಂದಾಗಿ, ಬೆಂಗಳೂರಿಗೆ ಸುಲಭ ಸಂಪರ್ಕ, ಕಂಕನಾಡಿ ರೈಲು ನಿರ್ಮಾಣದ ಅಭಿವೃದ್ದಿ ಹಾಗೂ ನಗರದಲ್ಲಿ ವಾಹನದಟ್ಟಣೆಯನ್ನು ಕಡಿಮೆ ಮಾಡಲು ಅನುಕುಲವಾಗುತ್ತದೆ,” ಎಂದು ತೀಳಿಸಿದರು.

ಈ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಲೋಕೊಪಯೋಗಿ ಸಚಿವ ಹೆಚ್.ಸಿ ಮಹಾದೇವಪ್ಪ ತೀಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆ‍ರ್ನಾಂಡಿಸ್, ಬ್ಲಾಸಂ ಫೆರ್ನಾಂಡಿಸ್, ಇಬ್ರಾಹೀಂ ಕೋಡಿಜಾಲ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಇತರರು ಉಪಸ್ಥಿತರಿದ್ದರು.

 


Spread the love