ಮಂಗಳೂರು: 35ನೇ ಸ್ವಚ್ಛ ಭಾರತಕ್ಕಾಗಿ ಸ್ವಚ್ಛತಾ ಅಭಿಯಾನ

Spread the love

ಮಂಗಳೂರು: ಭಾರತ ಸರ್ಕಾರದ ವಿಶೇಷ ಕೋರಿಕೆಯ ಮೇರೆಗೆ ಮಂಗಳೂರು ರಾಮಕೃಷ್ಣ ಮಿಷನ್ 40 ವಾರಗಳ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಕಳೆದ ಫೆಬ್ರವರಿ 1 ನೇ ತಾರಿಕಿನಂದು ಪ್ರಾರಂಭಿಸಿತು. ಅಂದಿನಿಂದ ಇಂದಿನವರೆಗೆ ಸುಮಾರು 34 ವಾರಗಳ ಕಾಲ ಸತತವಾಗಿ ಸಾವಿರಾರು ವಿದ್ಯಾರ್ಥಿಗಳು – ಯುವಕರು – ಭಕ್ತರು – ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರನ್ನು ಒಗ್ಗೂಡಿಸಿ ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತ ಬಂದಿರುವುದು, ಆಶ್ರಮದ ಈ ಉದಾತ್ತ ಯೋಚನೆ-ಯೋಜನೆಗೆ ಜನರು ಸ್ಪಂದಿಸುತ್ತಿರುವುದು ಇವು ಈ ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿ.

ಇದೀಗ 35ನೇ ವಾರಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸ್ವಚ್ಚ ಮಂಗಳೂರು ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂಬುದು ನಮ್ಮೆಲ್ಲರ ಇಚ್ಛೆ. ಆದುದರಿಂದ ಆಸಕ್ತರೆಲ್ಲರೂ ಜನವರಿ 17, ಭಾನುವಾರ ಬೆಳಿಗ್ಗೆ 7.15ಕ್ಕೆ ಮಾರ್ನಮಿಕಟ್ಟೆಯ ವೃತ್ತದ ಬಳಿ ನೆರೆದು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುತ್ತಿದ್ದೇವೆ. ರಾಮಕೃಷ್ಣ ಮಿಷನ್ನಿನ ಸಹಕಾರ್ಯದರ್ಶಿಗಳಾದ ಸ್ವಾಮಿ ಬಲಭದ್ರಾನಂದಜಿ, ರಾಮಕೃಷ್ಣ ಮಿಷನ್, ಕೊಲ್ಕತ್ತ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀಯುತ ವಿನಯ್ ಹೆಗ್ಡೆಯವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿರುವರು.

35ನೇ ಸ್ವಚ್ಛ ಮಂಗಳೂರು ಅಭಿಯಾನದ ಸಮಾರೋಪ ಸಮಾರಂಭವು ಮಂಗಳಾದೇವಿಯ ಬಳಿಯಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸುಮಾರು 10.30 ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲು ಕೇಂದ್ರ ಸರ್ಕಾರದ ಮಾನ್ಯ ನೀರಾವರಿ ಸಚಿವರಾದ ಸಾಧ್ವಿ ಉಮಾ ಭಾರತಿಯವರು ಒಪ್ಪಿರುತ್ತಾರೆ. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠ ಮತ್ತು ಮಿಷನ್‍ನ ಸಹ ಕಾರ್ಯದರ್ಶಿಗಳಾದ ಸ್ವಾಮಿ ಬಲಭದ್ರಾನಂದಜಿ, ದಕ್ಷಿಣ ಕನ್ನಡ ಲೋಕಸಭಾಕ್ಷೇತ್ರದ ಶಾಸಕರಾದ ಶ್ರೀಯುತ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಎಮ್. ಆರ್. ಪಿ. ಎಲ್ ನ ಆಡಳಿತ ನಿರ್ದೇಶಕರಾದ ಶ್ರೀಯುತ ಕುಮಾರ್ ಅವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರೆಲ್ಲರಿಗೂ ಮುಕ್ತ ಅವಕಾಶವಿದೆ.

ಈ ವಿವರವನ್ನು ತಮ್ಮ ಪತ್ರಿಕೆ/ಚಾನೆಲ್ ಗಳಲ್ಲಿ ಪ್ರಕಟಿಸಬೇಕಾಗಿ ವಿನಂತಿ ಮತ್ತು ಕಾರ್ಯಕ್ರಮಕ್ಕೆ ತಮ್ಮ ವರದಿಗಾರರನ್ನು ಕಳಿಸಿಕೊಡಬೇಕಾಗಿ ವಿನಂತಿ.


Spread the love