ಮಣ್ಣಪಳ್ಳ ಅಭಿವೃದ್ಧಿಗೆ 1.70 ಕೋಟಿ ರೂ ವೆಚ್ಚ- ಪ್ರಮೋದ್ ಮದ್ವರಾಜ್

Spread the love

ಮಣ್ಣಪಳ್ಳ ಅಭಿವೃದ್ಧಿಗೆ 1.70 ಕೋಟಿ ರೂ ವೆಚ್ಚ- ಪ್ರಮೋದ್ ಮದ್ವರಾಜ್

ಉಡುಪಿ: ಮಣ್ಣಪಳ್ಳ ದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಇದುವರೆಗೆ 1.70 ಕೋಟಿ ರೂ ಗಳನ್ನು ವೆಚ್ಚ ಮಾಡಲಾಗಿದೆ ಎಂದು ಎಂದು ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿದರು.

ಅವರು ಶನಿವಾರ, ಮಣ್ಣಪಳ್ಳದ ರೋಟರಿ ಸಭಾ ಭವನದಲ್ಲಿ , ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆ, ಮಣ್ಣಪಳ್ಳ ಅಭಿವೃದ್ದಿ ಸಮಿತಿ ಮತ್ತು ಉಡುಪಿ ನಿರ್ಮಿತಿ ಕೇಂದ್ರ ಇವರ ಆಶ್ರಯದಲ್ಲಿ , ಉಡುಪಿ ಪರ್ಬ ಪ್ರಯುಕ್ತ ಆಯೋಜಿಸಿರುವ ರಾಷ್ಟ್ರಮಟ್ಟದ ಶಿಲ್ಪಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಪರ್ಬದ ಪ್ರಯುಕ್ತ ನಡೆಯುತ್ತಿರುವ ಆಯೋಜಿಸಿರುವ ಪ್ರಥಮ ಕಾರ್ಯಕ್ರಮ ಇದಾಗಿದ್ದು, ಈ ಶಿಲ್ಪಕಲಾ ಶಿಬಿರದಲ್ಲಿ ದೇಶದ ವಿವಿಧ ರಾಜ್ಯಗಳ ಹೆಸರಾಂತ ಶಿಲ್ಪಿಗಳು ಭಾಗವಹಿಸುತ್ತಿದ್ದು, ತಮ್ಮ ಕಲಾ ಪ್ರೌಢಿಮೆ ಮೂಲಕ , ಇಲ್ಲಿ ಆಕರ್ಷಕ ಶಿಲ್ಪಗಳನ್ನು ನಿರ್ಮಾಣ ಮಾಡಲಿದ್ದಾರೆ, ಈ ಶಿಲ್ಪಿಗಳು ತಾವು ನಿರ್ಮಿಸಿದ ಶಿಲ್ಪಗಳನ್ನು ಇಲ್ಲಿಯೇ ಉಳಿಸುವುದರಿಂದ, ಈ ಆಕರ್ಷಕ ಶಿಲ್ಪಗಳಿಂದ ಮಣ್ಣಪಳ್ಳದ ಸೌಂದರ್ಯ ಇನ್ನಷ್ಟು ಹೆಚ್ಚಾಗಲಿದ್ದು, ಪ್ರವಾಸಿಗರಿಗೆ ಆಕರ್ಷಣೀಯವಾಗಲಿದೆ ಎಂದು ಸಚಿವರು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಈ ಶಿಲ್ಪಕಲಾ ಶಿಬಿರದಲ್ಲಿ ಹೆಸರಾಂತ ಶಿಲ್ಪಿಗಳ ಜೊತೆಗೆ , ಸ್ಥಳೀಯ ಪ್ರತಿಭೆಗಳಿಗೂ ಸಹ ಭಾಗವಹಿಸಲು ಅವಕಾಶ ನೀಡಿ, ಅವರನ್ನು ಉತ್ತೇಜಿಸುವಂತೆ ತಿಳಿಸಿದರು.

ವಿವಿಧ ರಾಜ್ಯಗಳಿಂದ ಆಗಮಿಸಿರುವ ಕಲಾವಿದರು 8 ದಿನಗಳ ಕಾಲ ಈ ಶಿಬಿರದಲ್ಲಿ ಭಾಗವಹಿಸಿ, ಅಕರ್ಷಕ ಶಿಲ್ಪಗಳನ್ನು ರಚಿಸಲಿದ್ದಾರೆ.

ಕಾರ್ಯಕ್ರಮದಲ್ಲಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳನಿ ಪ್ರದೀಪ್  ರಾವ್, ಶಿಲ್ಪಕಲಾ ಶಿಬಿರದ ಸಂಯೋಜಕ ಪುರುಷೋತ್ತಮ ಆಡ್ವೆ, ರವಿಕುಮಾರ್ ಕಾಶಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಜನಾರ್ಧನ್ ಸ್ವಾಗತಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.


Spread the love