ಮಾನವ ಸಂಪನ್ಮೂಲ ಸದ್ಬಳಕೆಗೆ ಕರೆ-ನಳಿನ್ ಕುಮಾರ್

Spread the love

ಮಾನವ ಸಂಪನ್ಮೂಲ ಸದ್ಬಳಕೆಗೆ ಕರೆ-ನಳಿನ್ ಕುಮಾರ್

ಮಂಗಳೂರು : ಇರುವುದೊಂದೇ ಭೂಮಿ; ಮನುಷ್ಯ ವಾಸಕ್ಕೆ ಯೋಗ್ಯವಾಗಿರುವ ಗ್ರಹವನ್ನು ರಕ್ಷಿಸುವ ಹೊಣೆ ಎಲ್ಲರದ್ದೂ ಹಾಗಾಗಿ ಜನಸಂಖ್ಯಾ ನಿಯಂತ್ರಣ ಹಾಗೂ ಸದ್ಬಳಕೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ತಿಳಿಸಿದರು.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಇವರ ಸಂಯುಕ್ತಾಶ್ರದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ-2018 ನ್ನು ಉದ್ಘಾಟಿಸಿ ಮಾತನಾಡಿ, “ಸಾರ್ಥಕತೆಯು ನಾಳೆಯ ಜೀವನಕ್ಕಾಗಿ ಕುಟುಂಬ ಯೋಜನೆಗಳ ಬಳಕೆ” ಈ ದ್ಯೇಯ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯು 1989 ರಿಂದ ವಿಶ್ವ ಜನಸಂಖ್ಯಾ ದಿನಾಚರಣೆಗೆ ಚಾಲನೆ ನೀಡಿದೆ. ಗಂಡು ಹೆಣ್ಣಿನ ಅನುಪಾತದಲ್ಲಿ ಏರುಪೇರಾಗುವುದನ್ನು ನಾವು ತಡೆಯಬೇಕಾಗಿದೆ. ಜನಸಂಖ್ಯಾ ಸ್ಪೋಟದಲ್ಲಿ ಚೀನಾ ದೇಶ ಮುಂದಿದೆಯಾದರೂ, ಮುಂದಿನ ದಿನದಲ್ಲಿ ನಮ್ಮ ದೇಶ ಮೊದಲನೆ ಸ್ಥಾನಕ್ಕೇರಬಹುದು. ಅದ್ದರಿಂದ ನಾವು ಜಾಗೃತರಾಗ ಬೇಕಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಹಾಗೂ ಉಡುಪಿ ಜಿಲ್ಲೆಗಳು ಜನಸಂಖ್ಯಾ ಸ್ಪೋಟದಲ್ಲಿ ನಿಯಂತ್ರಣದಲ್ಲಿವೆ. ಈ ಬಗ್ಗೆ ಇಂದಿನ ಯುವಕ, ಯುವತಿಯರಲ್ಲಿ ಜಾಗೃತಿ ಮೂಡಿಸ ಬೇಕಾಗಿದೆ ಎಂದರು.

ಭೌಗೋಳಿಕ ನೆಲೆಯಲ್ಲಿ ನಾವು ನಮ್ಮ ವಿಶ್ವದ ಭೂ ಪ್ರದೇಶವನ್ನು ನಾವು ಹೆಚ್ಚಿಸುವುದಕ್ಕೆ ಸಾದ್ಯವಿಲ್ಲಾ. ಆದರೇ ಜನಸಂಖ್ಯೆ ಸ್ಪೋಟವಾಗುತ್ತಿದೆ. ಇದರಿಂದ ಸಾಮಾಜಿಕ ಭದ್ರತೆ, ಬಡತನ, ವಸತಿ, ಮೂಲಭೂತ ಸೌಲಭ್ಯ, ಉದ್ಯೋಗ ಕಡಿಮೆಯಾಗುತ್ತಿದೆ. ಸಮಸ್ಯೆ ಹೆಚ್ಚಾಗುತ್ತಿದೆ. ಅದ್ದರಿಂದ ಜನಸಂಖ್ಯಾ ಸ್ಪೋಟದ ಕುರಿತು ಮನೆ ಮನೆಗೂ ಸಂದೇಶ ತಲುಪಿಸ ಬೇಕಾಗಿದೆ. ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ತಮ್ಮ ಪ್ರಾಸ್ತಾವಿಕದಲ್ಲಿ ತಿಳಿಸಿದರು.

ಈಗಾಗಲೇ ನಾವು 128 ಕೋಟಿ ಜನಸಂಖ್ಯೆಯನ್ನು ಮುಟ್ಟಿದ್ದೇವೆ. ಅದರೇ ಈಗಿರುವ ಜನಸಂಖ್ಯೆಯಿಂದ ನಮ್ಮ ಭಾರತ ದೇಶವನ್ನು ಸಂಪನ್ಮೂಲಗೊಳಿಸ ಬೇಕಾಗಿದೆ. ಸಂತಾನ ನಿಯಂತ್ರಣ ಶಸ್ತ್ರಕ್ರಿಯೆಯನ್ನು ಮಹಿಳೆಯರು ಮಾತ್ರ ಮಾಡಿಸಿ ಕೊಳ್ಳುತ್ತಿದ್ದಾರೆ. ಪುರುಷರು ಮುಂದೆ ಬರುತ್ತಿಲ್ಲ ಈ ಬಗ್ಗೆ ಪುರುಷರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್.ರವಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡುತ್ತಾ, ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ದುಡಿಯುತ್ತಿದ್ದಾರೆ. ಸಮಾನತೆ ಎಲ್ಲದರಲ್ಲೂ ಇರಬೇಕು; ಈ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕು ಎಂದ ಅವರು, ಆಶಾ ಕಾರ್ಯಕರ್ತೆಯರು ಈ ವಿಷಯವನ್ನು ಎಲ್ಲರಿಗೂ ಮನವರಿಕೆ ಮಾಡಬೇಕು ಎಂದರು.

ಸಮಾರಂಭದಲ್ಲಿ ಶ್ರೀದೇವಿ ಕಾಲೇಜು, ಆಶಾ ಕಾರ್ಯಕರ್ತರ ಸಂಘದಿಂದ ಜನಸಂಖ್ಯಾ ಸ್ಪೋಟದ ಕುರಿತು ನಾಟಕ ಪ್ರದರ್ಶಿಸಲಾಯಿತು. ಅತ್ಯುತ್ತಮ ನಾಟಕ ಪ್ರದರ್ಶಿಸಿದ ಶಾಲಾ ಕಾಲೇಜು ಹಾಗೂ ಸಂಘಗಳಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿಪೂರ್ವ ಕಾಲೇಜು, ಕಾರ್‍ಸ್ಟ್ರೀಟ್ ಪ್ರಾಂಶುಪಾಲ ರಾಜಕಿಶೋರ್ ಹೆಬ್ಬಾರ್ ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿದ್ದರು., ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಲೇಡಿಗೋಷನ್ ಜಂಟಿ ನಿರ್ದೇಶಕಿ ಡಾ.ದಮಯಂತಿ, ಡಾ. ದುರ್ಗಾಪ್ರಸಾದ್, ಡಾ ಸರಿತಾ, ಡಾ.ರಾಜೇಶ್, ನವೀನ್ ಕುಮಾರ್ ಹಾಗೂ ಎಲ್ಲಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿಕಂದರ್ ಪಾಷ ಸ್ವಾಗತಿಸಿದರು, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ವಂದಿಸಿದರು. ಜಯರಾಮ ಕಾರ್ಯಕ್ರಮ ನಿರೂಪಿಸಿದರು.


Spread the love